ಪ್ರಯಾಗ್ರಾಜ್ (ಉತ್ತರ ಪ್ರದೇಶ): ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿಯೂ ಆಗಿರುವ ಸಮಾಜವಾದಿ ಪಕ್ಷದ ನಾಯಕ, ಮಾಜಿ ಸಂಸದ ಮತ್ತು ಪಾತಕಿ ಅತೀಕ್ ಅಹ್ಮದ್ನ ಸಹಚರರ ವಿರುದ್ಧ ಕ್ರಮ ಕೈಗೊಂಡಿರುವ ಪ್ರಯಾಗ್ ರಾಜ್ ಅಭಿವೃದ್ಧಿ ಪ್ರಾಧಿಕಾರ ಬುಧವಾರ ಅತೀಕ್ ನಿಕಟವರ್ತಿ ಜಾಫರ್ ಅಹ್ಮದ್ ಎಂಬುವರ ಮನೆಯನ್ನು ಬುಲ್ಡೋಜರ್ ಬಳಸಿ ನೆಲಸಮಗೊಳಿಸಿದೆ.
ಅತೀಕ್ ಅವರ ಪತ್ನಿ ಶೈಸ್ತಾ ಪರ್ವೀನ್ ಈ ಹಿಂದೆ ಇದೇ ಮನೆಯಲ್ಲಿ ವಾಸಿಸುತ್ತಿದ್ದರು ಎಂದು ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಜಿತ್ ಸಿಂಗ್ ತಿಳಿಸಿದ್ದಾರೆ. ಅಲ್ಲದೆ ಉಮೇಶ್ ಪಾಲ್ ಕೊಲೆಗೂ ಕೆಲ ದಿನಗಳ ಮುನ್ನ ಶೂಟರ್ಗಳಿಗೆ ಈ ಮನೆಯಲ್ಲಿ ಆಶ್ರಯ ನೀಡಲಾಗಿತ್ತು ಎಂಬ ಆರೋಪವೂ ಇದೆ.
ಕಳೆದ ವಾರ ಧೂಮನ್ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಜೈತಿಪುರದಲ್ಲಿ ಉಮೇಶ್ ಪಾಲ್ ಮತ್ತು ಅವರ ಭದ್ರತಾ ಸಿಬ್ಬಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಬಿಎಸ್ಪಿ ಶಾಸಕ ರಾಜು ಪಾಲ್ ಕೊಲೆ ಪ್ರಕರಣದಲ್ಲಿ ಪಾಲ್ ಪ್ರಮುಖ ಸಾಕ್ಷಿಯಾಗಿದ್ದರು.
ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿ ಅರ್ಬಜ್ನನ್ನು ಸೋಮವಾರ ಪೊಲೀಸರು
ಎನ್ಕೌಂಟರ್ನಲ್ಲಿ ಕೊಂದಿದ್ದಾರೆ. ಈ ವೇಳೆ ಧೂಮನ್ಗಂಜ್ ಠಾಣೆಯ ಠಾಣಾಧಿಕಾರಿ ರಾಜೇಶ್ ಮೌರ್ಯ ಅವರೂ ಗಾಯಗೊಂಡಿದ್ದಾರೆ.
ಪಾಲ್ ಅವರ ಪತ್ನಿ ಜಯಾ ಪಾಲ್ ಅವರ ದೂರು ಆಧರಿಸಿ ಪಾತಕಿ ಅತೀಕ್ ಅಹ್ಮದ್, ಅವರ ಸಹೋದರ ಅಶ್ರಫ್, ಪತ್ನಿ ಶೈಸ್ತಾ ಪರ್ವಿನ್, ಇಬ್ಬರು ಪುತ್ರರು, ಸಹಾಯಕರಾದ ಗುಡ್ಡು ಮುಸ್ಲಿಂ ಮತ್ತು ಗುಲಾಮ್ ಸೇರಿದಂತೆ ಇತರ ಒಂಬತ್ತು ಮಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅತೀಕ್ ಪ್ರಸ್ತುತ ಗುಜರಾತ್ನ ಅಹಮದಾಬಾದ್ನ ಕಾರಾಗೃಹದಲ್ಲಿ ಬಂಧನದಲ್ಲಿದ್ದಾರೆ.
‘ಅತೀಕ್ ಎನ್ಕೌಂಟರ್ ಸಾಧ್ಯತೆ’
‘ಉತ್ತರ ಪ್ರದೇಶದ ಏಳು ಪೊಲೀಸರ ಕೊಂದ ಆರೋಪ ಎದುರಿಸುತ್ತಿದ್ದ ಪಾತಕಿ ವಿಕಾಸ್ ದುಬೆ ಮೂರು ವರ್ಷಗಳ ಹಿಂದೆ ಪೊಲೀಸ್ ಎನ್ಕೌಂಟರ್ ನಲ್ಲಿ ಬಲಿಯಾಗಿದ್ದರು. ದುಬೆಯನ್ನು ಕರೆದೊಯ್ಯತ್ತಿದ್ದ ಕಾರು ಕಾನ್ಪುರದ ಹೊರವಲಯದಲ್ಲಿ ಮುಗುಚಿ ಕೊಂಡಿತು. ಈ ವೇಳೆ ಆತ ತಪ್ಪಿಸಿಕೊಳ್ಳಲು ಮುಂದಾದಾಗ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದನು. ಪಾತಕಿ, ಮಾಜಿ ಸಂಸದ ಅತೀಕ್ ಅಹ್ಮದ್ ಅವರಿಗೂ ಅದೇ ರೀತಿಯ ಭವಿಷ್ಯ ಎದುರಾದರೂ ಆಶ್ಚರ್ಯವಿಲ್ಲ’ ಎಂದು ಬಿಜೆಪಿ ಸಂಸದ ಸುಬ್ರತ್ ಪಾಠಕ್ ಟ್ವೀಟ್ ಮಾಡಿದ್ದಾರೆ.
ಉತ್ತರ ಪ್ರದೇಶದ ಸಚಿವ ಜಿ.ಪಿ.ಎಸ್. ರಾಥೋರ್ ಅವರೂ ಇದೇ ರೀತಿಯ ಸುಳಿವನ್ನು ನೀಡಿದ್ದಾರೆ. ಈ ರೀತಿಯ ಅಪರಾಧಿಗಳ ವಾಹನ ಮುಗುಚುವ ಸಾಧ್ಯತೆ ಇದೆ ಎಂದಿದ್ದಾರೆ.
ರಕ್ಷಣೆ ಕೋರಿ ‘ಸುಪ್ರೀಂ’ಗೆ ಮನವಿ
‘ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ನನ್ನನ್ನು ಮತ್ತು ನನ್ನ ಕುಟುಂಬದವರನ್ನು ತಪ್ಪಾಗಿ ಸಿಲುಕಿಸಲಾಗಿದೆ ಮತ್ತು ನಕಲಿ ಎನ್ಕೌಂಟರ್ ಮೂಲಕ ಕೊಲ್ಲುವ ಸಾಧ್ಯತೆ’ ಎಂದು ಆರೋಪಿಸಿರುವ ಮಾಜಿ ಸಂಸದ ಅತೀಕ್ ಅಹ್ಮದ್, ಸೂಕ್ತ ರಕ್ಷಣೆ ಒದಗಿಸುವಂತೆ ಕೋರಿ ಸುಪ್ರೀಂಕೋರ್ಟ್ಗೆ ಬುಧವಾರ ಮನವಿ ಸಲ್ಲಿಸಿದ್ದಾರೆ.
‘ನನ್ನನ್ನು ನಾಶಪಡಿಸುವುದಾಗಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದಾರೆ. ಆದ್ದರಿಂದ ನನ್ನ ಮತ್ತು ನನ್ನ ಕುಟುಂಬದ ಸದಸ್ಯರ ಜೀವಕ್ಕೆ ಕುತ್ತು ಇದೆ’ ಎಂದು ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ‘ಉತ್ತರ ಪ್ರದೇಶದ ಪೊಲೀ ಸರು ನನ್ನನ್ನು ವಶಕ್ಕೆ ಪಡೆಯಲು ಕೋರುವ ಸಾಧ್ಯತೆ ಇದೆ. ಅಹಮದಾಬಾದ್ನಿಂದ ಪ್ರಯಾಗ್ರಾಜ್ಗೆ ಕರೆದೊಯ್ಯವ ವೇಳೆ ಅವರು ನನ್ನನ್ನು ಕೊಲ್ಲುವ ಸಾಧ್ಯತೆ ಇದೆ’ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada