ಮೈಸೂರು, ಡಿಸೆಂಬರ್, 04: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ನಡೆಸುವ “ಸ್ವಚ್ಛ ಸರ್ವೇಕ್ಷಣ್” ಸ್ವಚ್ಛ ನಗರಿ ಎಂಬ ಪಟ್ಟವನ್ನು ತನ್ನದಾಗಿಸಿಕೊಂಡಿದ್ದ ಮೈಸೂರು ಮತ್ತೊಮ್ಮೆ ಸ್ಪರ್ಧೆಗೆ ಸಜ್ಜಾಗುತ್ತಿದೆ. ಈ ಬಾರಿ ಮತ್ತೆ ಅಗ್ರಸ್ಥಾನಕ್ಕೆ ಏರಲು ಎಲ್ಲಾ ತಯಾರಿ ನಡೆಸಿಕೊಂಡಿದೆ.
2022ರ ಸಮಗ್ರ ವಿಭಾಗದಲ್ಲಿ ಮೈಸೂರು ನಗರ ಪಾಲಿಕೆ 8ನೇ ಸ್ಥಾನ ಪಡೆದುಕೊಂಡಿತ್ತು. 3 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರಗಳಲ್ಲಿ ದೇಶದ ನಂ.1 ಸ್ವಚ್ಛ ನಗರ ಪ್ರಶಸ್ತಿ, 1 ರಿಂದ 10 ಲಕ್ಷ ಜನಸಂಖ್ಯೆಯೊಳಗಿನ ನಗರದಲ್ಲಿ 2ನೇ ರ್ಯಾಂಕ್ ಪಡೆದುಕೊಂಡಿತ್ತು. ಮೊದಲ ಹಂತದಲ್ಲಿ ಸಮೀಕ್ಷಾ ತಂಡವು ಪಾಲಿಕೆಯಿಂದ ಸ್ವಚ್ಛತೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಲಿದೆ. ಎರಡನೇ ಹಂತದಲ್ಲಿ ಪ್ರಮುಖ ಸ್ಥಳಗಳಲ್ಲಿ ಕಸ ನಿರ್ವಹಣೆ ರೀತಿ, ಪೌರಕಾರ್ಮಿಕರ ಕಾರ್ಯನಿರ್ವಹಣೆ ಕುರಿತು ಮಾಹಿತಿ ಕಲೆ ಹಾಕಲಿದೆ. ಮೂರನೇ ಹಂತದಲ್ಲಿ ಸಾರ್ವಜನಿಕರನ್ನು ಭೇಟಿಯಾಗಿ ಮಾಹಿತಿ ಪಡೆಯುತ್ತದೆ. ಈ ಬಾರಿ ಇವುಗಳ ಜೊತೆಗೆ “ಸರ್ಟಿಫಿಕೇಶನ್” ಎಂಬ ಹೊಸ ವಿಭಾಗವನ್ನು ಸೇರಿಸಲಾಗಿದೆ. ಪ್ರತಿ ನಾಲ್ಕು ವಿಭಾಗಗಳಿಗೆ ತಲಾ 1,250 ಅಂಕಗಳನ್ನು ನಿಗದಿಪಡಿಸಲಾಗಿದೆ.
ಸ್ವಚ್ಛ ಸರ್ವೇಕ್ಷಣೆಯ ಅಂಕಗಳ ವಿವರಕಳೆದ ಬಾರಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಒಟ್ಟು 7,500 ಅಂಕಗಳನ್ನು ನಿಗದಿ ಪಡಿಸಲಾಗಿತ್ತು. ಈ ಬಾರಿ ಅಂಕಗಳನ್ನು 9,500ಕ್ಕೆ ಏರಿಕೆ ಮಾಡಲಾಗಿದೆ. ಕಳೆದ ಬಾರಿ ಸರ್ವಿಸ್ ಲೆವಲ್ ಪ್ರೋಗ್ರೆಸ್ಗೆ 3,000 (ಶೇಕಡಾ 40), ಸರ್ಟಿಫಿಕೇಷನ್ಗೆ 2,250, ಸಿಟಿಜನ್ ವಾಯ್ಸ್ಗೆ 2,250 ಅಂಕ ನಿಗದಿ ಪಡಿಸಲಾಗಿತ್ತು. ಆದರೆ ಈ ಬಾರಿ ಸರ್ವಿಸ್ ಲೆವಲ್ ಪ್ರೋಗ್ರೆಸ್ಗೆ ಒತ್ತು ನೀಡಲಾಗಿದ್ದು, ಒಟ್ಟು 4,525 (ಶೇಕಡಾ 48) ಅಂಕ ನಿಗದಿ ಪಡಿಸಲಾಗಿದೆ. ಸರ್ಟಿಫಿಕೇಷನ್ಗೆ 2,500 ಹಾಗೂ ಸಿಟಿಜನ್ ವಾಯ್ಸ್ಸ್ಗೆ 2,475 ಅಂಕ ನಿಗದಿ ಪಡಿಸಲಾಗಿದೆ.
ತ್ಯಾಜ್ಯ ವಿಲೇವಾರಿಗೆ ಹೆಚ್ಚಿದ ಒತ್ತಡ
”ಕೆಸರೆಯಲ್ಲಿ 200 ಟನ್, ರಾಯನಕೆರೆಯಲ್ಲಿ 150 ಟನ್ ತ್ಯಾಜ್ಯ ಸಂಸ್ಕರಣೆ ಮಾಡುವ ಘಟಕಗಳನ್ನು ಅಳವಡಿಸಲಾಗಿದೆ. ಈ ಘಟಕಗಳು ಕಾರ್ಯಾರಂಭ ಆದರೆ ಸೂಯೇಜ್ ಫಾರಂ ಮೇಲಿನ ಒತ್ತಡ ಕಡಿಮೆ ಆಲಿದೆ. ಸಂಗ್ರಹವಾಗುವ ತ್ಯಾಜ್ಯ ಆಯಾ ದಿನವೇ ವಿಲೇವಾರಿ ಆಗಬೇಕು ಎಂಬುದು ಸ್ವಚ್ಛ ಸರ್ವೇಕ್ಷಣೆಯ ನಿಯಮವಾಗಿದೆ. ಹೀಗಾಗಿ ಸರ್ವಿಸ್ ಲೆವಲ್ ಪ್ರೋಗ್ರೆಸ್ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆಯುವ ನಿರೀಕ್ಷೆ ಇದೆ,” ಎಂದು ನಗರ ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
ಮಾಹಿತಿಗಳ ಅಪ್ಲೋಡ್ಗೆ ತಂಡ ರಚನೆ
ಸ್ವಚ್ಛ ಸರ್ವೇಕ್ಷಣೆ ಅಭಿಯಾನಕ್ಕೆ ಮಾಹಿತಿಗಳನ್ನು ಅಪ್ಲೋಡ್ ಮಾಡುವುದು ಹಾಗೂ ಸಮೀಕ್ಷೆಗೆ ಸಂಬಂಧಿಸಿದ ಇನ್ನಿತರ ವಿಷಯಗಳ ನಿರ್ವಹಣೆಗೆ ಪಾಲಿಕೆಯಿಂದ ವಿಶೇಷ ತಂಡ ನಿಯೋಜನೆ ಮಾಡಲಾಗಿದೆ. ಕಳೆದ ಮೂರು ತಿಂಗಳಿಂದ ಸಮೀಕ್ಷೆಗೆ ಬೇಕಾದ ನಗರದ ಮಾಹಿತಿಗಳನ್ನು ಸ್ವಚ್ಛ ಸರ್ವೇಕ್ಷಣ್ ವೆಬ್ಸೈಟ್ಗೆ ಅಪ್ಲೋಡ್ ಮಾಡಲಾಗಿದೆ. ವಾಣಿಜ್ಯ ಸಂಕೀರ್ಣಗಳ ಬಳಿ ಎಲ್ಲಿಯೂ ಹೆಚ್ಚಾಗಿ ಕಸ ಕಾಣಿಸದಂತೆ ಮುನ್ನೆಚ್ಚರಿಕೆಯಾಗಿ ರಾತ್ರಿ ವೇಳೆ ಸ್ವಚ್ಛತಾ ಕಾರ್ಯ ನಡೆಸಲಾಗಿದೆ.
ಕಾರಿಡಾರ್ ಉದ್ಘಾಟನೆಗೆ ಭರ್ಜರಿ ತಯಾರಿ
ಮುಂದಿನ ತಿಂಗಳು 2023ರ ಜನವರಿಯಲ್ಲಿ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಕಾರಿಡಾರ್ನ ಬಹುತೇಕ ರಸ್ತೆಗಳು ತೆರೆಯಲಿದ್ದು, ಮುಂದಿನ ವರ್ಷ ಮಾರ್ಚ್ ಮೊದಲ ವಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಮಾರ್ಚ್ 2014ರಲ್ಲಿ ಕೇಂದ್ರ ಹೆದ್ದಾರಿ ಸಾರಿಗೆ ಸಚಿವಾಲಯವು ದೇಶಾದ್ಯಂತ ಕೆಲವು ರಸ್ತೆಗಳನ್ನು ರಾಷ್ಟ್ರೀಯ ಹೆದ್ದಾರಿ ಎಕ್ಸ್ಪ್ರೆಸ್ ವೇಗೆ ನವೀಕರಿಸಲಾಗುವುದು ಎಂದು ಘೋಷಿಸಿತ್ತು. ಇದರಲ್ಲಿ ಮೈಸೂರು ಬೆಂಗಳೂರು ರಸ್ತೆ ಅವುಗಳಲ್ಲಿ ಒಂದಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಮೈಸೂರು ಹೆದ್ದಾರಿಯನ್ನು (ಎನ್ಎಚ್ 275) ಆರು ಲೈನ್ ಎಕ್ಸ್ಪ್ರೆಸ್ವೇ ಸೇರಿದಂತೆ 10 ಲೈನ್ಗಳಾಗಿ ಪರಿವರ್ತಿಸುತ್ತಿದೆ. 117 ಕಿಮೀ ಹೆದ್ದಾರಿ ಬೆಂಗಳೂರಿನ ನೈಸ್ ಪ್ರವೇಶದ್ವಾರದಿಂದ ಮೈಸೂರಿನ ರಿಂಗ್ ರೋಡ್ ಜಂಕ್ಷನ್ ವರೆಗೆ ಪ್ರಯಾಣದ ಸಮಯವನ್ನು ಸರಾಸರಿ ಮೂರು ಗಂಟೆಗಳಿಂದ ಕೇವಲ 90 ನಿಮಿಷಗಳಿಗೆ ಅಂದರೆ ಒಂದೂವರೆ ಗಂಟೆಗೆ ಕಡಿತಗೊಳಿಸುವ ನಿರೀಕ್ಷೆಯಿದೆ. ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಮೈಸೂರು ನಡುವಿನ ಅಂತರವು ಸುಮಾರು 140 ಕಿ.ಮೀ. ಸಂಪೂರ್ಣ ವ್ಯಾಪ್ತಿ ಎರಡು ಟೋಲ್ ಗೇಟ್ಗಳನ್ನು ಹೊಂದುವ ನಿರೀಕ್ಷೆಯಿದೆ ಪ್ರತಿ ಟೋಲ್ಗೆ 200 ರಿಂದ 250 ರೂ. ಇರಲಿದೆ ಎನ್ನಲಾಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ: