ಮೈಸೂರು: ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಗೊರವನಹಳ್ಳಿಯಲ್ಲಿ ಮತ್ತೆ ಚಿರತೆ ದಾಳಿ ಮುಂದುವರೆದಿದೆ. ನರಭಕ್ಷಕ ಚಿರತೆಯೊಂದು ಕಬ್ಬಿನ ಗದ್ದೆ ಕೆಲಸದಲ್ಲಿ ತೊಡಗಿದ್ದಂತ ರೈತನ ಮೇಲೆ ದಾಳಿ ನಡೆಸಿರೋದಾಗಿ ಇಂದು ತಿಳಿದು ಬಂದಿದೆ.ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನಲ್ಲಿ ಈಗಾಗಲೇ ಹಲವು ಬಾರಿ ಜನರ ಮೇಲೆ ಚಿರತೆ ದಾಳಿ ನಡೆಸಿತ್ತು. ಇಂದು ಕೂಡ ಚಿರತೆ ದಾಳಿ ಮುಂದುವರೆದಿದೆ. ಗೊರವನಹಳ್ಳಿಯಲ್ಲಿ ಕಬ್ಬಿನ ಗದ್ದೆಯ ತರಗಿಗೆ ಬೆಂಕಿಯಿಡುವ ಕೆಲಸದಲ್ಲಿ ರೈತ ನಿಂಗೇಗೌಡ ತೊಡಗಿದ್ದರು. ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ.ಚಿರತೆ ದಾಳಿಯ ವೇಳೆಯಲ್ಲಿ ಕೈಯಲ್ಲಿದ್ದಂತ ಕುಡುಗೋಲಿನಿಂದ ರೈತ ಪ್ರತಿದಾಳಿ ನಡೆಸಿದ್ದಾನೆ. ಈ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಚಿರತೆ ದಾಳಿಯಿಂದ ಗಾಯಗೊಂಡಿರುವಂತ ರೈತ ನಿಂಗೇಗೌಡನನ್ನು ಬನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ವಿಷಯ ತಿಳಿದು ಘಟನಾ ಸ್ಥಳಕ್ಕೆ ಆಗಮಿಸಿದಂತ ಆರಣ್ಯ ಇಲಾಖೆ ಸಿಬ್ಬಂದಿಗಳ ಪರಿಶೀಲನೆ ನಡೆಸಿದ್ದಾರೆ.