ಧಾರವಾಡ: ಕೋವಿಡ್ ಸೋಂಕಿನಿಂದಾಗ ಕಳೆದ ಕೆಲವು ದಿನಗಳಿಂದ ಇಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಚೆಂಬೆಳಕಿನ ಖ್ಯಾತಿಯ ಕವಿ ನಾಡೋಜ ಚನ್ನವೀರ ಕಣವಿ ಅಸ್ತಂಗತರಾಗಿದ್ದಾರೆ. ಇವರಿಗೆ 93 ವರ್ಷ ವಯಸ್ಸಾಗಿತ್ತು.ಧಾರವಾಡದ ಎಸ್ಡಿಎಂ ಆಸ್ಪತ್ರೆಯಲ್ಲಿ ಅವರು ಇಂದು ಕೊನೆಯುಸಿರೆಳೆದಿದ್ದಾರೆ.ಕಳೆದ ಒಂದು ತಿಂಗಳಿನಿಂದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.1928ರ ಜೂನ್ 28ರಂದು ಜನ್ಮ ಗದಗ ತಾಲೂಕಿನ ಹೊಂಬಳ ಗ್ರಾಮದಲ್ಲಿ ಹುಟ್ಟಿದ್ದ ಕಣವಿಯವರ ತಂದೆ ಸಕ್ಕರೆಪ್ಪ ಗದಗ ತಾಲೂಕಿನ ಶಿರುಂದದಲ್ಲಿ ಶಿಕ್ಷಕರಾಗಿದ್ದರು. ಹೀಗಾಗಿ ಶಿರುಂದದಲ್ಲಿಯೇ ಕಣವಿಯವರು ಬಾಲ್ಯ ಕಳೆದಿದ್ದಾರೆ. ನಾಲ್ಕನೇ ತರಗತಿವರೆಗೆ ಶಿರುಂದದಲ್ಲಿಯೇ ಶಿಕ್ಷಣ ಪಡೆದ ಅವರು ಧಾರವಾಡ ತಾಲೂಕಿನ ಗರಗ ಶಾಲೆಯಲ್ಲಿ 7ನೇ ತರಗತಿವರೆಗೆ ಶಿಕ್ಷಣ ಪಡೆದರು.ಬಾಲ್ಯದಲ್ಲಿ ಗಾಂಧಿ ಟೋಪಿ ನಾಟಕದಲ್ಲಿ ಅಭಿನಯಿಸಿದ್ದ ಕಣವಿಯವರು ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದಿದ್ದರು ಧಾರವಾಡದ ಮುರುಘಾಮಠದಲ್ಲಿದ್ದುಕೊಂಡು ಹೈಸ್ಕೂಲ್ ಶಿಕ್ಷಣ ಪಡೆದು ಕರ್ನಾಟಕ ಕಾಲೇಜಿನಲ್ಲಿ ಬಿಎ ಶಿಕ್ಷಣ ಪಡೆದರು.ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಕಣವಿಯವರ ಕವನಗಳನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಹಾರೈಸಿದ್ದರು ಡಿವಿಜಿ. ಧಾರವಾಡದ ಮಾಳಮಡ್ಡಿಯಲ್ಲಿ ಕಾವ್ಯಾನುಭವ ಮಂಪಟ ಆರಂಭಿಸಿ ಕವಿತಾ ವಾಚನ ಅಭಿಯಾನ ನಡೆಸಿದ್ದ ಕಣವಿಯವರು 1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು.ಅದೇ ಕವಿವಿಯ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ಸೇವೆ ಆರಂಭಿಸಿದ್ದ ಅವರು, 1956ರಲ್ಲಿ ಅದೇ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದರು.ಪತ್ನಿ ಶಾಂತಾದೇವಿ ಕೂಡ ಸಾಹಿತಿ, ಕನ್ನಡದ ಖ್ಯಾತಿ ಕತೆಗಾರ್ತಿಯಾಗಿದ್ದ ಅವರು ಇತ್ತೀಚೆಗೆ ನಿಧನರಾಗಿದ್ದರು. ಪತ್ನಿ ನಿಧನದ ಬಳಿಕ ಸ್ವಲ್ಪ ಲವಲವಿಕೆ ಕಳೆದುಕೊಂಡಿದ್ದರು ಕಣವಿಯವರು.ವಿಶ್ವಭಾರತಿಗೆ ಕನ್ನಡದಾರತಿ…, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ…, ಹೂವು ಹೊರಳುವುವು ಸೂರ್ಯನ ಕಡೆಗೆ…, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ… ಜನಪ್ರಿಯ ಕಾವ್ಯಗಳು
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada