‘ಬಘೀರ’ ಚಿತ್ರದ ಶೂಟಿಂಗ್ ವೇಳೆ ಪೆಟ್ಟು ಮಾಡಿಕೊಂಡಿದ್ದ ನಟ ಶ್ರೀಮುರಳಿ ಶಸ್ತ್ರ ಚಿಕಿತ್ಸೆಗೆ ನಡೆಸಿದ್ದು, ಆರು ವಾರ ಫುಲ್ ರೆಸ್ಟ್ ತೆಗೆದುಕೊಳ್ಳಬೇಕು ಎಂದು ವೈದ್ಯರು ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ.
ಶ್ರೀಮುರುಳಿ ಎಡಭಾಗದ ಮೊಣಕಾಲಿಗೆ ತೀವ್ರ ಗಾಯವಾಗಿದ್ದ ಕಾರಣ ಬೆಂಗಳೂರಿನ ಮಣಿಪಾಲ್ ವಿಕ್ರಮ್ ಆಸ್ಪತ್ರೆಯಲ್ಲಿ ಡಾಕ್ಟರ್ ಶಂಕರ್ ಅವರ ಸಾರಥ್ಯದಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿದ್ದು, ಆಪರೇಷನ್ ಯಶಸ್ವಿಯಾಗಿದೆ.
ಸದ್ಯ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ಶ್ರೀಮುರಳಿ ಇನ್ನು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕು ಎಂದು ವೈದ್ಯರು ಸೂಚಿಸಿದ್ದಾರೆ.
ಆರು ವಾರ ವಿಶ್ರಾಂತಿಗೆ ಸೂಚಿಸಿರುವ ವೈದ್ಯರು ಇನ್ನು ಆರು ತಿಂಗಳು ಡ್ಯಾನ್ಸ್, ಫೈಟು ಮಾಡಂಗಿಲ್ಲ ಎಂದು ಕಟ್ಟುನಿಟ್ಟಾಗಿ ಎಚ್ಚರಿಸಿದ್ದಾರೆ. ಇದು ಬಘೀರ ಚಿತ್ರತಂಡ ತಲೆಬಿಸಿ ತಂದಿದೆ. ಕಳೆದ ಒಂದೂವರೆ ವರ್ಷದಿಂದ ಬಘೀರ ಚಿತ್ರದಲ್ಲಿ ಶ್ರೀಮುರಳಿ ಕೆಲಸ ಮಾಡ್ತಿದ್ದು, ಇನ್ನು 40 ದಿನದ ಶೂಟಿಂಗ್ ಬಾಕಿ ಉಳಿಸಿಕೊಂಡಿದ್ದಾರೆ. ಈಗ ಡ್ಯಾನ್ಸ್, ಫೈಟು ಮಾಡಂಗಿಲ್ಲ ಅನ್ನೋದು ಚಿತ್ರತಂಡಕ್ಕೆ ಆಘಾತ ತಂದಿದೆ.
ಕಳೆದ ವಾರ ಬೆಂಗಳೂರಿನ ರಾಕ್ಲೈನ್ ಸ್ಟುಡಿಯೋದಲ್ಲಿ ಬಘೀರ ಚಿತ್ರೀಕರಣ ನಡೆಯುತ್ತಿತ್ತು. ಸ್ಟಂಟ್ ಮಾಸ್ಟರ್ ಚೇತನ್ ಡಿಸೋಜಾ ಸಾರಥ್ಯದಲ್ಲಿ ಶ್ರೀಮುರಳಿ ಫೈಟಿಂಗ್ ಅಭ್ಯಾಸ ಮಾಡ್ತಿದ್ರು. ಈ ವೇಳೆ ಆಯಾತಪ್ಪಿ ಕಾಲಿಗೆ ಗಾಯ ಮಾಡಿಕೊಂಡಿದ್ದ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆ ಕೊಡಿಸಲಾಯಿತಾದರೂ ಗಾಯ ಗಂಭೀರವಾಗಿದ್ದ ಪರಿಣಾಮ ವೈದ್ಯರು ಶಸ್ತ್ರ ಚಿಕಿತ್ಸೆಗೆ ಸೂಚಿಸಿದ್ದರು. ವೈದ್ಯರ ಸಲಹೆಯಂತೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು.
ಈ ಹಿಂದೆ ಮದಗಜ ಚಿತ್ರದ ಸಂದರ್ಭದಲ್ಲಿ ಶ್ರೀಮುರಳಿಯ ಎಡಗಾಲಿಗೆ ಪೆಟ್ಟು ಬಿದ್ದಿತ್ತು. ಆಗಲೂ 20 ದಿನಗಳ ಕಾಲ ವಿಶ್ರಾಂತಿ ಪಡೆದಿದ್ದರು. ಈಗ ಮತ್ತೆ ಅದೇ ಕಾಲಿಗೆ ಗಾಯವಾಗಿರೋದ್ರಿಂದ ಈ ಸಲ ಆರು ವಾರ ರೆಸ್ಟ್ ಮಾಡಬೇಕಿದೆ.
https://play.google.com/store/apps/details?id=com.speed.newskannada