ಕಲಬುರಗಿ: ಇಲ್ಲಿನ ಹನುಮಾನ್ ನಗರದ ಸಮುದಾಯ ಭವನದ ಬಳಿ ಮಾರಕಾಸ್ತ್ರಗಳಿಂದ ಯುವಕನನ್ನು ಕೊಲೆ ಮಾಡಿದ ಆರೋಪ ಸಾಬೀತಾಗಿದ್ದರಿಂದ ಇಲ್ಲಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಮೂವರಿಗೆ ಜೀವಾವಧಿ ಶಿಕ್ಷೆ ಹಾಗೂ ಒಟ್ಟು ₹58,500 ದಂಡ ವಿಧಿಸಿ ಆದೇಶ ಹೊರಡಿಸಿದೆ.ತಾರಫೈಲ್ ವಿಶಾಲ ನಗರ ನಿವಾಸಿ ರಾಮಚಂದ್ರ ಅಲಿಯಾಸ್ ದಾಬಾ ಪಪ್ಯಾ ಟಕ್ಕಳಕಿ (20), ಸಾಗರ ಬೇಡರ್ (20) ಹಾಗೂ ಹನುಮಾನ್ ನಗರದ ನಿವಾಸಿ ಅರ್ಜುನ ರಾಠೋಡ (19) ಶಿಕ್ಷೆಗೆ ಗುರಿಯಾದ ಅಪರಾಧಿಗಳು.2019ರ ಜೂನ್ 16ರಂದು ರಾತ್ರಿ ಹಳೇ ಜೇವರ್ಗಿ ರಸ್ತೆಯ ಹನುಮಾನ್ ನಗರದ ಬಳಿ ಬೀದಿ ದೀಪದ ಬೆಳಕಿನಲ್ಲಿ ಮಲಗಿಕೊಂಡಿದ್ದ ಸಂದರ್ಭದಲ್ಲಿ ಹಳೇ ದ್ವೇಷದ ಸೇಡಿನಿಂದ ಮೇಲೇಳದಂತೆ ಒತ್ತಿ ಹಿಡಿದು ಚಾಕುವಿನಿಂದ ಹಣೆಗೆ ಹೊಡೆದು, ಕೊಡಲಿ ಹಾಗೂ ತಲವಾರ್ನಿಂದ ರಾಹುಲ್ ಕುತ್ತಿಗೆಗೆ ಹೊಡೆದು ಕೊಲೆ ಮಾಡಿದ್ದರು.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಸ್ಟೇಶನ್ ಬಜಾರ್ ಠಾಣೆಯ ಅಂದಿನ ಪೊಲೀಸ್ ಇನ್ಸ್ಪೆಕ್ಟರ್ ರಮೇಶ ಕಾಂಬಳೆ ಅವರು ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಜಗದೀಶ ವಿ.ಎನ್. ಅವರು ಜೀವಾವಧಿ ಶಿಕ್ಷೆ ವಿಧಿಸಿದರು. ₹58,500 ದಂಡದ ಹಣದಲ್ಲಿ ಮೃತನ ತಾಯಿಗೆ ₹35 ಸಾವಿರ ಹಾಗೂ ಗಾಯಾಳು ಸಾಕ್ಷಿಗೆ ₹15 ಸಾವಿರ ನೀಡಲು ಆದೇಶದಲ್ಲಿ ತಿಳಿಸಿದ್ದಾರೆ. ಸರ್ಕಾರದ ಪರವಾಗಿ ಹೆಚ್ಚುವರಿ ಸರ್ಕಾರಿ ಅಭಿಯೋಜಕ ಗುರುಲಿಂಗಪ್ಪ ಶ್ರೀಮಂತ ತೇಲಿ ವಾದ ಮಂಡಿಸಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada