ಹಿರಿಯ ವಿದ್ವಾಂಸರಾದ ಎ. ನರಸಿಂಹ ಭಟ್ಟರು ಇಂದು ಈ ಲೋಕವನ್ನಗಲಿದ್ದಾರೆ. ಅನುವಾದ ಕ್ಷೇತ್ರದಲ್ಲಿ ಮಹಾನ್ ಸಾಧಕರಾದ ಎ. ನರಸಿಂಹ ಭಟ್ಟರು ಸಾಹಿತ್ಯ ಮತ್ತು ವೇದಾಂತಗಳ ಮಹಾನ್ ಪರಿಣಿತರಾಗಿದ್ದವರು.ಎ. ನರಸಿಂಹ ಭಟ್ಟರು ಮೂಲತಃ ಕಾಸರಗೋಡಿನವರು. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ ಭಟ್ಟರು ಹೈಸ್ಕೂಲು ಮುಖ್ಯೋಪಾಧ್ಯಾಯರಾಗಿ ನಿವೃತ್ತರಾಗಿದ್ದರು.ಎ. ನರಸಿಂಹ ಭಟ್ಟರು ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳಮುನಿಯನ ಕಗ್ಗ ಮತ್ತು ಗೋವಿಂದಪೈಯವರ ಗೊಲ್ಗೊಥಾ ಮತ್ತು ವೈಶಾಖಿ ಕಾವ್ಯಕೃತಿಗಳನ್ನು ಇಂಗ್ಲಿಷಿಗೆ ಸೊಗಸಾಗಿ ಅನುವಾದಿಸಿದ್ದಾರೆ. ಕನ್ನಡದಲ್ಲೂ ಇವುಗಳಿಗೆ ಸರಳವಾಗಿ ಅರ್ಥವಾಗುವಂತೆ ಅದ್ಭುತ ವ್ಯಾಖ್ಯಾನಗಳನ್ನು ಪ್ರಕಟಿಸಿದ್ದಾರೆ.ನರಸಿಂಹಭಟ್ಟ ಅವರು ದೇವಮಾನವ ಯೇಸು, ಮಿರ್ದಾನನ ಮಂತ್ರಪುಸ್ತಕ, ದೇವಪ್ರವಾದಿ ಹಾಗೂ ಪಥರಹಿತ ಪಥ ಎಂಬ ಕೃತಿಗಳನ್ನು ಹೊರತಂದಿದ್ದಾರೆ. ಫ್ರೂಟ್ಸ್ ಅಂಡ್ ನಟ್ಸ್ ಎಂಬ ಶೀರ್ಷಿಕೆಯಲ್ಲಿ ನೂರಹದಿನೈದು ಶ್ರೇಷ್ಠ ಕವಿತೆಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ನೂರು ಭಾವಗೀತೆಗಳನ್ನು ಸಿಂಗಿಂಗ್ ಸೆಂಟಿಮೆಂಟ್ಸ್ ಎಂಬ ಹೆಸರಿನಲ್ಲಿ ಇಂಗ್ಲಿಷಿಗೆ ಅನುವಾದಿಸಿದ್ದಾರೆ. ಅಂತೆಯೇ ಭವ್ಯ ಅನ್ಯಭಾಷಾ ಸಾಹಿತ್ಯದ ಸ್ವಾದವನ್ನು ಪಾಂಡಿತ್ಯಪೂರ್ಣವಾಗಿ ಕನ್ನಡಕ್ಕೆ ತಂದಿದ್ದಾರೆ. ಇವುಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಕಟಗೊಂಡ ಜಿಮ್ ಸ್ಟೋವಾಲ್ ಅವರ ಅಮರ ಕೃತಿ The Ultimate Giftನ ಅನುವಾದವಾದ ‘ಕೊನೆಯ ಕೊಡುಗೆ’ ಸೇರಿದೆ.ಎ. ನರಸಿಂಹ ಭಟ್ಟರಿಗೆ ಕುವೆಂಪು ಭಾಷಾ ಪ್ರಶಸ್ತಿ, ಡಿವಿಜಿ ಪ್ರತಿಷ್ಠಾನ ಬಳಗದ ಗೌರವವೂ ಸೇರಿ ಅನೇಕ ಗೌರವಗಳು ಸಂದಿದ್ದವು.ಅಗಲಿದ ಮಹಾನ್ ಚೇತನಕ್ಕೆ ನಮನ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: