ಕಲಾಕೇಸರಿ ಉದಯ್ ಕುಮಾರ್ ಕನ್ನಡ ಚಲನಚಿತ್ರರಂಗದ ಅಪ್ರತಿಮ ಪ್ರತಿಭೆಗಳಲ್ಲಿ ಒಬ್ಬರು.ಉದಯ್ ಕುಮಾರ್ 1935ರ ಮಾರ್ಚ್ 16ರಂದು ಜನಿಸಿದರು. ಅವರ ತಂದೆ ಶ್ರೀನಿವಾಸ ಶಾಸ್ತ್ರಿಗಳು ಆನೇಕಲ್ಲಿನಲ್ಲಿ ಶಾನುಭೋಗರಾಗಿದ್ದರು. ಉದಯ್ ಕುಮಾರ್ ಅವರ ಮೂಲ ಹೆಸರು ಸೂರ್ಯನಾರಾಯಣ ಶಾಸ್ತ್ರಿ. ವ್ಯಾಯಾಮ ಶಿಕ್ಷಣ ನೀಡುತ್ತಿದ್ದ ಉದಯ್ ಕುಮಾರ್ ಆಕಸ್ಮಿಕವಾಗಿ ಗುಬ್ಬಿ ಕಂಪನಿಯ ಮೂಲಕ ರಂಗಭೂಮಿ ಸೇರಿ, ‘ಭಾಗ್ಯೋದಯ’ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದರು.‘ರತ್ನಗಿರಿ ರಹಸ್ಯ’ ಚಿತ್ರದ ಟಾರ್ಜಾನ್ ಮಾದರಿಯ ಪಾತ್ರ ಉದಯ್ ಕುಮಾರ್ ಅವರಿಗೆ ಅಪಾರ ಜನಪ್ರಿಯತೆ ತಂದಿತು. ಅಂದಿನ ದಿನಗಳಲ್ಲಿ ಕನ್ನಡ ಚಲನಚಿತ್ರರಂಗದಲ್ಲಿನ ಜನಪ್ರಿಯತೆಯ ಜೊತೆಗೆ ತಮಿಳು, ತೆಲುಗು ಮತ್ತು ಹಲವು ಹಿಂದಿ ಚಲನಚಿತ್ರಗಳಲ್ಲೂ ಅಭಿನಯಿಸಿ ಎಲ್ಲೆಡೆ ಜನಪ್ರಿಯರಾಗಿದ್ದರು. ಅವರು ನಟಿಸಿದ್ದ ಚಿತ್ರಗಳ ಸಂಖ್ಯೆ ಇನ್ನೂರಕ್ಕೂ ಹೆಚ್ಚಿನದು. ಭಾಗ್ಯೋದಯ, ರತ್ನಗಿರಿ ರಹಸ್ಯ, ಚಂದವಳ್ಳಿಯ ತೋಟ, ವೀರಕೇಸರಿ, ಬೆಟ್ಟದ ಹುಲಿ, ಚಂದ್ರಕುಮಾರ, ವಿಜಯನಗರದ ವೀರಪುತ್ರ, ಶ್ರೀರಾಮಾಂಜನೇಯ ಯುದ್ಧ, ಸರ್ವಜ್ಞ, ಸ್ಕೂಲ್ ಮಾಸ್ಟರ್, ಮಿಸ್ ಲೀಲಾವತಿ, ಮಧುಮಾಲತಿ, ಸತ್ಯ ಹರಿಶ್ಚಂದ್ರ, ತ್ರಿವೇಣಿ, ಕಲಾವತಿ, ಹೇಮಾವತಿ ಮುಂತಾದವು ಅವರ ಕುರಿತಾದ ನೆನಪಿನಲ್ಲಿ ಮೂಡುವ ಕೆಲವು ಚಿತ್ರಗಳು.ಚಲನಚಿತ್ರರಂಗದ ಏಳು ಬೀಳುಗಳಲ್ಲಿ ಪ್ರಖ್ಯಾತ ನಾಯಕನಟ, ಪೋಷಕನಟ, ಖಳನಟ ಹೀಗೆ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ ಉದಯ್ ಕುಮಾರ್ ತಮ್ಮ ಅಭಿನಯದಲ್ಲಿದ್ದ ತನ್ಮಯತೆಯಿಂದ ಚಿತ್ರಪ್ರೇಮಿಗಳ ಕಣ್ಮಣಿಯಾಗಿದ್ದರು. ಅದರಲ್ಲೂ ಬಿರುಸು ಮಾತಿನ ನಿಷ್ಟುರವಾದಿ ಪಾತ್ರಗಳಿಗೆ ಅವರಂತಹ ಕಲಾವಿದ ಅಪರೂಪ ಎಂದರೂ ಸರಿಯೇ. ವಿಶ್ವಾಮಿತ್ರನ ಪಾತ್ರಧಾರಿಯಾಗಿ ಅವರು ನಟಿಸಿದ್ದ ‘ಸತ್ಯ ಹರಿಶ್ಚಂದ್ರ’ದ ಪಾತ್ರ ಅವಿಸ್ಮರಣೀಯವಾದದ್ದು. ಸಂಧ್ಯಾರಾಗದಲ್ಲಿ ರಾಜ್ ಕುಮಾರ್ ಅಣ್ಣನಾಗಿ ನಿಷ್ಠುರಗುಣದ ವ್ಯಕ್ತಿಯಾಗಿ ನಟಿಸಿದ ಅವರ ಪಾತ್ರ ಕೂಡ ಮನಸ್ಸಿನಲ್ಲಿ ಉಳಿಯುವಂತದ್ದು. ರಾಮಾಂಜನೇಯ ಯುದ್ಧ ಚಿತ್ರದಲ್ಲಿ ಹನುಮನ ಪ್ರಾಣ ಹಾಡಿನಲ್ಲಿ ಚಿತ್ರಣ ಮುಗಿದ ಎಷ್ಟೋ ಸಮಯವಾದರೂ ಅವರು ತಮ್ಮ ಪಾತ್ರದಲ್ಲಿ ಪೂರ್ಣ ತನ್ಮಯರಾಗಿಬಿಟ್ಟಿದ್ದರೆಂದು ಅಂದಿನ ದಿನಗಳಲ್ಲಿ ಡಾ. ರಾಜ್ ಕುಮಾರ್ ಅವರು ಸ್ಮರಿಸುತ್ತಿದ್ದರು.
ಮುಂದೆ ಹೇಮಾವತಿ ಚಿತ್ರದಲ್ಲಿನ ಪ್ರಧಾನ ಪಾತ್ರ ಮತ್ತು ಬಿಳಿ ಹೆಂಡ್ತಿ ಚಿತ್ರದ ಸಣ್ಣ ಪೋಷಕ ಪಾತ್ರಗಳಲ್ಲಿ ಅವರು ನೀಡಿದ ಅಮೋಘ ಅಭಿನಯ ಅಮರವಾದದ್ದು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: