ದಾವಣಗೆರೆ, ಮಾರ್ಚ್ 13: ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ಭಾರೀ ನಾಟಕ ಮಾಡುತ್ತಾನೆ. ಲಂಚ ಹೊಡೆದು ಮನೆ ಕಟ್ಟಿದ್ದಾನೆ. ಇಂತವನು ಎಂಎಲ್ಎ ಆಗಬೇಕಾ. ಎಷ್ಟೇ ಹಣ ಖರ್ಚು ಮಾಡಿದರೂ ರೇಣುಕಾಚಾರ್ಯ ಗೆಲ್ಲಲ್ಲ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದು ಖಚಿತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಹೊನ್ನಾಳಿ ಪಟ್ಟಣದಲ್ಲಿ ಏರ್ಪಡಿಸಿದ್ದ ಪ್ರಜಾಧ್ವನಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊನ್ನಾಳಿ ಕ್ಷೇತ್ರದಿಂದ ಐವರು ಆಕಾಂಕ್ಷಿಗಳಿದ್ದಾರೆ. ಮಾಜಿ ಶಾಸಕ ಶಾಂತನಗೌಡ, ಹೆಚ್. ಬಿ. ಮಂಜಪ್ಪ, ಉಮಾಪತಿ, ವಿಶ್ವನಾಥ ಸೇರಿ ಐವರಿಗೂ ಟಿಕೆಟ್ ಕೊಡಲು ಆಗಲ್ಲ. ಒಬ್ಬರಿಗಷ್ಟೇ ಕೊಡಲು ಆಗದು. ಪಕ್ಷದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಹಾಗೂ ಸರ್ವೇ ರಿಪೋರ್ಟ್ ನೋಡಿ ಒಬ್ಬರಿಗೆ ಟಿಕೆಟ್ ಕೊಡುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷ ಗೆಲ್ಲಿಸುತ್ತೇವೆ ಎಂಬ ಶಪಥ ಮಾಡಿ. ಆಕಾಂಕ್ಷಿಗಳೆಲ್ಲರೂ ಪಕ್ಷ ದ್ರೋಹ ಮಾಡಲ್ಲ, ಪಕ್ಷಕ್ಕಾಗಿ ದುಡಿಯುತ್ತೇವೆ ಎಂಬ ಶಪಥ ಮಾಡಿದ್ದಾರೆ. ಕಾರ್ಯಕರ್ತರೂ ಸಹ ಈ ನಿಟ್ಟಿನಲ್ಲಿ ಕೆಲಸ ಮಾಡಿ. ಹೊನ್ನಾಳಿ ಜನರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ಅನೇಕ ಚುನಾವಣೆಗಳ ವೇಳೆ ಇಲ್ಲಿಗೆ ಬಂದಿದ್ದೇನೆ. ಇಂದು ತಡವಾಗಿ ಬಂದಿದ್ದೇನೆ. ಇಷ್ಟು ಹೊತ್ತಾದರೂ ಸಹ ತಾಳ್ಮೆಯಿಂದ ಕುಳಿತು ಮಾತು ಕೇಳಿದ್ದೀರಾ. ಎಲ್ಲಾ ಜನರಿಗೆ ಕೋಟಿ ಕೋಟಿ ನಮನಗಳು ಎಂದು ಜನರಿಗೆ ಧನ್ಯವಾದ ತಿಳಿಸಿದರು.
ಕಾಂಗ್ರೆಸ್ಗೆ ವೋಟು ಹಾಕಿದರೆ ಸಿದ್ದರಾಮಯ್ಯರಿಗೆ ಮತ ಹಾಕಿದಂತೆ. ಸಿದ್ದರಾಮಯ್ಯರಿಗೆ ಅಧಿಕಾರ ಬರಬೇಕಾದರೆ ಒಗ್ಗಟ್ಟಿನಿಂದ ಕಾಂಗ್ರೆಸ್ ಪಕ್ಷ ಗೆಲ್ಲಿಸಿ. ಹಸ್ತದ ಗುರುತಿಗೆ ಮತ ಹಾಕಿ. ನೀವು ಮಾತ್ರ ಮತ ಚಲಾಯಿಸುವುದಲ್ಲ. ಬೇರೆಯವರನ್ನೂ ಕರೆತಂದು ಕಾಂಗ್ರೆಸ್ಗೆ ಮತ ಹಾಕಿಸಬೇಕು ಎಂದರು.
ಲಿಂಗಾಯತ ಮತ ಬ್ಯಾಂಕ್ನತ್ತ ಚಿತ್ತ
ನಾನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು ಬಸವಣ್ಣ ಜಯಂತಿಯಂದು. ಸಮಾಜದಲ್ಲಿ ಬಡವ ಬಲ್ಲಿದ, ಮೇಲ್ಜಾತಿ ಕೆಳಜಾತಿ ಇಲ್ಲದೇ ಜಾತಿರಹಿತವಾಗಿ ಸಾಮಾಜಿಕ ನ್ಯಾಯದ ಸಮಾಜ ಬರಬೇಕೆಂಬ ಸಾಮಾಜಿಕ ಕ್ರಾಂತಿ ಮಾಡಿದವರು ಬಸವಣ್ಣನವರು. ಅಂದೇ ನಾನು ಶಪಥ ಮಾಡಿದ್ದೆ. ಸಿಎಂ ಆಗಿರುವವರೆಗೆ ನುಡಿದಂತೆ ನಡೆಯಬೇಕು. ಕೊಟ್ಟ ವಚನ ಈಡೇರಿಸಬೇಕು ಎಂದು. ಚುನಾವಣೆಗೆ ಮುಂಚಿತವಾಗಿ 165 ಭರವಸೆ ಕೊಟ್ಟಿದ್ದೆವು. ಈ ಪೈಕಿ 158 ಭರವಸೆ ಈಡೇರಿಸಿದೆ. ಜೊತೆಗೆ 30 ಹೊಸ ಕಾರ್ಯಕ್ರಮ ನೀಡಿದೆ ಎಂದರು.
ಇನ್ನು ಬರಗಾಲ ಹಾಗೂ ರೈತರ ಸಮಸ್ಯೆ ಹಿನ್ನೆಲೆಯಲ್ಲಿ ಸೊಸೈಟಿಯಲ್ಲಿದ್ದ 50 ಸಾವಿರ ರೂಪಾಯಿಯವರೆಗೆ ಮನ್ನಾ ಮಾಡಿದ್ದೆ. 22 ಲಕ್ಷ 25 ಸಾವಿರದ ರೈತರಿಗೆ 8165 ಕೋಟಿ ರೂಪಾಯಿಷ್ಟು ಸಾಲಮನ್ನಾ ಮಾಡಿದೆ. ಆದರೆ, ಅಧಿಕಾರಕ್ಕೆ ಬಂದ ಬಿಜೆಪಿ ರೈತರ ಸಾಲ ಮನ್ನಾ ಮಾಡಿತಾ ಎಂದು ಪ್ರಶ್ನಿಸಿದರು. ಈ ಮೂಲಕ ಲಿಂಗಾಯತ ಸಮುದಾಯದ ಮತ ಸೆಳೆಯುವ ಪ್ರಯತ್ನ ಮಾಡಿದರು.
ವಿ. ಎಸ್. ಉಗ್ರಪ್ಪ ರೈತರ ಸಂಕಷ್ಟದಲ್ಲಿದ್ದಾರೆ, ಸಾಲ ಮನ್ನಾ ಮಾಡುವಂತೆ ಆಗ ಮುಖ್ಯಮಂತ್ರಿಯಾಗಿದ್ದ ಬಿ. ಎಸ್. ಯಡಿಯೂರಪ್ಪ ಅವರಿಗೆ ಮನವಿ ಮಾಡಿದರು. ಆಗ ನಾವೇನೂ ಮನೆಯಲ್ಲಿ ನೋಟ್ ಮೆಷಿನ್ ಯಂತ್ರ ಇಟ್ಟಿದ್ದೇವಾ ಎಂದು ಯಡಿಯೂರಪ್ಪ ಹೇಳಿದ್ದರು. ಬಿಜೆಪಿಗೆ ರೈತರ ಬಗ್ಗೆ ಕಾಳಜಿ ಇಲ್ಲ ಎಂದು ಕಿಡಿಕಾರಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada