ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಗಲಿದ ಬಳಿಕ ಮೇಘನಾ ರಾಜ್ ಹೊಸ ಬದುಕು ಹುಡುಕುತ್ತಿದ್ದಾರೆ. ನೋವನ್ನೆಲ್ಲಾ ಮರೆತು ಹೊಸ ಜೀವನ ನಡೆಸಲು ಮುಂದಾಗಿದ್ದಾರೆ. ಇದು ಅವರ ಹಿತೈಶಿಗಳ ಆಸೆ ಕೂಡ ಹೌದು. ಕಳೆದ ಎರಡು-ಮೂರು ವರ್ಷಗಳಿಂದ ಮೇಘನಾ ರಾಜ್ ಮುಂದಿನ ನಡೆಯೇನು?
ಮುಂದೆ ಏನು ಮಾಡುತ್ತಾರೆ? ಅನ್ನೋದನ್ನು ತಿಳಿಯಲು ಎದುರು ನೋಡುತ್ತಿದ್ದರು.
ಅದಕ್ಕೆ ಸರಿಯಾಗಿ ಮೇಘನಾ ರಾಜ್ ಕೆಲವು ಗಂಟೆಗಳ ಹಿಂದಷ್ಟೇ “ನನಗೆ ಕೇಳಲಾಗುತ್ತಿರುವ ಪ್ರಶ್ನೆಗೆ ಭಾನುವಾರ ಉತ್ತರ ಕೊಡುತ್ತೇನೆ” ಎಂದು ಹೇಳಿದ್ದರು. ಅದಕ್ಕೆ ತಕ್ಕಂತೆ ಕೊನೆಗೂ ಮೇಘನಾ ರಾಜ್ ಉತ್ತರ ಕೊಟ್ಟಿದ್ದಾರೆ.
ಹೌದು, ಮೇಘನಾ ರಾಜ್ ಮುಂದೆ ಅವರ ಅಭಿಮಾನಿಗಳು ಹಲವು ಪ್ರಶ್ನೆಗಳನ್ನು ಇಟ್ಟಿದ್ದರು. ಅವರಿಗೆ ಅತೀ ಹೆಚ್ಚು ಬಾರಿ ಕೇಳಲಾದ ಪ್ರಶ್ನೆ ಎರಡನೇ ಮದುವೆ ಯಾವಾಗ ಆಗುತ್ತೀರಾ? ಹೊಸ ಸಿನಿಮಾ ಯಾವಾಗ ಅನೌನ್ಸ್ ಮಾಡುತ್ತೀರಾ? ನಿಮ್ಮ ಮುಂದಿನ ಸಿನಿಮಾ ಟೈಟಲ್ ಏನು? ಈ ಪ್ರಶ್ನೆಗಳಲ್ಲಿ ಯಾವುದಕ್ಕೆ ಉತ್ತರ ಕೊಡುತ್ತಾರೆ ಅನ್ನೋ ಕುತೂಹಲಕ್ಕೆ ಈಗ ತೆರೆಬಿದ್ದಿದೆ.
ಮೇಘನಾ ರಾಜ್ ಪೋಸ್ಟ್ ಮೇಲೆ ಕುತೂಹಲ
ಮೇಘನಾ ರಾಜ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುತ್ತಾರೆ. ತಮ್ಮ ಅಭಿಮಾನಿಗಳೊಂದಿಗೆ, ಹಿತೈಶಿಗಳನ್ನು ಈ ಮಾಧ್ಯಮಗಳಿಂದಲೇ ಹೆಚ್ಚು ಸಂಪರ್ಕ ಮಾಡುತ್ತಾರೆ. ಕೆಲವೇ ಗಂಟೆಗಳ ಹಿಂದೆನೂ ಒಂದು ಪೋಸ್ಟ್ ಮಾಡಿದ್ದರು. ಅದು ನೆಟ್ಟಿಗರ ಕುತೂಹಲವನ್ನು ದುಪ್ಪಟ್ಟು ಮಾಡಿತ್ತು. ಅಷ್ಟಕ್ಕೂ ಆ ಪೋಸ್ಟ್ ಹೀಗಿತ್ತು.” 2020.. ನನ್ನ ಬದುಕು ಬದಲಾದ ಭಾನುವಾರ ಅದು. ಅಂದಿನಿಂದ ನನಗೆ ಆ ಒಂದು ಕೇಳಲೇಬೇಕಾದ ಪ್ರಶ್ನೆಯೊಂದು ಕೇಳುತ್ತಿದ್ದರು. ಇದೇ ಭಾನುವಾರ (ಫೆಬ್ರವರಿ 19) ಆ ಪ್ರಶ್ನೆ ಉತ್ತರ ಕೊಡಲು ನಿರ್ಧರಿಸಿದ್ದೇನೆ.” ಎಂದು ಮೇಘನಾ ರಾಜ್ ಪೋಸ್ಟ್ ಮಾಡಿದ್ದರು. ಕೊನೆಗೂ ಅಂದುಕೊಂಡಂತೆ ಉತ್ತರ ಕೊಟ್ಟಿದ್ದಾರೆ.
ಮೇಘನಾ ಮುಂದಿದ್ದ ಆ ಪ್ರಶ್ನೆ ಯಾವುದು?
ಮೇಘನಾ ರಾಜ್ ಮತ್ತೆ ಕಮ್ಬ್ಯಾಕ್ ಮಾಡಿರುವ ಹೊಸ ಸಿನಿಮಾ ಟೈಟಲ್ ಅನ್ನು ಅನೌನ್ಸ್ ಮಾಡಿದ್ದಾರೆ. ಅಂದ್ಹಾಗೆ ಸಿನಿಮಾದ ಹೆಸರು ‘ತತ್ಸಮ ತದ್ಬವ’. ಅಂದ್ಹಾಗೆ ಈ ಸಿನಿಮಾ ಕನ್ನಡ ಹಾಗೂ ಮಲಯಾಳಂ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಬ್ಬರ ಆತ್ಮೀಯ ಗೆಳೆಯ ಪನ್ನಗಾಭರಣ ಹಾಗೂ ಸ್ನೇಹಿತರು ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಭಯ ಬಿಡುವುದೇ ಏಕೈಕ ದಾರಿ
ವಿಶಾಲ್ ಆತ್ರೇಯ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ವರ್ಷ ಚಿರಂಜೀವಿ ಸರ್ಜಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಈ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಆಗ ಟೈಟಲ್ ಬಗ್ಗೆ ಮಾತ್ರ ಗುಟ್ಟುಬಿಟ್ಟುಕೊಟ್ಟಿರಲಿಲ್ಲ. ಈಗ ಮಹಾಶಿವರಾತ್ರಿಯ ಈ ಸಂದರ್ಭದಲ್ಲಿ ಟೈಟಲ್ ಅನೌನ್ಸ್ ಮಾಡಿದ್ದಾರೆ. ಸದ್ಯ ಟೈಟಲ್ ಬಗ್ಗೆ ಕುತೂಹಲ ಮೂಡಿಸಿದ್ದು, ” ಭಯ ನಿಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಂಡಾಗ, ಭಯವಿಲ್ಲದ ಹೊರಬರುವುದೇ ನಿಮಗೆ ಉಳಿದಿರುವ ದಾರಿ” ಎಂದು ಪೋಸ್ಟರ್ ಶೇರ್ ಮಾಡಿ, ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada