ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್ ನಲ್ಲಿ ಅಮಾಯಕರ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಉಪ್ಪಿನಂಗಡಿ ಠಾಣಾ ಪೊಲೀಸರು ಕಟ್ಟುಕಥೆಗಳನ್ನು ಸೃಷ್ಟಿಸಿ ಹರಿಯಬಿಡುತ್ತಿದೆ. ಇದು ಬರ್ಬರ ಲಾಠಿಚಾರ್ಜ್ ಪ್ರಮಾದವನ್ನು ಮುಚ್ಚಿ ಹಾಕುವ ಪಿತೂರಿಯಾಗಿದೆ ಎಂದು ಪಿಎಫ್ ಐ ರಾಜ್ಯ ಕಾರ್ಯದರ್ಶಿ, ಎ.ಕೆ.ಅಶ್ರಫ್ ಹೇಳಿದ್ದಾರೆ. ಮಂಗಳೂರು ನಗರದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಉಪ್ಪಿನಂಗಡಿ ಪೊಲೀಸ್ ಠಾಣಾ ಮುಂಭಾಗದಲ್ಲಿ ಡಿಸೆಂಬರ್ 14ರಂದು ನಡೆದ ಪ್ರತಿಭಟನೆಯ ವೇಳೆ ಪೊಲೀಸರ ಮೇಲೆ ಹಲ್ಲೆ, ಠಾಣೆಯ ಮೇಲೆ ಕಲ್ಲೆಸೆತ, ಆ್ಯಂಬುಲೆನ್ಸ್ನಲ್ಲಿ ಮಾರಕಾಯುಧ ಸಾಗಾಟ, ಗಲಭೆ ಪಿತೂರಿ, ಪೊಲೀಸ್ ಜೀಪ್ಗೆ ಹಾನಿ ಮೊದಲಾದ ಆರೋಪಗಳೆಲ್ಲವೂ ಸತ್ಯಕ್ಕೆ ದೂರವಾದವುಗಳು. ಪೊಲೀಸ್ ಲಾಠಿಚಾರ್ಜ್ ನಡೆಸಿದ ಬಳಿಕವೂ ಪೊಲೀಸ್ ಇನ್ಸ್ಪೆಕ್ಟರ್ ಪ್ರಸನ್ನ ಕುಮಾರ್ ಠಾಣೆಯ ಮುಂಭಾಗದಲ್ಲಿ ನಿಂತಿರುವುದು ಕಂಡುಬರುತ್ತದೆ.
ನಂತರ ದಾಖಲಿಸಲಾದ ಎಫ್.ಐ.ಆರ್ಗಳಲ್ಲಿ ಒಂದೊಂದೇ ಆರೋಪಗಳನ್ನು ಸೇರಿಸಲಾಯಿತು. ಈಗಾಗಲೇ ಪೊಲೀಸ್ ಠಾಣೆ ಮತ್ತು ಸುತ್ತಮುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಮತ್ತು ಹಾರ್ಡಿಸ್ಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅದರಲ್ಲಿ ಪ್ರತಿಭಟನಕಾರರು ದಾಳಿ ನಡೆಸುವ ದೃಶ್ಯಗಳಿದ್ದರೆ ಇನ್ನು ಕೂಡ ಯಾಕಾಗಿ ಬಹಿರಂಗಪಡಿಸಿಲ್ಲ? ಇಡೀ ದಿನ ನಡೆದ ಪ್ರತಿಭಟನೆಯಲ್ಲಿ ಪ್ರತಿಭಟನಕಾರರು ಶಾಂತಿಯುತವಾಗಿ ವರ್ತಿಸಿದ್ದರು ಮತ್ತು ಯಾವುದೇ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿರಲಿಲ್ಲ. ಪ್ರತಿಭಟನಕಾರರು ನಾಯಕರ ಸೂಚನೆಯನ್ನು ಪಾಲಿಸುತ್ತಾ ಸಂಯಮದೊಂದಿಗೆ ವರ್ತಿಸುತ್ತಾ ಬೇಡಿಕೆ ಈಡೇರಿಸುವಂತೆ ಘೋಷಣೆಗಳನ್ನಷ್ಟೇ ಕೂಗಿದ್ದರು. ಇದಕ್ಕೆ ವೀಡಿಯೋ ದೃಶ್ಯಾವಳಿಗಳೇ ಸಾಕ್ಷಿಯಾಗಿವೆ.
ಪೊಲೀಸರು ಇದೀಗ ಉಪ್ಪಿನಂಗಡಿ ಘಟನೆಯಲ್ಲಿ ತಮ್ಮ ಗಂಭೀರ ಪ್ರಮಾದವನ್ನು ಮುಚ್ಚಿಹಾಕಲು ಈ ರೀತಿಯ ಕಟ್ಟುಕಥೆಗಳನ್ನು ಹರಡುತ್ತಿರುವುದು ಸಮ್ಮತಾರ್ಹವಲ್ಲ. ಪ್ರತಿಭಟನಕಾರರು ಶಾಂತಿ ಕದಡುವ ಪ್ರಯತ್ನ ಮಾಡಿದ್ದರೇ, ಅದರ ಬಗ್ಗೆ ಸಾಕ್ಷ್ಯಗಳನ್ನು ಬಿಡುಗಡೆ ಮಾಡಲಿ ಹೊರತು ಸಾರ್ವಜನಿಕರ ದಿಕ್ಕು ತಪ್ಪಿಸಲು ಯತ್ನಿಸುವುದು ಸರಿಯಲ್ಲ. ಸಂಘಟನೆಯ ನಾಯಕರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುತ್ತಿರುವಾಗ, ಏಕಾಏಕಿ ಪೊಲೀಸರು ನಡೆಸಿದ ಲಾಠಿಚಾರ್ಜ್ ಹಲವಾರು ಪ್ರತಿಭಟನಕಾರರು ಗಾಯಗೊಳ್ಳಲು ಕಾರಣವಾಯಿತು. ಪೊಲೀಸರು ಸುಳ್ಳು ಸುದ್ದಿ ಹರಡದೇ ತಮ್ಮ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು ಎಂದರು. ಸುದ್ದಿಗೋಷ್ಠಿ ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲೆಯ ಅಧ್ಯಕ್ಷ ಇಜಾಝ್ ಅಹ್ಮದ್, ಪಾಪ್ಯುಲರ್ ಫ್ರಂಟ್ ಮಂಗಳೂರು ನಗರ ಅಧ್ಯಕ್ಷಖಾದರ್ ಕುಳಾಯಿ ಉಪಸ್ಥಿತರಿದ್ದರು.