ಇಂದು ಕನ್ನಡ ಚಲನಚಿತ್ರದ ದಿವಂಗತ ಹಿರಿಯ ನಟ, ನಿರ್ಮಾಪಕ ಕಾಶೀನಾಥ್ ಅವರ 69ನೇ ಜನ್ಮದಿನ. ಈ ಹಿನ್ನೆಲೆ ಅವರ ಶಿಷ್ಯಂದಿರಾದ ನಟ ಉಪೇಂದ್ರ ಮತ್ತು ನಿರ್ದೇಶಕ ತರುಣ್ ಸುಧೀರ್ ಸೇರಿದಂತೆ ಚಿತ್ರರಂಗದ ಗಣ್ಯರು ಕಾಶಿನಾಥರನ್ನ ಸ್ಮರಿಸಿದ್ದಾರೆ. ಕನ್ನಡದಲ್ಲಿ ಮೇರು ನಟನಾಗಿ, ನಿರ್ದೇಶಕನಾಗಿ ಚಿತ್ರರಂಗದಲ್ಲಿ ಹಲವಾರು ಸಾಧನೆಗಳನ್ನು ಮಾಡಿದ ಅದ್ಭುತ ಪ್ರತಿಭೆ ನಮ್ಮ ಜೊತೆಗಿರದಿದ್ದರೂ ಅವರ ನೆನಪುಗಳು ಅಜರಾಮರ.
ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನೆಬ್ಬಿಸಿದ್ದ ಕಾಶಿನಾಥ್ ಅವರು ನಟನೆ, ನಿರ್ದೇಶನ, ಸಂಗೀತ ನಿರ್ದೇಶನ ಹಾಗೂ ಚಿತ್ರ ನಿರ್ಮಾಣದಲ್ಲಿ ತಮ್ಮದೇ ಆದ ವಿಭಿನ್ನತೆಯಿಂದ ಖ್ಯಾತ ಪಡೆದಿದ್ದವರು. ಕನ್ನಡ ಚಿತ್ರರಂಗದಲ್ಲಿ ಹಲವಾರು ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿಕೊಟ್ಟ ಮಹಾನ್ ದಿಗ್ಗಜ. 1976 ರಲ್ಲಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಹಲವಾರು ಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿ, ನಿರ್ಮಾಣವನ್ನು ಸಹ ಮಾಡಿ ಅಭಿಮಾನಿಗಳಲ್ಲಿ ಮನದಲ್ಲಿ ನೆಲಿಸಿದ್ದವರು. ಇವರ ನಟನೆಯ ಕೊನೆಯ ಚಿತ್ರ ತರುಣ್ ಸುಧೀರ್ ನಿರ್ದೇಶನದ ಚೌಕ. ನಮ್ಮೆಲ್ಲರಿನ್ನು ಈ ಚಿತ್ರದ ಮೂಲಕ ಕೊನೆಯದಾಗಿ ನಕ್ಕು ನಗಿಸಿ, ಮನರಂಜನೆಯನ್ನು ನೀಡಿ ಕಣ್ಮರೆಯಾದ್ರು. ನಮ್ಮೊಂದಿಗೆ ಇಂದು ಕಾಶಿನಾಥ್ ಇಲ್ಲದಿರಬಹುದು, ಆದರೆ ಸಾಧನೆ ಮತ್ತು ನೆನಪುಗಳು ಇಂದಿಗೂ ಅಮರ.