ಕೈವಾರ ರಾಜಾರಾವ್

ಕೈವಾರ ರಾಜಾರಾವ್ ನಾಟಕಕಾರರಾಗಿ ದೊಡ್ಡ ಹೆಸರು. ರಂಗಭೂಮಿಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದವರಲ್ಲಿ ಒಬ್ಬರು. ಗಂಟೆಗಟ್ಟಳೆ ಕುಳಿತು ನೋಡಬೇಕಾದ ಸ್ಥಳದಲ್ಲಿ ಒಂದು-ಒಂದುವರೆ ಗಂಟೆಯ ಸಾಮಾಜಿಕ ನಾಟಕಗಳು ಆಕ್ರಮಿಸತೊಡಗಿದಾಗ 1940-50ರ ದಶಕದಲ್ಲಿ ಕೈಲಾಸಂ, ಕೆ. ಗುಂಡಣ್ಣ, ಕೈವಾರ ರಾಜಾರಾಯರು ಮುಂತಾದವರುಗಳು ಸಾಮಾಜಿಕ ನಾಟಕಗಳ ರಚನೆಗೆ ಕೈಹಾಕಿದರು.
ರಾಜಾರಾಯರು ಹುಟ್ಟಿದ್ದು 1912ರ ಫೆಬ್ರವರಿ 29ರಂದು ಜನಿಸಿದರು. ತಂದೆ ಕೈವಾರ ರಾಮಚಂದ್ರರಾವ್‌. ತಾಯಿ ಸುಂದರಾಬಾಯಿ. ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಬಿ.ಎ. ಪದವಿ ಮತ್ತು ಶೀಘ್ರಲಿಪಿಯಲ್ಲಿ ಕರ್ನಾಟಕಕ್ಕೆ ಎರಡನೆಯವರಾಗಿ (ಮೊದಲನೆಯವರು ಕಾದಂಬರಿಕಾರ ಮ.ನ. ಮೂರ್ತಿ) ಸಾಧನೆ ಮಾಡಿದರು.
ರಾಜಾರಾಯರು ಉದ್ಯೋಗ ಪ್ರಾರಂಭಿಸಿದ್ದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ 1934ರಲ್ಲಿ. ಆಗ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿದ್ದವರು ಡಿ.ವಿ.ಜಿ. ಯವರು. ಡಿ.ವಿ.ಜಿ., ಎ.ಆರ್‌.ಕೃ., ವಿ.ಸೀ., ಸಿ.ಕೆ. ವೆಂಕಟರಾಮಯ್ಯ, ಎಸ್‌.ವಿ. ರಂಗಣ್ನ, ಎಂ.ವಿ. ಸೀತಾರಾಮಯ್ಯ ಇವರುಗಳ ಮಧ್ಯೆ ವ್ಯವಹರಿಸಬೇಕಾಗಿ ಬಂದಾಗ ರಾಜಾರಾಯರಿಗೂ ಸಾಹಿತ್ಯದಲ್ಲಿ ಆಸ್ಥೆ ಬೆಳೆಯಿತು.
ಮುಂದೆ ರಾಜಾರಾವ್ ಅವರಿಗೆ ಖಾಯಂ ಉದ್ಯೋಗ ಮೈಸೂರು ರಾಜ್ಯ ವಿದ್ಯುತ್‌ ಇಲಾಖೆಯಲ್ಲಿ ದೊರೆಯಿತು. ಇಲಾಖಾ ಪರೀಕ್ಷೆಗಳಲ್ಲೆಲ್ಲಾ ಉತ್ತೀರ್ಣರಾಗಿ ಭಡ್ತಿ ಪಡೆದು ಲೆಕ್ಕಪತ್ರಾಧಿಕಾರಿಯಾಗಿ 1967ರಲ್ಲಿ ನಿವೃತ್ತರಾದರು. ಪ್ರೊ. ಜಿ. ವೆಂಕಟಸುಬ್ಬಯ್ಯನವರು (1964-67) ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಾಜಾರಾಯರನ್ನು ವ್ಯವಸ್ಥಾಪಕರನ್ನಾಗಿ ನೇಮಿಸಿಕೊಂಡರು. ವೆಂಕಟಸುಬ್ಬಯ್ಯನವರ ನಂತರ ಅಧ್ಯಕ್ಷರಾಗಿ ಬಂದ ಜಿ. ನಾರಾಯಣ, ಹಂಪನಾಗರಾಜಯ್ಯರವರ ಅಧ್ಯಕ್ಷತೆ ಅವಧಿಯಲ್ಲೂ ಕಾರ್ಯನಿರ್ವಹಿಸಿ (1980) ರಾಜೀನಾಮೆ ನೀಡಿದರು. ನಿಟ್ಟೂರು ಶ್ರೀನಿವಾಸರಾಯರ ನೇತೃತ್ವದಲ್ಲಿ ನಡೆಯುತ್ತಿದ ಗೋಖಲೆ ಸಾರ್ವಜನಿಕ ಸಂಸ್ಥೆಯಲ್ಲಿ ಗೌರವ ಸಹಾಯಕರಾಗಿ ಜೀವನದ ಕೊನೆಯವರೆಗೂ ದುಡಿದರು.
ರಾಜಾರಾಯರು ಸಣ್ಣಕತೆ, ಹಾಸ್ಯಲೇಖನಗಳು, ವಿಮರ್ಶೆ, ನಾಟಕ ಮುಂತಾದವುಗಳನ್ನು ಬರೆದು ಬಹುಮಾನಗಳನ್ನೂ ಪಡೆದಿದ್ದರೂ ಇವರ ಹೆಚ್ಚಿನ ಒಲವು ಮೂಡಿದ್ದು ನಾಟಕ ರಚನೆಯತ್ತ. ಸಮಾಜದ ಓರೆಕೋರೆಗಳನ್ನು ತಿದ್ದುವ, ಮೂಢನಂಬಿಕೆಗಳಿಗೆ ಬಲಿಬೀಳದಂತೆ ಎಚ್ಚರಿಸುವ, ಸಂಸಾರದಲ್ಲಿ ಬಿರುಕು ಮೂಡಿದಾಗ ಸಾಮರಸ್ಯ ಮೂಡಿಸಲು ಬೆಸೆಯುವ, ಅರ್ಪಾರ್ಥಕ್ಕೆಡೆಕೊಟ್ಟಾಗ ನಿಜಗತಿಯಲ್ಲಿ ಸಾಗುವ, ಮೋಸಮಾಡಲು ಬಂದವನಿಗೆ ಸರಿಯಾಗಿ ಬುದ್ಧಿಕಲಿಸುವ, ಸಂಸಾರದಲ್ಲಿ ಪ್ರಮಾದವಾದಾಗ ಅತಿ ಚಾಣಾಕ್ಷತನದಿಂದ ನಿಭಾಯಿಸುವ ವಸ್ತುಗಳನ್ನೊಳಗೊಂಡಂತೆ ಬುಡುಬುಡಿಕೆ, ಪತ್ರಪ್ರಮಾದ, ವಧುಪರೀಕ್ಷೆ, ಗಂಡನ ಜುಲ್ಮಾನೆ, ಪ್ರೇಮ ಪರೀಕ್ಷೆ, ಯಾರ ಪ್ರೀತಿ ಹೆಚ್ಚು?, ಹಸ್ಬೆಂಡ್‌ ಸಪ್ಲೈಡ್‌ ಅಥವಾ ಗಂಡನಿಗಾಗಿ ಗುದ್ದಾಟ, ಅಪ್‌ಟು-ಡೇಟ್‌ ಅಮ್ಮಯ್ಯ ಮುಂತಾದ 60ಕ್ಕೂ ಹೆಚ್ಚು ನಾಟಕಗಳನ್ನು ಬರೆದರು. ರಾಜಕೀಯ ವ್ಯಕ್ತಿಗಳ ಮನೆಯವರ ಧೋರಣೆಗಳನ್ನು ಎತ್ತಿ ತೋರಿಸುವ ‘ಮಂತ್ರಿ ಹೆಂಡತಿ ಲೆಕ್ಕ’, ಮಹಿಳೆಯರಿಗೆ ನಲವತ್ತು ವರುಷಗಳಾದ ನಂತರ ತಮ್ಮ ದೇಹವಿನ್ಯಾಸದ ಬಗ್ಗೆ ಉಂಟಾಗುವ ಚಿಂತೆಯ ಬಗ್ಗೆ ಬರೆದ ‘ನಲವತ್ತರ ನಾಡಿ’, ಬೆಲೆ ಏರಿಕೆಯ ಪರಿಸ್ಥಿತಿಯಲ್ಲಿ ಮಧ್ಯಮವರ್ಗದ ಕುಟುಂಬ ಪಡುವ ಪಡಿಪಾಟಲಿನ ‘ತಿಂಗಳ ಕೊನೆ’, ಮುದವೆಗಿರುವ ಗಂಡು ತನ್ನ ಪತ್ನಿಯನ್ನು ಆರಿಸಿಕೊಳ್ಳುವ ವಿಚಾರ ಬಂದಾಗ ವಿಚಾರ ವಿನಿಮಯದ ಅಗತ್ಯತೆಯನ್ನು ಸಾರುವ ‘ಯಾರಿವನು? ವಾಚಾಳಿ ಹೆಂಡತಿಯ ಕೈಗೆ ಸಿಕ್ಕಿದ ಸ್ಥಿತಪ್ರಜ್ಞ ಗಂಡನ ಬಗ್ಗೆ ಕರುಣೆ ಉಕ್ಕಿಸುವ ‘ಬುಡುಬುಡಿಕೆ’ ಅಹಂಕಾರದಿಂದ ಮೆರೆಯುವ ಹುಡುಗಿಗೆ, ಹುಡುಗ ಹೇಗೆ ಬುದ್ಧಿಕಲಿಸಬಹುದೆಂಬುದನ್ನು ತೋರಿಸುವ ‘ಅಪ್‌-ಟು-ಡೇಟ್‌ ಅಮ್ಮಯ್ಯ’, ವರಪೂಜೆಯ ಸಮಯದಲ್ಲಿ ವೃಥಾಗೊಂದಲಕ್ಕಿಡಾಗಿ, ಹುಡುಗಿಯ ಬಗ್ಗೆ ತಿಳಿದುಕೊಳ್ಳಲೆತ್ನಿಸುವ ‘ವಧು ಪರೀಕ್ಷೆ’- ಹೀಗೆ ವಿಡಂಬನೆ, ನವಿರಾದ ಹಾಸ್ಯದಿಂದ ಕೂಡಿದ ಅರ್ಧ-ಮುಕ್ಕಾಲು ಗಂಟೆಯ ಅವಧಿಯಲ್ಲಿ ಸಾದರಪಡಿಸಬಹುದಾದ ಅನೇಕ ನಾಟಕಗಳನ್ನು ಬರೆದರು.
ನಾಟಕಕಾರ ಕೈವಾರ ರಾಜಾರಾಯರು 1993ರ ಜನವರಿ 3ರಂದು ಈ ಲೋಕವನ್ನಗಲಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗುರು ದೇಶಪಾಂಡೆ ಅವರಿಂದ "ಸೀತಮ್ಮನ ಮಗ" ನ ಹಾಡುಗಳ ಬಿಡುಗಡೆ.

Wed Mar 2 , 2022
  ಪತ್ರಕರ್ತ ಯತಿರಾಜ್ ನಿರ್ದೇಶಿಸಿ, ನಟಿಸಿರುವ “ಸೀತಮ್ಮನ ಮಗ” ಚಿತ್ರದ ಹಾಡುಗಳನ್ನು ನಿರ್ದೇಶಕ-ನಿರ್ಮಾಪಕ ಗುರು ದೇಶಪಾಂಡೆ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದರು. ಚಿತ್ರದ ಚಿತ್ರೀಕರಣವನ್ನು ಚಿತ್ರದುರ್ಗದ ಬಳಿಯ ಪಂಡರಹಳ್ಳಿಯಲ್ಲಿ ಮಾಡಿದ್ದೇವೆ. ಸದ್ಯ ಸಂಗೀತ ನಿರ್ದೇಶಕ ವಿನು ಮನಸು ಹಿನ್ನೆಲೆ ಸಂಗೀತ ಅಳವಡಿಸುತ್ತಿದ್ದಾರೆ. ಸದ್ಯದಲ್ಲೇ ನಮ್ಮ ಚಿತ್ರ ತೆರೆಗೆ ಬರಲು ಸಿದ್ದವಾಗಲಿದೆ. ಎಲ್ಲಾ ಕಲಾವಿದರು ಅದ್ಭುತವಾಗಿ ನಟಿಸಿದ್ದಾರೆ. ತಂತ್ರಜ್ಞರ ಕೈ ಚಳಕವೂ ಚೆನ್ನಾಗಿದೆ. ಎರಡು ಹಾಡುಗಳನ್ನು ಮಾನಸ ಹೊಳ್ಳ ಹಾಗೂ […]

Advertisement

Wordpress Social Share Plugin powered by Ultimatelysocial