ಮಹಾನ್ ಕಲಾವಿದೆ ಪಂಡರೀಬಾಯಿ ಜೀವನ ಚರಿತ್ರೆ!

1930ರ ವರ್ಷದಲ್ಲಿ ಜನಿಸಿದ ಪಂಡರೀಬಾಯಿಯವರು ಕನ್ನಡ, ತಮಿಳು, ತೆಲುಗು ಭಾಷೆಗಳ ಚಲನಚಿತ್ರ ಅಭಿಮಾನಿಗಳ ಹೃದಯದಲ್ಲಿ ತುಂಬಾ ತುಂಬಾ ಹತ್ತಿರವಾಗಿ ನಿಲ್ಲುವವರು.
ತಾಯಿಗಿಂತ ಹೃದಯಕ್ಕೆ ಹತ್ತಿರರಾದವರು ಯಾರಿರಲು ಸಾಧ್ಯ! ನಾವು ಸಿನಿಮಾರಂಗದಲ್ಲಿ ಎಷ್ಟೆಷ್ಟೋ ತಾರೆಯರನ್ನು ನೋಡಿರುತ್ತೇವೆ. ಆದರೆ ಸಿನಿಮಾ ರಂಗದಲ್ಲಿನ ಶ್ರೇಷ್ಠ ತಾಯಿ ಮಾತ್ರ ಪಂಡರೀಬಾಯಿ. ವಿವೇಕಾನಂದರ ಒಂದು ಮಾತು ಆಗಾಗ ನೆನಪಾಗುತ್ತದೆ. ವಿದೇಶಿ ಸಂಸ್ಕೃತಿಗೂ ಭಾರತೀಯ ಸಂಸ್ಕೃತಿಗೂ ಇರುವ ಪ್ರಮುಖ ವೆತ್ಯಾಸವೆಂದರೆ ಹೆಣ್ಣನ್ನು ನೋಡುವ ದೃಷ್ಟಿ. ನಮ್ಮ ಭಾರತೀಯ ಹೃದಯಕ್ಕೆ ಹೆಣ್ಣಿನ ಬಗ್ಗೆ ಮೂಡುವ ಆದ್ಯ ಪರಿಕಲ್ಪನೆ ಎಂದರೆ ತಾಯಿ. ಪಂಡರೀಬಾಯಿಯವರು ಅಭಿನಯಿಸಿರುವ ನಾಯಕಿ ಪಾತ್ರಗಳನ್ನು ಸಹಾ ನಾವು ಸಾಕಷ್ಟು ನೋಡಿದ್ದೇವೆ. ಆ ಪಾತ್ರಗಳಲ್ಲೂ ನಮಗೆ ಪಂಡರೀಬಾಯಿಯವರು ಮೂಡಿಸುವ ಭಾವನೆ ಎಂದರೆ ಅವರೊಬ್ಬ ಮಮತಾಮಯಿ ತಾಯಿ. ಹೀಗಾಗಿ ಜನ ಅವರನ್ನು ಪಂಡರೀಬಾಯಿ ಎಂದು ಮಾತ್ರವಲ್ಲ ಪಂಡರೀತಾಯಿ ಎಂದೂ ಗುರುತಿಸುವುದುಂಟು.ಪಂಡರೀಬಾಯಿ ಅವರು ನಿರ್ವಹಿಸಿದ ಅನೇಕ ಪಾತ್ರಗಳು ನೆನಪಾಗುತ್ತವೆ. ‘ಲೀಲಾಮಯ ಹೇ ದೇವ ನೀ ತೋರು ದಯಾ ಭಾವ ಗುರಿ ಕಾಣದಿದೆ ಜೀವ ನೆರವಾಗೆಲೊ ದೇವ’ ಎಂದು ಹಾಡುವ ಪಾತ್ರದಲ್ಲಿ ಅವರು ಬೇಡುವಾಗ ಆ ಕರೆಯಲ್ಲಿನ ಅವರ ಆರ್ತತೆ ನಮ್ಮೊಳಗೆ ಅಡಗಿರುವ ಆಧ್ಯಾತ್ಮ ಭಾವಕ್ಕೆ ಶಾಂತಸ್ವರೂಪದ ಹಿತ ನೀಡುತ್ತದೆ. ಈ ಗೀತೆಯಿರುವ ‘ನವಜೀವನ’ ಚಿತ್ರದಲ್ಲಿ ವೈದ್ಯರಾಗಿ ಜನಸೇವೆಯ ಕುರಿತು ಚಿಂತಿಸುವ ಅವರ ಪಾತ್ರ ಕರುಣೆಯೇ ಮೂರ್ತಿವೆತ್ತಂತ ಅನುಭವ ಕೊಡುತ್ತದೆ. ‘ಸಂಧ್ಯಾರಾಗ’ ಚಿತ್ರದಲ್ಲಿ ಮಲತಾಯಿಯಾದರೂ ಲಕ್ಷಣ ಪಾತ್ರಧಾರಿಯಾದ ರಾಜ್ ಕುಮಾರ್ ಅವರಿಗೆ ತಮ್ಮ ಹೃದಯವನ್ನೇ ಮುಡಿಪಾಗಿಟ್ಟ ತಾಯಿಯಂತೆ ಅವರು ಕಾಣುವ ರೀತಿ ಹೇಗೆ ತಾನೇ ಮರೆಯಲು ಸಾಧ್ಯ. ‘ನಮ್ಮ ಮಕ್ಕಳು’ ಚಿತ್ರ. ಓಹ್. ಆ ಪುಟ್ಟ ಮಕ್ಕಳ ತಾಯಿಯಾಗಿ ‘ನಿನ್ನೋಲುಮೆ ನಮಗಿರಲಿ ತಂದೆ’ ಎಂದು ತನ್ನ ಕುಟುಂಬ, ಮಕ್ಕಳು, ದೇವರಿಗಾಗಿನ ಒಲುಮೆ ಇವೆಲ್ಲವನ್ನೂ ತಮ್ಮ ಅಭಿವ್ಯಕ್ತಿಯಲ್ಲಿ ಮೂಡಿಸುವ ಅವರ ತನ್ಮಯತೆ ಹೃದಯಕ್ಕೆ ತುಂಬಾ ಹತ್ತಿರವಾಗುತ್ತದೆ. ಅವರ ಮತ್ತೊಂದು ಅಂತದೇ ಪಾತ್ರ ಅನುರಾಧಾ ಚಿತ್ರದ್ದು. ‘ಸತ್ಯಹರಿಶ್ಚಂದ್ರ’ ಚಿತ್ರದಲ್ಲಿ ಅವರ ಪಾತ್ರ ನಿರ್ವಹಣೆ ರಾಜ್ ಕುಮಾರ್, ಉದಯ ಕುಮಾರ್, ಎಂ. ಪಿ. ಶಂಕರ, ನರಸಿಂಹರಾಜು ಇವರುಗಳ ಮೇರು ಮಟ್ಟದ ಅಭಿನಯಕ್ಕೆ ಸರಿ ಸಮಾನವಾಗಿ ನಿಲ್ಲುತ್ತದೆ. ಹೀಗೆ ಪಂಡರೀತಾಯಿ ಅವರ ಅಭಿನಯವನ್ನು ಒಂದಾದ ಮೇಲೊಂದರಂತೆ ಹೆಸರಿಸುತ್ತಾ ಹೋಗಬಹುದು.ಪಂಡರೀಬಾಯಿ ಚಿಕ್ಕ ವಯಸ್ಸಿನಲ್ಲೇ ಸೊಗಸಾಗಿ ಹರಿಕಥೆ ಮಾಡುತ್ತಿದ್ದರು. ಅದು ಅವರ ತವರು ಮನೆಗೆ ಬಂದ ಬಳುವಳಿ. ಅವರ ತಂದೆ ಹರಿಕಥಾ ವಿದ್ವಾಂಸರಾಗಿದ್ದರು. ನಾನು ಪುಟ್ಟವನಿದ್ದಾಗ ಪ್ರಖ್ಯಾತ ಹರಿಕಥಾ ವಿದ್ವಾಂಸರಾಗಿದ್ದ ಅವರ ಸಹೋದರ ವಿಮಲಾನಂದ ದಾಸರು ಹಾಸನದಲ್ಲಿ ನಮ್ಮ ಮನೆಯಲ್ಲಿ ಹಲವು ದಿನ ಇದ್ದು ನಮ್ಮ ಮನೆ ಬಳಿ ಇದ್ದ ರಾಮ ಮಂದಿರದಲ್ಲಿ ಹರಿಕಥಾ ಕಾರ್ಯಕ್ರಮ ನಡೆಸಿಕೊಡುತ್ತಿದ್ದುದು ಚೆನ್ನಾಗಿ ನೆನಪಿದೆ. ಒಮ್ಮೆ ಪುಟ್ಟ ಹುಡುಗಿ ಪಂಡರೀಬಾಯಿ ಹರಿಕಥಾ ಕಾರ್ಯಕ್ರಮ ನೀಡಿದಾಗ ಆ ಕಾರ್ಯಕ್ರಮದಲ್ಲಿ ಅಜ್ಞಾತವಾಗಿ ಪ್ರೇಕ್ಷಕ ವರ್ಗದಲ್ಲಿ ಸೇರಿಕೊಂಡಿದ್ದವರು ಸಂಗೀತ ಕಲಾನಿಧಿ ಪಿಟೀಲು ಚೌಡಯ್ಯನವರು. ಈ ಹುಡುಗಿಯ ಸಾಮರ್ಥ್ಯವನ್ನು ಕಂಡು ತಾವು ನಿರ್ಮಿಸಿದ ‘ವಾಣಿ’ ಚಿತ್ರದಲ್ಲಿ ಅವರಿಗೆ ಅಭಿನಯಿಸಲು ಆಹ್ವಾನ ನೀಡಿದರು. ಹೀಗೆ ಅನಿರೀಕ್ಷಿತವಾಗಿ ಪಂಡರೀಬಾಯಿ ಚಲನಚಿತ್ರರಂಗವನ್ನು ಪ್ರವೇಶಿಸಿದರು. ಮುಂದೆ ಹೊನ್ನಪ್ಪ ಭಾಗವತರ್ ಅವರ ‘ಗುಣಸಾಗರಿ’ ಪಂಡರೀಬಾಯಿ ಅವರು ಮೊದಲು ನಾಯಕಿಯಾಗಿ ನಟಿಸಿದ ಚಿತ್ರ. ರಾಜ್ಕುಮಾರ್ ಅವರ ಮೊದಲ ಚಿತ್ರ ಎಚ್. ಎಲ್. ಎನ್ ಸಿಂಹ ಅವರ ‘ಬೇಡರ ಕಣ್ಣಪ್ಪ’ ಚಿತ್ರದಲ್ಲಿ ಪಂಡರೀಬಾಯಿ ಅವರೇ ನಾಯಕಿ. ತಮಿಳಿನ ಮೇರುನಟ ಶಿವಾಜಿ ಗಣೇಶನ್ ಅವರ ಮೊದಲ ಚಿತ್ರದಲ್ಲಿ ಕೂಡಾ ಪಂಡರೀಬಾಯಿ ಅವರೇ ನಾಯಕಿಯಾಗಿದ್ದರು. ಸೋದರಿ, ಹರಿಭಕ್ತ, ರಾಯರ ಸೊಸೆ, ಬಂಗಾರದ ಹೂವು, ಜೇನುಗೂಡು ಪಂಡರೀಬಾಯಿ ಅವರು ಅಂದಿನ ದಿನಗಳಲ್ಲಿ ನಟಿಸಿದ ಇನ್ನಿತರ ಕೆಲವು ಪ್ರಮುಖ ಚಿತ್ರಗಳು. ರಾಯರ ಸೊಸೆ, ಅನುರಾಧ ಮುಂತಾದವು ಅವರೇ ನಿರ್ಮಿಸಿದ ಚಿತ್ರಗಳು. ಶ್ರೀಕೃಷ್ಣಚೈತನ್ಯ ಸಭಾ ಎಂಬ ನಾಟಕ ಮಂಡಳಿಯನ್ನು ಕಟ್ಟಿ ಊರೂರುಗಳಲ್ಲಿ ನಾಟಕಗಳನ್ನು ಸಹಾ ಆಡಿದ್ದರು. ಅವರು ಕನ್ನಡ, ತಮಿಳು, ಹಿಂದಿ ಬಾಷೆಗಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ನಟಿಸಿದ ಚಿತ್ರಗಳು ಐನೂರಕ್ಕೂ ಹೆಚ್ಚು. ರಾಜ್ಕುಮಾರ್, ಎಂ ಜಿ ರಾಮಚಂದ್ರನ್, ಶಿವಾಜಿ ಗಣೇಶನ್, ಎನ್. ಟಿ. ರಾಮರಾವ್, ಅಕ್ಕಿನೇನಿ ನಾಗೇಶ್ವರರಾವ್, ರಾಜೇಶ್ ಖನ್ನ ಹೀಗೆ ಅವರ ಕಾಲದ ನಾಯಕನಟರಿಗೆ ಮತ್ತು ಮುಂದಿನ ತಲೆಮಾರಿನ ನಟರಿಗೆ ಕೂಡಾ ಅವರು ತಾಯಿಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಪಾಂಡುರಂಗನ ಭಕ್ತರಾದ ಅವರು ಚನ್ನೈನ ಕೋಡಂಬಾಕ್ಕಂನಲ್ಲಿ ತಮ್ಮ ಇಷ್ಟದೇವನಾದ ಪಾಂಡುರಂಗನಿಗಾಗಿ ಗುಡಿಯನ್ನು ನಿರ್ಮಿಸಿದ್ದರು. ಅವರ ತಂಗಿ ಮೈನಾವತಿ ಅವರು ನಿರ್ಮಿಸಿದ್ದ ಅಮ್ಮ, ಮನೆತನ ಎಂಬ ದೂರದರ್ಶನದ ಧಾರವಾಹಿಗಳಲ್ಲಿ ಕೂಡಾ ಪಂಡರೀಬಾಯಿ ಕಾಣಿಸಿಕೊಂಡಿದ್ದರು.ಪಂಡರೀಬಾಯಿಯವರಿಗೆ ಇಳಿವಯಸ್ಸಿನಲ್ಲಿ ಅಪಘಾತವಾಗಿ ಅವರ ಒಂದು ಕೈ ಶಕ್ತಿ ಕಳೆದುಕೊಳ್ಳುವ ಸ್ಥಿತಿ ಏರ್ಪಟ್ಟಿತು. ಎಂತಹವರಿಗೂ ಗೌರವ ತರುವ ಅವರ ಗುಣ ಚಿತ್ರರಂಗದ ಹಲವರಿಗೆ ಕೂಡ ಅವರಿಗೆ ಸಹಾಯ ಮಾಡಬೇಕೆಂಬ ಮನಸ್ಸು ನೀಡಿತು ಎಂದು ನನಗನ್ನಿಸಿದೆ. ಅವರು ತಮ್ಮ ಕೈ ಸಾಮರ್ಥ್ಯ ಕಳೆದುಕೊಂಡಿದ್ದ ದಿನದಲ್ಲಿ ಕೂಡಾ ಅವರಿಗೆ ಕೆಲವು ಪಾತ್ರಗಳನ್ನು ಕನ್ನಡ ಚಿತ್ರರಂಗ ಕೊಟ್ಟು ಅವರಿಗೆ ಸಹಾನುಭೂತಿ ಮತ್ತು ಗೌರವಗಳನ್ನು ಅರ್ಪಿಸಿತು. ರಾಜ್ಕುಮಾರ್ ಅವರು ಶ್ರೀಕಂಠ ವಿಷಕಂಠ ಎಂದು ಹಾಡುವ ಒಂದು ಗೀತೆಯಲ್ಲಿ ಒಂದೆಡೆ ತಾಯಿಯಾಗಿ ಕುಳಿತಿರುವ ಹಾಡಿನ ಚಿತ್ರಣ ಈಗಲೂ ಕಣ್ಣಲ್ಲಿ ನೆಲೆ ನಿಂತ ಹಾಗಿದೆ.ಡಾ. ರಾಜ್ಕುಮಾರ್ ಅವರು “ಚಿತ್ರರಂಗದಲ್ಲಿ ಪಂಡರೀಬಾಯಿ ಅಂತಹವರು ಸಿಗುವುದು ಸಾಧ್ಯವೇ ಇಲ್ಲ” ಎಂದು ಹೇಳಿದ್ದರು. ರಾಜ್ ಅವರ ಹೇಳಿರುವ ಮಾತಾದರೋ ಇಡೀ ಜನಸ್ತೋಮದ ಹೃದಯದ ಮಾತು ಕೂಡಾ ಆಗಿದೆ. ಕೆಲವರನ್ನು ಒಳ್ಳೆಯವರೆನ್ನಲು ಪುರಾವೆಗಳೇ ಬೇಕಾಗುವುದಿಲ್ಲ. ಅದು ಅವರ ವ್ಯಕ್ತಿತ್ವವೇ ಅಥವಾ ಅವರಿರುವ ರೀತಿಯೇ ಹಾಗೆ ಹೇಳಿಬಿಡುತ್ತದೆ. ಅದಕ್ಕೆ ಮಾತುಗಳು ಕೂಡಾ ಬೇಕಿರುವುದಿಲ್ಲ. ಖಂಡಿತ ಪಂಡರೀಬಾಯಿಯವರು ಆ ಉತ್ತಮತೆಗೆ ಸೇರಿದವರು. ಬಣ್ಣದ ಲೋಕದಲ್ಲಿದ್ದರೂ ಸಂತ ಹೃದಯಿ, ಮಾತೃಶಿರೋಮಣಿ ಆಕೆ. ಈ ತಾಯಿಯ ಆತ್ಮೀಯ ಭಾವಕ್ಕೆ ನಮ್ಮ ನಲ್ಮೆಯ ನಮನಗಳು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಘಂಟಸಾಲ ಚಲನಚಿತ್ರರಂಗದ ಮಹಾನ್ ಗಾಯಕರು. ಕಂಚುಕಂಠದ ಅವರ ಧ್ವನಿ ಅಮರವಾದದ್ದು.

Thu Feb 17 , 2022
ಹಿಂದಿನ ಪೀಳಿಗೆಯವರಲ್ಲಿ ಘಂಟಸಾಲ ಅವರ ಹಾಡುಗಳನ್ನು ಕೇಳದವರೇ ವಿರಳ. ಅಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪ್ರಾರಂಭ ಆಗುತ್ತಿದ್ದುದೇ ಘಂಟಸಾಲ ಅವರು ಹಾಡಿದ ಭಕ್ತಿಗೀತೆ “ನಮೋ ವೆಂಕಟೇಶ ನಮೋ ತಿರುಮಲೇಶ” ಎಂಬ ಹಾಡಿನಿಂದ. ಯಾವುದೇ ಗಣೇಶನ ಹಬ್ಬ ಬಂದರೆ ಘಂಟಸಾಲ ಹಾಡಿರುವ ಹಂಸಧ್ವನಿ ರಾಗದ “ವಾತಾಪಿ ಗಣಪತಿಂ ಭಜೇಹಂ” ಇರಲೇಬೇಕು. ತಿರುಪತಿಗೆ ಹೋದರೆ ಏಳೇಳು ಬೆಟ್ಟಗಳಲ್ಲೂ ಹೋದ ಹೋದೆಡೆಗಳಲ್ಲೆಲ್ಲಾ ಘಂಟಸಾಲ ಧ್ವನಿಯೇ ಮಾರ್ದನಿಸುತ್ತಿರುತ್ತದೆ. ಘಂಟಸಾಲ 1922ರ ಡಿಸೆಂಬರ್ 4ರಂದು ಆಂಧ್ರಪ್ರದೇಶದ ಕೃಷ್ಣಾಜಿಲ್ಲೆಯ […]

Advertisement

Wordpress Social Share Plugin powered by Ultimatelysocial