ಮುಂಬರುವ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಹೇಳುತ್ತಿದ್ದ ಮಾಜಿ ಸಂಸದ ಹಾಗೂ ಜೆಡಿಎಸ್ ನಾಯಕ ಎಲ್.ಆರ್.ಶಿವರಾಮೇಗೌಡ ಅಪದ್ಧ ಮಾತನಾಡುವ ಮೂಲಕ ಹಿಟ್ ವಿಕೆಟ್ ಆಗಿ, 2023ರ ಮ್ಯಾಚ್ನಿಂದ ಹೊರ ಬಿದ್ದಿದ್ದಾರೆ.
ಜಿ. ಮಾದೇಗೌಡ ಅವರಂತ ದಿಗ್ಗಜರ ಬಗ್ಗೆ ಕೀಳಾಗಿ ಮಾತನಾಡುವುದನ್ನು ಸಹಿಸಲಾಗದು ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಕಾರ್ಯಕರ್ತೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿರುವ ಶಿವರಾಮೇಗೌಡ, 2023 ರ ವಿಧಾನಸಭೆ ಚುನಾವಣೆಯಲ್ಲಿ ನಾಗಮಂಗಲ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ತಮ್ಮ ರಾಜಕೀಯ ವೃತ್ತಿಜೀವನದ ಬಗ್ಗೆ ಮಾತನಾಡುತ್ತಾ, ಈ ಸಮಯದಲ್ಲಿ ಹಲವಾರು ಏರುಪೇರುಗಳನ್ನು ಎದುರಿಸಿದ್ದೇನೆ ಎಂದು ಹೇಳಿಕೊಂಡ ಶಿವರಾಮೇಗೌಡರು, ತಮ್ಮ ವೃತ್ತಿಜೀವನಕ್ಕೆ ಅಡ್ಡಿಯಾಗಿದ್ದ ದಿವಂಗತ ಮಾದೇಗೌಡರನ್ನು ಸಹ ಸೋಲಿಸಿದ್ದಾಗಿ ಹೇಳಿಕೊಂಡಿದ್ದಾರೆ.
ಕೇವಲ ಐದು ತಿಂಗಳ ಅವಧಿಯ ಸಂಸದರಾಗಿ ಅಧಿಕಾರ ಅನುಭವಿಸಲು ಮಂಡ್ಯ ಲೋಕಸಭಾ ಉಪಚುನಾವಣೆ ಗೆಲ್ಲಲು 30 ಕೋಟಿ ರೂಪಾಯಿ ಖರ್ಚು ಮಾಡಿದ್ದೆ, ಆದರೆ ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರ ಷಡ್ಯಂತ್ರದಿಂದ 2019ರ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿಗಾಗಿ ಸೀಟು ತ್ಯಾಗ ಮಾಡಬೇಕಾಯಿತು ಎಂದು ಹೇಳಿಕೊಂಡಿದ್ದರು. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಗೆಲ್ಲಲು ಇನ್ನೂ 30 ಕೋಟಿ ರು ಹಣ ಬೇಕಾದರೂ ಖರ್ಚು ಮಾಡುತ್ತೇನೆ. ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಹಣ ಖರ್ಚು ಮಾಡಿದ್ದೇನೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಮತ್ತು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಟಿಕೆಟ್ ನೀಡಲಿರುವುದರಿಂದ ನಾಗಮಂಗಲದಿಂದ ಸ್ಪರ್ಧಿಸುತ್ತೇನೆ. ನಾನು ಕೊಪ್ಪ ಹೋಬಳಿಗೆ ಹೊಸಬನಾಗಿದ್ದರೂ ಅದು ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಬರುತ್ತದೆ. ಹೀಗಾಗಿ ನಾನು ನಿಮ್ಮ ಬೆಂಬಲ ಕೋರುತ್ತೇನೆ ಎಂದು ಅವರು ಪಕ್ಷದ ಮಹಿಳಾ ಕಾರ್ಯಕರ್ತೆಗೆ ದೂರವಾಣಿಯಲ್ಲಿ ಹೇಳಿರುವ ಆಡಿಯೋ ವೈರಲ್ ಆಗಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada