ಕಳಸಾ-ಬಂಡೂರಿ (ಮಹದಾಯಿ) ವಿಷಯದಲ್ಲಿ ಯೋಜನೆಗೆ ಅನುಮತಿ ಸಿಕ್ಕಿದೆ ಎಂದು ಜನರಿಗೆ ತಪ್ಪು ಮಾಹಿತಿಯನ್ನು ಬಿಜೆಪಿಯವರು ಹರಡಿ ಬಿಟ್ಟಿ ಪ್ರಚಾರ ಪಡೆಯುವ ಹುನ್ನಾರ ನಡೆಸಿದ್ದಾರೆ. ಕೂಡಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಯೋಜನೆಯ ಸದ್ಯದ ಸ್ಥಿತಿಗತಿಯ ಕುರಿತು ತಕ್ಷಣ ಸರ್ವಪಕ್ಷ ಹಾಗೂ ಹೋರಾಟಗಾರರ ಸಭೆ ಕರೆದು ಸ್ಪಷ್ಟೀಕರಣ ನೀಡಬೇಕು. ಇಲ್ಲವಾದರೇ ಮತ್ತೆ ಯೋಜನೆಗಾಗಿ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎನ್.ಹೆಚ್.ಕೊನರೆಡ್ಡಿ ಎಚ್ಚರಿಕೆ ನೀಡಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮಹದಾಯಿ ನ್ಯಾಯಾಧೀಕರಣ 13.42 ಟಿಎಂಸಿ ನೀರನ್ನು ರಾಜ್ಯಕ್ಕೆ ಗೋವಾದವರಿಗೆ 24 ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ನೀಡಿದ ನಂತರ ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಕೇಂದ್ರ ಸರ್ಕಾರ 2020 ಫೆ.27 ರಂದು ಅಧಿಸೂಚನೆ ಹೊರಡಿಸಿ, ವರ್ಷ ಕಳೆದರೂ ಬಿಜೆಪಿಯವರು ಯಾವುದೇ ಕ್ರಮ ಜರುಗಿಸದೇ ಸುಮ್ಮನಿದ್ದು, ಇದೀಗ ಏಕಾಏಕಿ ಡಿಪಿಆರ್ ಅನುಮತಿ ಸಿಕ್ಕಿದೆ ಎಂದು ಪ್ರಚಾರ ಪಡೆಯುತ್ತಾರೆ. ಆದರೆ ಯೋಜನೆ ಬಗ್ಗೆ ರಾಜ್ಯದಿಂದ ವಾದ ಮಾಡಿದ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯವಾದಿ ಮೋಹನ್ ಕಾತರಕಿ ಅವರು ಡಿಪಿಆರ್ ಕೇವಲ ಅರಣ್ಯ ಇಲಾಖೆ ಅನುಮತಿ ಪಡೆಯಲು ಮಾತ್ರ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ. ಇದರಿಂದ ಬಿಜೆಪಿಯವರು ಸುಳ್ಲಿನ ಸರಮಾಲೆ ತಿಳಿಯುತ್ತದೆ ಎಂದು ಹರಿಹಾಯ್ದರು.
ಇದೀಗ ರಾಜ್ಯ ಸರ್ಕಾರ ಕೇಂದ್ರ ಅರಣ್ಯ ಪರಿಸರ ಹಾಗೂ ಹವಾಮಾನ ಇಲಾಖೆ ಅನುಮತಿ ಪಡೆಯಲು ಪ್ರಸ್ತಾವನೆ ಸಲ್ಲಿಸಿದೆ. ಅದರಂತೆ ಕೇಂದ್ರ ಅಧ್ಯಯನ ತಂಡದ ಅಧಿಕಾರಿಗಳು ಕಳೆದ ವಾರ ಖಾನಾಪುರ ತಾಲೂಕಿನ ಕಣಕುಂಬಿ ಕಳಸಾ-ಬಂಡೂರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದರೆ ಈ ಯೋಜನೆ ಬಗ್ಗೆ ಕಳಸಾ-ಬಂಡೂರಿ ಯೋಜನೆ ಕುರಿತು ಬಿಜೆಪಿಯವರು ಸಾರ್ವಜನಿಕರಿಗೆ ತಪ್ಪು ತಿಳುವಳಿಕೆ ನೀಡಲು ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಹು-ಧಾ, ನವಲಗುಂದ, ಅಣ್ಣಿಗೇರಿ, ನರಗುಂದ, ರೋಣ ಮುಂತಾದ ಕಡೆಗೆ ಯೋಜನೆಯ ಅನುಮತಿ ಸಿಕ್ಕಿದೆ ಎಂದು ಫ್ಲೆಕ್ಸ್ ಬೋರ್ಡ್ ಹಾಕಿ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ಗೋವಾದ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷದ ನಿಯೋಗದೊಂದಿಗೆ ಕೇಂದ್ರ ಸರ್ಕಾರದ ಕೆಲ ಸಚಿವರಿಗೆ ಮನವಿ ಮಾಡಿ ತಕರಾರು ಸಲ್ಲಿಸಿದ್ದಾರೆ. ಈಗಾಗಲೇ ಎಲ್ಲಾ ನ್ಯಾಯಾಲಯಗಳಲ್ಲಿ ವಾದ ವಿವಾದ ನಡೆದು ತಿರ್ಪು ನೀಡಿದ ನಂತರವೂ ಗೋವಾದವರ ತಕರಾರು ಯಾವ ಕಾರಣಕ್ಕೆ? ಅಂದಿನ ಗೋವಾ ಮುಖ್ಯಮಂತ್ರಿ ಮನೋಹರ ಪರಿಕರ ಅವರು ಕರ್ನಾಟಕಕ್ಕೆ ಕುಡಿಯುವ ನೀರು ಬೇಕಾದರೇ ಕಳಸಾ-ಬಂಡೂರಿಯಿಂದ ಪಂಪ್ ಮೂಲಕ ನೀಡುತ್ತೇವೆಂದು ಹೇಳಿದ್ದಾರೆ. ರಾಜ್ಯ ಸರ್ಕಾರ ಎಲ್.ಐ.ಎಸ್.ತರಹ ಯೋಜನೆ ಮಾಡಲು ಹೊರಟಂತಿದೆ. ಇದರ ಬಗ್ಗೆ ಇಲ್ಲಿಯವರೆಗೆ ನಿರ್ಧಾರ ತೆಗೆದುಕೊಳ್ಳಲಿಲ್ಲ, 26 ನೇ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಮಿಸಿದ ವೇಳೆ ಮಹದಾಯಿ ಬಗ್ಗೆ ಮಾತನಾಡದೇ ಹಾಗೇ ತೆರಳಿದ್ದಾರೆ. ಇದು ಈ ಭಾಗದ ಜನರಿಗೆ ನೋವಾಗಿದೆ. ಕೂಡಲೇ ಸರ್ಕಾರ ಜನರಿಗೆ ಯೋಜನೆ ಕುರಿತಾಗಿ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದರು.
https://play.google.com/store/apps/details?id=com.speed.newskannada