ಕೆ. ಎಸ್. ಎಲ್. ಸ್ವಾಮಿ

ಕೆ. ಎಸ್. ಎಲ್. ಸ್ವಾಮಿ ನಿರ್ಮಾಪಕರಾಗಿ, ನಿರ್ದೇಶಕರಾಗಿ, ಗಾಯಕರಾಗಿ, ಕೆಲವೊಮ್ಮೆ ನಟರಾಗಿ, ಚಿತ್ರಸಾಹಿತಿಗಳಾಗಿ, ಜೊತೆಗೆ ಕನ್ನಡ – ಸಂಸ್ಕೃತ ವಿದ್ವಾಂಸರಾಗಿ ಕನ್ನಡ ಚಿತ್ರರಂಗದಲ್ಲಿ ವಿಶಿಷ್ಟರಾಗಿದ್ದವರು.
ಕಿಕ್ಕೇರಿ ಶಾಮಣ್ಣ ಲಕ್ಷ್ಮೀನರಸಿಂಹಸ್ವಾಮಿ ಅವರು 1939ರ ಫೆಬ್ರವರಿ 21ರಂದು ಮೈಸೂರಿನಲ್ಲಿ ಜನಿಸಿದರು. ಅವರದ್ದು ಸಂಪ್ರದಾಯಸ್ಥ ಪುರೋಹಿತರ ಮನೆ. ಮೈಸೂರಿನಲ್ಲಿಯೇ ವಿದ್ಯಾರ್ಜನೆ ನಡೆಯಿತು. ವಿಜ್ಞಾನ ಪದವೀಧರರಾಗುವ ಮೊದಲೇ ಅವರಲ್ಲಿ ಚಿತ್ರರಂಗದ ಕುರಿತು ಒಲವು-ಆಕರ್ಷಣೆಗಳು ಮೂಡಿದ್ದವು.
ಸ್ವಾಮಿ ಅವರು ‘ರತ್ನಮಂಜರಿ’ ಚಿತ್ರದಲ್ಲಿ ಸಣ್ಣ ಪಾತ್ರವೊಂದರ ನಿರ್ವಹಣೆ ಮಾಡಿ ಚಿತ್ರರಂಗ ಪ್ರವೇಶಿಸಿದರು. ನಟನಾಗುವ ಹಂಬಲ ಹೊತ್ತು ಮದರಾಸಿಗೆ ಪ್ರಯಾಣ ಮಾಡಿದ ಅವರು ಜಿ.ವಿ.ಅಯ್ಯರ್ ಅವರ ‘ತಾಯಿಕರುಳು’ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾದರು. ಕೆ.ಎಸ್.ಎಲ್.ಸ್ವಾಮಿ ಕೆಲಕಾಲ ಎಂ. ಆರ್. ವಿಠಲ್, ಕಣಗಾಲ್ ಪ್ರಭಾಕರಶಾಸ್ತ್ರಿಯವರ ಜೊತೆ ಸಹಾ ಕೆಲಸ ಮಾಡಿದರು. ಸಾಹಿತ್ಯ ರಚನೆಯಲ್ಲೂ ಪರಿಣತಿ ಪಡೆದರು.
1966ರಲ್ಲಿ ತೆರೆಕಂಡ ‘ತೂಗುದೀಪ’ ಕೆ. ಎಸ್. ಎಲ್. ಸ್ವಾಮಿ ನಿರ್ದೇಶನದ ಮೊದಲ ಚಿತ್ರ. ನಟ ಉದಯಕುಮಾರ್ ಅವರು ಇವರಿಗಿಟ್ಟ ಹೆಸರು ರವೀ. ತೂಗುದೀಪದಲ್ಲಿ ಇವರು ಅಭಿನಯಿಸಿದ್ದಲ್ಲದೆ ಶ್ರೀನಿವಾಸ್ ಎಂಬ ನಟನನ್ನೂ ಪರಿಚಯಿಸಿದರು. ಅವರು ತೂಗುದೀಪ ಶ್ರೀನಿವಾಸ್ ಎಂದೇ ಖಳನಟನಾಗಿ ಖ್ಯಾತರಾದರು.
ನಲವತ್ತೊಂಭತ್ತು ಚಿತ್ರಗಳನ್ನು ನಿರ್ದೇಶಿಸಿದ್ದ ರವೀ ಅವರು ಸ್ವತಃ ಒಂಭತ್ತು ಚಿತ್ರಗಳನ್ನು ತಾವೇ ನಿರ್ಮಿಸಿದ್ದರು. ಇವರ ತಾರಾ ಪತ್ನಿ ಬಿ.ವಿ.ರಾಧಾ ಅವರು ನಾಲ್ಕು ಚಿತ್ರಗಳ ನಿರ್ಮಾಪಕಿಯಾಗಿದ್ದರು. ರವೀ ಅವರ ನಿರ್ದೇಶನದ ‘ಮಲಯ ಮಾರುತ’ ಸಂಗೀತ ಪ್ರಧಾನ ಸಿನಿಮಾ ಸ್ಕೋಪ್ ಚಿತ್ರ. ಸಂಗೀತ ಸಂಯೋಜಕ ವಿಜಯಭಾಸ್ಕರ್ ಅವರಿಗೆ ಈ ಚಿತ್ರದ ಸಂಗೀತಕ್ಕೆ ರಾಷ್ಟ್ರೀಯ ಮಟ್ಟದ ‘ಸುರ್ ಸಿಂಗಾರ್’ ಪ್ರಶಸ್ತಿ ಸಂದಿತು. ನಿರ್ದೇಶಕ ಪುಟ್ಟಣ್ಣಕಣಗಾಲ್ ಅವರು ರವಿ ಅವರಿಗಾಗಿ ‘ಶುಭಮಂಗಳ’ ಚಿತ್ರವನ್ನು ನಿರ್ದೇಶಿಸಿದರು. ಪುಟ್ಟಣ್ಣನವರ ನಿಧನದ ನಂತರ ಅಪೂರ್ಣವಾಗಿದ್ದ ‘ಮಸಣದ ಹೂವು’ ಮತ್ತು ಬಹಳ ವರ್ಷಗಳ ಹಿಂದೆ ಆರಂಭಗೊಂಡು ನಿಂತುಹೋಗಿದ್ದ ‘ಸಾವಿರ ಮೆಟ್ಟಿಲು’ ಚಿತ್ರಗಳನ್ನು ರವೀ ಅವರು ನಿರ್ದೇಶಿಸಿ, ಚಿತ್ರವನ್ನು ಬಿಡುಗಡೆಗೆ ಅಣಿ ಮಾಡಿಕೊಟ್ಟರು. ರವೀಯವರು ನಿರ್ದೇಶಿಸಿದ ಮಕ್ಕಳ ಚಿತ್ರ ‘ಜಂಬೂಸವಾರಿ’ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ‘ಹರಕೆಯ ಕುರಿ’ ಅತ್ಯುತ್ತಮ ಕಥಾ ಚಿತ್ರವೆಂದು 1992ರಲ್ಲಿ ರಾಷ್ಟ್ರೀಯ ರಜತಕಮಲ ಪ್ರಶಸ್ತಿ ಪಡೆಯಿತು. ಅಲ್ಲದೆ ಫ್ರಾಂಕ್ಫರ್ಟ್, ಇರಾನ್ ಇಟಲಿ, ಚಿಕಾಗೋ ಚಿತ್ರೋತ್ಸವಗಳಲ್ಲಿ ಪಾಲ್ಗೊಂಡಿತ್ತು.
ಕೆ. ಎಸ್. ಎಲ್. ಸ್ವಾಮಿ ಅವರ ಚಿತ್ರಗಳ ವಸ್ತುಗಳು ವೈವಿಧ್ಯಮಯವಾಗಿದ್ದವು. ಅರಿಶಿನ ಕುಂಕುಮ ತ್ಯಾಗಮಯಿ ಮಹಿಳೆಯ ಕತೆ. ‘ಭಾಗ್ಯಜ್ಯೊತಿ’ಗೆ ವರ್ಗಸಂಘರ್ಷದ ಹಿನ್ನೆಲೆ. ‘ಮಿಥಿಲೆಯ ಸೀತೆಯರು’ ವಂಶ ಪ್ರತಿಷ್ಠೆ ಹಾಗೂ ಮುಗ್ಧ ಹೆಣ್ಣು ಮಕ್ಕಳ ಸಂತಸದ ಬಾಳನ್ನು ಬಲಿತೆಗೆದುಕೊಳ್ಳುವ ದಾರುಣ ಕಥಾನಕ. ‘ಮಲಯ ಮಾರುತ’ ಸಂಗೀತಗಾರನ ಬದುಕಿನ ನಿರೂಪಣೆ. ‘ಹರಕೆಯ ಕುರಿ’ ರಾಜಕೀಯ ಹಿನ್ನಲೆ, ಹೊಂದಿದ್ದರೆ ‘ರಾಮಲಕ್ಷ್ಮಣ’ ವನ್ಯಸಿರಿ ರಕ್ಷಣೆ ಕಥೆ. ‘ಜಿಮ್ಮಿಗಲ್ಲು’ ಅನ್ಯಾಯಕ್ಕೆ ಸಿಲುಕಿ ಖೈದಿಯಾದವನ ಮನಮಿಡಿಯುವ ಕಥೆ.
ತೂಗುದೀಪ, ಲಗ್ನಪತ್ರಿಕೆ, ಗಾಂಧೀನಗರ, ಭಾಗ್ಯದ ಬಾಗಿಲು, ಮಂಕುದಿಣ್ಣೆ, ಅಣ್ಣ ತಮ್ಮ, ಅರಿಷಿಣ ಕುಂಕುಮ, ಲಕ್ಷ್ಮೀ ಸರಸ್ವತಿ, ಆರು ಮೂರು ಒಂಭತ್ತು, ಭಲೇ ಅದೃಷ್ಟವೋ ಅದೃಷ್ಟ, ಶ್ರೀ ಕೃಷ್ಣ ರುಕ್ಮಿಣಿ ಸತ್ಯಭಾಮ, ಕುಳ್ಳ ಏಜೆಂಟ್ 000, ದೇವರು ಕೊಟ್ಟ ತಂಗಿ, ಸಿಐಡಿ 72, ಭಾಗ್ಯ ಜ್ಯೋತಿ, ಮಕ್ಕಳ ಭಾಗ್ಯ,ತುಳಸಿ, ದೇವರ ದುಡ್ಡು, ಮಾಗಿಯ ಕನಸು, ಮುಗ್ದಮಾನವ, ಬನಶಂಕರಿ, ಅಳುಕು, ಡ್ರೈವರ್ ಹನುಮಂತು, ಭೂಮಿಗೆ ಬಂದ ಭಗವಂತ, ಜಿಮ್ಮಿಗಲ್ಲು, ಮತ್ತೆ ವಸಂತ, ಕ್ರಾಂತಿಯೋಗಿ ಬಸವಣ್ಣ, ಮುತ್ತೈದೆ ಭಾಗ್ಯ, ಕರುಣೆ ಇಲ್ಲದ ಕಾನೂನು, ಹುಲಿ ಹೆಜ್ಜೆ, ಪಿತಾಮಹ, ಮಲಯ ಮಾರುತ, ಮಿಥಿಲೆಯ ಸೀತೆಯರು, ಜಂಬೂ ಸವಾರಿ, ಹರಕೆಯ ಕುರಿ, ಮಹಾ ಎಡಬಿಡಂಗಿ ಮುಂತಾದವು ಕೆ. ಎಸ್. ಎಲ್. ಸ್ವಾಮಿ ಅವರ ನಿರ್ದೇಶನದ ಚಿತ್ರಗಳಲ್ಲಿ ಸೇರಿವೆ. ಸದಭಿರುಚಿ ಮತ್ತು ಸುಶ್ರಾವ್ಯ ಗೀತೆಗಳು ಸ್ವಾಮಿ ಅವರ ಚಿತ್ರಗಳ ವಿಶಿಷ್ಟತೆ. ಗಾಂಧೀನಗರ, ಮಲಯ ಮಾರುತ, ಭಾಗ್ಯಜ್ಯೋತಿ, ಜಿಮ್ಮಿಗಲ್ಲು, ಮಿಥಿಲೆಯ ಸೀತೆಯರು, ಭೂಮಿಗೆ ಬಂದ ಭಗವಂತ, ಮುಗ್ದ ಮಾನವ ಮುಂತಾದ ಚಿತ್ರಗಳ ಗೀತೆಗಳು ಇಂದಿಗೂ ಜನಪ್ರಿಯವೆನಿಸಿವೆ. ಸೋಲು ಗೆಲುವುಗಳ ಆಚೆಗೂ ಅವರು ಚಿತ್ರೋದ್ಯಮಿಗಳೊಂದಿಗೆ, ಕಲಾವಿದರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು.
ಸ್ವಾಮಿ ಅವರು ಜಿ.ವಿ.ಅಯ್ಯರ್ ಅವರ ಮಧ್ವಾಚಾರ್ಯ, ರಾಮಾನುಜಾಚಾರ್ಯ, ವಿವೇಕಾನಂದ, ಭಗವದ್ಗೀತೆ ಚಿತ್ರಗಳಿಗಾಗಿ ದುಡಿದರು. ಹಲವು ಚಿತ್ರಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ್ದಲ್ಲದೆ, ಚಿತ್ರಗೀತೆಗಳನ್ನೂ ರಚಿಸಿದರು. ಅವರು ಹಾಡಿದ ಶುಭಮಂಗಳದ ‘ಸೂರ್ಯಂಗೂ ಚಂದ್ರಂಗೂ ಬಂದಾರೆ ಮುನಿಸು’, ಸಂಘರ್ಷ ಚಿತ್ರದ ‘ಯೌವನದ ಹೊಳೆಯಲ್ಲಿ’, ‘ನಾಗರಹೊಳೆ’ಯ ‘ಇಲ್ಲೇ ಸ್ವರ್ಗ ಇಲ್ಲೇ ನರಕ’ ಗೀತೆಗಳೂ ಇಂದಿಗೂ ಜನಪ್ರಿಯ.
ಕೆ. ಎಸ್. ಎಲ್. ಸ್ವಾಮಿ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹಲವಾರು ಸಮಿತಿಗಳಲ್ಲಿ ಕೆಲಸ ಮಾಡಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘ ಇತ್ಯಾದಿ ಚಿತ್ರರಂಗಕ್ಕೆ ಸಂಬಂಧಿಸಿದ ಸಂಘಟನೆಗಳಲ್ಲಿ ಸಕ್ರಿಯವಾಗಿ ದುಡಿದಿದ್ದರು.
ಕಿರುತೆರೆಯಲ್ಲಿ, ‘ಸೃಷ್ಟಿ’ ಧಾರಾವಾಹಿಯನ್ನು ನಿರ್ದೇಶಿಸಿದ ರವೀಯವರು ‘ಮೂಡಲ ಮನೆ’ ಕಿರುತೆರೆ ಧಾರಾವಾಹಿಯಲ್ಲಿ ದೇಸಾಯಿಯವರ ಪಾತ್ರದಲ್ಲಿ ನಟಿಸಿ ಮನೆ ಮಾತಾಗಿದ್ದರು.
ಪರರ ಸುಖ ದುಃಖಗಳಿಗೆ ಮಿಡಿಯುತ್ತಿದ್ದ ರವೀ ಮೃದು ಹೃದಯಿ. ನಿರ್ದೇಶನಕ್ಕೂ ಸಿದ್ಧ, ನಟನೆಗೂ ಸೈ ಅಷ್ಟೇ ಅಲ್ಲ, ಪೌರೋಹಿತ್ಯಕ್ಕೂ ಸಿದ್ಧರೆನಿಸಿದ್ದರು. ಜಾತಿ ಮಿತಿಗಳನ್ನು ಮೀರಿ ಬಿ. ವಿ. ರಾಧಾ ಅವರನ್ನು ಪ್ರೇಮಿಸಿ ಮದುವೆ ಆಗಿ ಸಮರಸದ ಬಾಳ್ವೆ ನಡೆಸಿದರು. ಕನ್ನಡ ಚಿತ್ರರಂಗದಲ್ಲಿ ಕೆ.ಎಸ್.ಎಲ್.ಸ್ವಾಮಿ (ರವೀ) ಅವರು ಸಲ್ಲಿಸಿರುವ ಸಮಗ್ರ ಸೇವೆಗಾಗಿ 1994-95ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಸಂದಿತು.
ಕೆ. ಎಸ್. ಎಲ್. ಸ್ವಾಮಿ ಅವರು 2015ರ ಅಕ್ಟೋಬರ್ 20ರಂದು ಈ ಲೋಕವನ್ನಗಲಿದರು. ಅವರು ಚಿತ್ರರಂಗದಲ್ಲಿ ಉಳಿಸಿಹೋದ ಶ್ರದ್ಧೆ, ಮಾಡಿದ ಕೆಲಸ ಮರೆಯುವಂತದ್ದಲ್ಲ. ಅವರ ಪತ್ನಿ ಬಿ. ವಿ. ರಾಧಾ ಅವರ ಕೊಡುಗೆಯೂ ಕಲಾ ಲೋಕಕ್ಕೆ ಮಹತ್ವದ್ದು. ಈ ದಂಪತಿಗಳು ತಾವು ಈ ಲೋಕವನ್ನಗಲುವಾಗ ತಮ್ಮ ದೇಹವನ್ನೂ ವ್ಯರ್ಥ ಮಾಡದೆ ವೈದ್ಯಕೀಯಲೋಕಕ್ಕೆ ದಾನ ಮಾಡಿಹೋದವರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಋತ್ವಿಕ್ ಸಿಂಹ

Mon Feb 21 , 2022
ಋತ್ವಿಕ್ ಸಿಂಹ ಕನ್ನಡ ರಂಗಭೂಮಿಯ ಪ್ರಮುಖ ಹೆಸರು. ಪ್ರತಿಭಾವಂತ ನಿರ್ದೇಶಕರಾಗಿ, ನಟರಾಗಿ ಮತ್ತು ಬರಹಗಾರಾಗಿ ಅವರು ಮಹತ್ವದ ಕೆಲಸ ಮಾಡುತ್ತಾ ಬಂದಿದ್ದಾರೆ. ಕನ್ನಡ ರಂಗಭೂಮಿ, ಸಿನಿಮಾ ಮತ್ತು ಸಾಂಸ್ಕೃತಿಕ ಲೋಕದ ದಿಗ್ಗಜರಾದ ಸಿ. ಆರ್. ಸಿಂಹ ಮತ್ತು ಶಾರದಾ ಸಿಂಹ ದಂಪತಿಗಳ ಪುತ್ರರಾದ ಋತ್ವಿಕ್ ಸಿಂಹ 1974ರ ಫೆಬ್ರವರಿ 21ರಂದು ಜನಿಸಿದರು. ಶ್ರೀ ಸರಸ್ವತಿ ವಿದ್ಯಾಮಂದಿರ, ನ್ಯಾಷನಲ್ ಹೈಸ್ಕೂಲುಗಳಲ್ಲಿ ಶಾಲಾ ಶಿಕ್ಷಣ ಪಡೆದ ಋತ್ವಿಕ್ ಸಿಂಹ, ಹೈಸ್ಕೂಲಿಗೆ ಬರುವಷ್ಟರಲ್ಲಿಯೇ ಅನೇಕ […]

Related posts

Advertisement

Wordpress Social Share Plugin powered by Ultimatelysocial