ಹೈದರಾಬಾದ್: ತೀವ್ರ ಹೃದಯಾಘಾತದಿಂದ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಟಾಲಿವುಡ್ ನಟ ನಂದಮೂರಿ ತಾರಕರತ್ನ (40) ನಿನ್ನೆ ರಾತ್ರಿ ನಿಧನರಾಗಿದ್ದರು. ಸದ್ಯ ಅವರ ಪಾರ್ಥಿವ ಶರೀರವನ್ನು ಹೈದರಾಬಾದ್ನ ಮೊಕಿಲದಲ್ಲಿನ ತಾರಕರತ್ನ ನಿವಾಸಕ್ಕೆ ರವಾನೆ ಮಾಡಲಾಗಿದೆ.
ಇವತ್ತು ದಿನ ಪೂರ್ತಿ ಅವರ ಕುಟುಂಬಸ್ಥರು, ಬಂಧುಗಳು ಹಾಗೂ ಆಪ್ತ ಸ್ನೇಹಿತರು ಅಂತಿಮ ದರ್ಶನವನ್ನು ಪಡೆಯಲಿದ್ದಾರೆ. ಟಾಲಿವುಡ್ ಚಿತ್ರರಂಗದ ಮೇರು ನಟರು ತಾರಕರತ್ನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
ತಾರಕರತ್ನ ನಿವಾಸದಲ್ಲಿ ಕುಟುಂಬಸ್ಥರ ದರ್ಶನದ ಬಳಿಕ ನಾಳೆ ಬೆಳಗ್ಗೆ 7 ಗಂಟೆಯಿಂದ ಸಂಜೆ 4 ಗಂಟೆವರೆಗೂ ಹೈದರಾಬಾದ್ನ ಫಿಲ್ಮ್ಚೇಂಬರ್ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ನಂತರ ಸಂಜೆ 5 ಗಂಟೆಗೆ ಮಹಾಪ್ರಸ್ಥಾನದಲ್ಲಿ ತಾರಕರತ್ನ ಅಂತ್ಯಕ್ರಿಯೆ ಮಾಡಲಾಗುತ್ತದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
2002ರಲ್ಲಿ ಟಾಲಿವುಡ್ಗೆ ಎಂಟ್ರಿ
ನಂದಮೂರಿ ತಾರಕರತ್ನ 22 ಫೆಬ್ರುವರಿ 1983 ರಂದು ಅಂದಿನ ಆಂಧ್ರಪ್ರದೇಶದ ಹೈದರಾಬಾದ್ನಲ್ಲಿ ಜನಿಸಿದ್ದರು. ಇವರ ತಂದೆ ನಂದಮೂರಿ ಮೋಹನ್ ಕೃಷ್ಣ. 2012ರಲ್ಲಿ ಅಲಾಖ್ಯಾ ರೆಡ್ಡಿಯವರನ್ನ ಪ್ರೀತಿಸಿ ಮದುವೆಯಾಗಿದರು. ಕಾಲೇಜು ದಿನಗಳಿಂದೇ ಸಿನಿಮಾದಲ್ಲಿ ನಟನೇ ಮಾಡಬೇಕೆಂಬ ಆಸೆ ಇದ್ದಿದ್ದರಿಂದ 2002ರಲ್ಲಿ ‘ಒಕಟೋ ನಂಬರ್ ಕುರಾಡು’ ಸಿನಿಮಾದಿಂದ ಟಾಲಿವುಡ್ಗೆ ಎಂಟ್ರಿ ಕೊಟ್ಟರು. ಮೊದಲ ಸಿನಿಮಾವೇ ಹಿಟ್ ಆಗಿದ್ದರಿಂದ ಮತ್ತಷ್ಟು ಸಿನಿಮಾವಕಾಶಗಳು ಅವರ ಮನೆ ಬಾಗಿಲಿಗೆ ಬಂದವು. ಬದ್ರಾದಿ ರಾಮುಡು, ತಾರಕ, ಯುವರತ್ನ, ಅಮರಾವತಿ, ವೆಂಕಟಾದ್ರಿ, ವಿಜೇತಾ, ಎದುರು ಲೇನಿ ಅಲೆಕ್ಸಾಂಡರ್ ಹೀಗೆ ಇನ್ನು ಕೆಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಹಿರೋ ಆಗಿ ಅಲ್ಲದೇ ವಿಲನ್ ಮತ್ತು ಪೋಷಕ ಪಾತ್ರದಲ್ಲೂ ಕಾಣಿಸಿಕೊಂಡು ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದ್ದರು.
ನಟ ನಂದಮೂರಿ ತಾರಕರತ್ನ ನಿಧನ ಹಿನ್ನೆಲೆಯಲ್ಲಿ ತೆಲುಗು ರಾಜಕೀಯ ಗಣ್ಯರು ಹಾಗೂ ಟಾಲಿವುಡ್ ಸ್ಟಾರ್ಗಳು ಸೋಷಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದಾರೆ. ಆಂಧ್ರ ಸಿಎಂ ಜಗನ್ಮೋಹನ್ ರೆಡ್ಡಿ, ಜನಾಸೇನಾ ಪಕ್ಷ ಹಾಗೂ ಚಂದ್ರಬಾಬು ನಾಯ್ಡು ಅವರು ತಮ್ಮ ಟ್ವಿಟರ್ ಅಕೌಂಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada