ಬೆಂಗಳೂರು: 13ನೇ “ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ಕ್ಕೆ ಇಂದು(ಗುರುವಾರ) ಸಂಜೆ ಚಾಲನೆ ಸಿಗುತ್ತಿದೆ. ಇದರ ನಡುವೆಯೇ ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ “ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ’ವಕ್ಕೆ ಆರಂಭದಲ್ಲಿಯೇ ವಿವಾದಗಳು ಸುತ್ತಿಕೊಂಡಿವೆ.ಸಿನಿಮೋತ್ಸವದಲ್ಲಿ ಸಿನಿಮಾಗಳ ಆಯ್ಕೆ ಪ್ರಕ್ರಿಯೆ ಸರಿಯಾಗಿ ನಡೆದಿಲ್ಲ. ಅರ್ಹ ಸಿನಿಮಾಗಳನ್ನು ವಿನಾಕಾರಣ ಹೊರಗಿಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದರ ನಡುವೆಯೇ ಈಗಾಗಲೇ ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ, ವಿಮರ್ಶಕರಿಂದ ಪ್ರಶಂಸೆ ಪಡೆದ “ಪೆದ್ರೊ’ ಸಿನಿಮಾವನ್ನು “ಬೆಂಗಳೂರು ಸಿನಿಮೋತ್ಸವ’ದಿಂದ ಹೊರಗಿಡಲಾಗಿದೆ.ಇದು “ಪೆದ್ರೊ’ ಚಿತ್ರದ ನಿರ್ಮಾಪಕ ರಿಷಬ್ ಶೆಟ್ಟಿ ಹಾಗೂ ನಿರ್ದೇಶಕ ನಟೇಶ್ ಹೆಗಡೆ ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಬುಧವಾರ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘ ಪತ್ರವೊಂದನ್ನು ಬರೆದಿರುವ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ, “ಮೊನ್ನೆಯಷ್ಟೇ ಆಯೋಜಿಸಿದ್ದ ನಮ್ಮ ಸಿನಿಮಾದ ಪ್ರೈವೇಟ್ ಸ್ಕ್ರೀನಿಂಗ್ಗೆ ಆಗಮಿಸಿ ಸಿನಿಮಾವನ್ನು ಬಹುವಾಗಿ ಮೆಚ್ಚಿದ ಗಿರೀಶ್ ಕಾಸರವಳ್ಳಿ, ಎಂ.ಎಸ್. ಸತ್ಯು, ವಸಂತ ಮೋಕಾಶಿ, ವಿವೇಕ್ ಶಾನಭಾಗ್, ಕವಿತಾ ಲಂಕೇಶ್ ಹಾಗೂ ಇನ್ನಿತರ ಹಿರಿಯರು ತೋರಿದ ಪ್ರೀತಿ ನಮ್ಮ ಹೃದಯವನ್ನು ಆರ್ದಗೊಳಿಸಿದೆ. ಜನರೊಂದಿಗೆ ನಮ್ಮ ಸಿನಿಮಾವನ್ನು ಹಂಚಿಕೊಳ್ಳುವ ಆಸೆಯನ್ನು ಇಮ್ಮಡಿಯಾಗಿಸಿದೆ.ಜಗತ್ತಿನ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದು ವಿಮರ್ಶಕರಿಂದ ಪ್ರಶಂಸೆ ಪಡೆದ ಪೆದ್ರೊ, ನಮ್ಮ ಬೆಂಗಳೂರಿನ ಚಿತ್ರೋತ್ಸವಕ್ಕೆ ಯಾಕೋ ರುಚಿಸಿಲ್ಲ. ಕೆಲವೊಮ್ಮೆ ಕಹಿಗುಳಿಗೆಯನ್ನೂ ನುಂಗಬೇಕು ಆರೋಗ್ಯದ ದೃಷ್ಟಿಯಿಂದ. ನಮ್ಮ ಸಿನಿಮಾ ಚಿತ್ರೋತ್ಸವದಿಂದ ಅವಕಾಶ ವಂಚಿತವಾಯಿತು ಎಂಬುದು ಎಷ್ಟು ಸತ್ಯವೋ ನಮ್ಮದೇ ಊರಿನ ಜನ ತಮ್ಮದೇ ಸಿನಿಮಾವನ್ನು ವೀಕ್ಷಿಸಲು ವಂಚಿತರಾದರು ಎಂಬುದು ಅಷ್ಟೇ ಸತ್ಯ. ಸಿನಿಮಾ ಎಂಬ ನದಿಗೆ ಎಲ್ಲ ತೊರೆಗಳೂ ಬಂದು ಸೇರಬೇಕು. ನಮ್ಮಲ್ಲಿಯ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅದಕ್ಕೆ ತಡೆಗಾಲು ಒಡ್ಡುವ ಪ್ರಯತ್ನ ಮಾಡಿದ್ದಾರೆ’ ಎಂದು ರಿಷಬ್ ಶೆಟ್ಟಿ ಹಾಗೂ ನಿರ್ದೇಶಕ ನಟೇಶ್ ಹೆಗಡೆ ಬಹಿರಂಗ ಪತ್ರ ಬರೆದಿದ್ದಾರೆ.ಮಾ. 3ರಿಂದ ಬೆಂಗಳೂರಿನಲ್ಲಿ ಸಿನಿಮೋತ್ಸವ ಆರಂಭವಾಗಲಿದ್ದು, ಜಗತ್ತಿನ ಹಲವು ಭಾಷೆಯ ನೂರಾರು ಸಿನಿಮಾಗಳು ಪ್ರದರ್ಶನಗೊಳ್ಳಲಿವೆ. ಕನ್ನಡದ ಕೆಲವು ಚಿತ್ರಗಳನ್ನು ಹೊರತುಪಡಿಸಿ, ಜಾಗತಿಕವಾಗಿ ಅನೇಕ ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡ ಕನ್ನಡದ ಹಲವು ಸದಭಿರುಚಿ ಸಿನಿಮಾಗಳು ಈ ಸಿನಿಮೋತ್ಸವದಲ್ಲಿ ಆಯ್ಕೆ ಆಗದೇ ಇರುವುದು ನಿಜಕ್ಕೂ ವಿಪರ್ಯಾಸವೇ ಸರಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada