ಒನ್ ಕಟ್ ಟೂ ಕಟ್ ಸಿನಿಮಾ ಮೂಲಕ ಮೊದಲ ಬಾರಿಗೆ ಡರೆಕ್ಟರ್ ಕ್ಯಾಪ್ ಧರಿಸಿರುವ ವಂಸೀಧರ್ ಭೋಗರಾಜು ಮನರಂಜನಾ ಉದ್ಯಮಕ್ಕೆ ಹಳಬರು. ಹಲವು ವರ್ಷಗಳಿಂದ ಪಂಕ್ಚರ್ ಶಾಪ್ ಎನ್ನುವ ತಂಡ ಕಟ್ಟಿಕೊಂಡು ವಂಸೀಧರ್ ಸ್ಟ್ಯಾಂಡಪ್ ಕಾಮಿಡಿ ಮಾಡುತ್ತಿದ್ದರು. ಆ ದಿನಗಳಿಂದಲೇ ಅವರಿಗೂ ದಾನಿಶ್ ಸೇಟ್ ಅವರಿಗೂ ಗೆಳೆತನ.
ಹಂಬಲ್ ಪೊಲಿಟಿಷಿಯನ್ ನೊಗ್ರಾಜ್ ಸಿನಿಮಾದಲ್ಲಿ ಕ್ಯಾಮೆರಾ ಹಿಂದಿನ ಕೆಲಸಗಳಲ್ಲಿ ತೊಡಗಿಕೊಂಡ ವಂಸೀಧರ್ ಅವರಿಗೆ ತಾವೂ ಸಿನಿಮಾ ಮಾಡಬಲ್ಲರೆಂಬ ವಿಶ್ವಾಸ ಮೂಡಿತ್ತು. ಅದರ ಔಟ್ ಪುಟ್ ‘ಒನ್ ಕಟ್ ಟೂ ಕಟ್’ ಕನ್ನಡ ಸಿನಿಮಾ. ಕನ್ನಡ ಚಿತ್ರರಂಗದಲ್ಲಿ ಖಾತೆ ತೆರೆಯುತ್ತಿರುವ ವಂಸೀಧರ್ ಭೋಗರಾಜು ಜೊತೆ ನಡೆಸಿದ ಸಂದರ್ಶನ ಇಲ್ಲಿದೆ. ಪ್ರಶ್ನೆ ನಮ್ದು ಉತ್ತರ ವಂಸೀಧರ್ ಅವರದು. ‘ಒನ್ ಕಟ್ ಟೂ ಕಟ್’ ಸಿನಿಮಾ ಅಮೆಜಾನ್ ಪ್ರೈಮ್ ವಿಡಿಯೋನಲ್ಲಿ ಫೆ.3ರಂದು ಬಿಡುಗಡೆಯಾಗುತ್ತಿದೆ.
ಮನೇನಲ್ಲಿ ಕೆಲವು ಜವಾಬ್ದಾರಿಗಳಿದ್ದವು. ಹೀಗಾಗಿ ಕನಸುಗಳು ನೂರಾರಿದ್ದರೂ ಕೆಲಸಕ್ಕೆ ಹೋಗಲೇಬೇಕಿತ್ತು. ಅನಿವಾರ್ಯವಾಗಿ ಇಷ್ಟವಿಲ್ಲದೇ ಇದ್ದರೂ ಮಾರ್ಕೆಟಿಂಗ್ ಜಾಬ್ ಸೇರಿಕೊಂಡಿದ್ದೆ. ಕೆಲಸದಲ್ಲಿದ್ದುಕೊಂಡೇ ನನ್ನ ಕನಸುಗಳನ್ನು ಪೂರೈಸಿಕೊಳ್ಳಲು ಹೆಣಗಾಡಿದೆ. ನಂತರ ಸ್ಟ್ಯಾಂಡಪ್ ಕಾಮಿಡಿಯನ್ ಆದೆ. ಈಗ ಡೈರೆಕ್ಷನ್. ಎಲ್ಲಾರ್ಗೂ ಒಳಗಡೆ ಒಂದು ತುಡಿತ ಇರುತ್ತೆ. ನಂದೂ ಅದೇ ಕಥೆ. ನಮ್ಮೊಳಗಿನ ತುಡಿತ ನಿಜಕ್ಕೂ ಸ್ಟ್ರಾಂಗ್ ಆಗಿದ್ದರೆ ಹೇಗಾದರೂ ಅದು ಹೊರಗೆ ಬಂದೇ ಬರುತ್ತೆ. ನಾನೇ ಸಾಕ್ಷಿ.
ದಾನಿಶ್ ಸೇಟ್ ಕಾಲ್ಪನಿಕ ಪಾತ್ರಗಳ ಕ್ಯಾರೆಕ್ಟರ್ ಸ್ಕೆಚ್ ವಿಡಿಯೋಗಳಿಗೆ ಹೆಸರುವಾಸಿ ಅನ್ನೋದು ಎಲ್ಲಾರ್ಗೂ ಗೊತ್ತಿರುತ್ತೆ. ತುಂಬಾ ಹಿಂದೆ ಗೋಪಿ ಅನ್ನೋ ಕ್ರಾಫ್ಟ್ ಟೀಚರ್ ಪಾತ್ರದ ಕಾಮಿಡಿ ವಿಡಿಯೊ ಮಾಡಿದ್ರು. ಅದರಲ್ಲಿ ತಮಗೆ ಮದುವೆ ಆಗ್ತಿಲ್ಲ. ಯಾರಾದ್ರೂ ಮದುವೆ ಆಗ್ತೀರ ಅಂತ ರಿಕ್ವೆಸ್ಟ್ ಮಾಡ್ಕೊಂಡಿದ್ರು. ಅದನ್ನ ಜನರು ಎಷ್ಟೊಂದು ಸೀರಿಯಸ್ಸಾಗಿ ತೆಗೆದುಕೊಂಡ್ರು ಅಂದ್ರೆ 700 ಪ್ರಪೋಸಲ್ ಗಳು ಬಂದ್ವು. ಆವತ್ತು ಡಿಸೈಡ್ ಮಾಡಿದ್ವಿ ಗೋಪಿ ಅನ್ನೋ ಕ್ಯಾರೆಕ್ಟರ್ ಇಟ್ಟುಕೊಂಡು ಒಂದು ಸಿನಿಮಾ ಮಾಡಬೇಕು ಅಂತ.
ಡೈರೆಕ್ಟರ್ ಆಗ್ತಿದ್ದೀನಿ ಅನ್ನೋದು ನನ್ನ ಮನಸ್ಸಿಗೆ ಖಾತರಿಯಾಗುತ್ತಿದ್ದಂತೆಯೇ ಒಂದು ಜವಾಬ್ದಾರಿ ಬಂದುಬಿಟ್ಟಿತು. ನಿರ್ದೇಶಕರ ಮೇಲೆ ನಂಬಿಕೆಯಿಟ್ಟು ಪುಣ್ಯಾತ್ಮರು ಹಣ ಇನ್ವೆಸ್ಟ್ ಮಾಡ್ತಾರೆ. ಅವರು ಹಾಕೋ ಒಂದೊಂದು ಪೈಸೆಗೂ ಮೋಸ ಆಗಬಾರದು ಅನ್ನೋ ಕಾಳಜಿ ಬಂದುಬಿಡ್ತು.
ಸಿನಿಮಾದ ಮೊದಲ ಶೆಡ್ಯೂಲ್ ಮುಗಿದಾಗ ಪುನೀತ್ ಸರ್ ಮತ್ತು ಅಶ್ವಿನಿ ಮೇಡಮ್ ಇಬ್ಬರೂ ಸಲಹೆಗಳನ್ನು ಕೊಟ್ಟಿದ್ದರು. ಆ ಸಲಹೆಗಳು ತುಂಬಾ ಲಾಜಿಕಲ್ ಮತ್ತು ಕ್ರಿಯೇಟಿವ್ ಆಗಿರುತ್ತಿದ್ದವು. ಅವರಿಬ್ಬರ ಸಿನಿಮಾ ಜ್ಞಾನ ಊಹೆಗೂ ನಿಲುಕದ್ದು. ಅದು ಅನುಭವದಿಂದ ಬಂದಿದ್ದು. ನನ್ನಂಥ ಹೊಸಬನಿಗೆ ಅವರ ಸಂಪರ್ಕ, ಮಾರ್ಗದರ್ಶನ ದೊರೆತಿದ್ದು ನನ್ನ ಪುಣ್ಯ. ಪುನೀತ್ ರಾಜ್ ಕುಮಾರ್ ಅವರನ್ನು ನಾವು ಇಷ್ಟು ಬೇಗ ಕಳೆದುಕೊಳ್ಳಬಾರದಿತ್ತು.
ನೂರಾರು ಜನರು ಒಂದು ಕಥೆಯ ಮೇಲೆ ನಂಬಿಕೆ ಇಟ್ಟುಕೊಂಡು ಕೆಲಸ ಮಾಡುವುದೇ ಫಿಲಂ ಮೇಕಿಂಗ್ ನ ಬೆಸ್ಟ್ ಪಾರ್ಟ್. ಆ ಕಾಲ್ಪನಿಕ ಕಥೆಗೆ ಕಲಾವಿದರು ಜೀವ ತುಂಬುತ್ತಾರೆ. ಆ ಕಥೆ ನಾಳೆ ಲಕ್ಷಾಂತರ ಜನರ ಹೃದಯಗಳನ್ನು ತಟ್ಟುತ್ತದೆ. ಏನೋ ಒಂದು ಬದಲಾವಣೆಗೆ ಕಾರಣವಾಗುತ್ತದೆ ಎನ್ನುವುದಕ್ಕಿಂತ ದೊಡ್ಡದು ಬೇರೇನಿದೆ.
ಕಥೆ ಹೇಳಲು ಮತ್ತು ಹೆಚ್ಚು ಹೆಚ್ಚು ಜನರನ್ನು ತಲುಪಲು ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮ ಸಿನಿಮಾ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada