ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಗಳು ಚುನಾವಣಾ ರಣಕಹಳೆ ಮೊಳಗಿಸಿವೆ. ದೊಡ್ಡ ದೊಡ್ಡ ನಾಯಕರನ್ನ ಕರೆಸಿ ಶಕ್ತಿಪ್ರದರ್ಶನ ನಡೀತಿದೆ. ಕಳೆದ ವಾರವಷ್ಟೇ ಬಿಜೆಪಿ ನಾಯಕರು ಪ್ರಧಾನಿ ಮೋದಿ ಕರೆಸಿ ಹವಾ ಎಬ್ಬಿಸಿದ್ರು. ಇದೀಗ ಕಾಂಗ್ರೆಸ್ ನಾಯಕರು ಇಂದಿರಾ ಗಾಂಧಿಯ ವರ್ಚಸ್ಸನ್ನೇ ಹೋಲುವ ಪ್ರಿಯಾಂಕಾ ಗಾಂಧಿಯನ್ನ ಇವತ್ತು ರಾಜ್ಯಕ್ಕೆ ಕರೆತರಲಿದ್ದಾರೆ.
ಜೊತೆಗೆ ಚುನಾವಣಾ ಕಣಕ್ಕೆ ಅಧಿಕೃತವಾಗಿ ಎಂಟ್ರಿಕೊಡಲಿದ್ದಾರೆ.
ರಾಜ್ಯದಲ್ಲಿ ಇದು ಹೇಳಿ ಕೇಳಿ ಚುನಾವಣಾ ವರ್ಷ. ಈ ವರ್ಷದಲ್ಲಿ ರಾಜ್ಯಕ್ಕೆ ಹೈ ನಾಯಕರು ಬರ್ತಾನೆ ಇರ್ತಾರೆ. ರಾಜ್ಯದಲ್ಲಿ ಧೂಳೆಬ್ಬಿಸಿ ಹೋಗ್ತಾನೆ ಇರ್ತಾರೆ. ಮೊನ್ನೆಯಷ್ಟೇ ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಟ್ಟು ಚುನಾವಣಾ ಕಹಳೆಯನ್ನ ಮೊಳಗಿಸಿದ್ರು. ಇದೀಗ ಕಾಂಗ್ರೆಸ್ನಿಂದ ಪ್ರಿಯಾಂಕಾ ಗಾಂಧಿ ಇವತ್ತು ರಾಜ್ಯಕ್ಕೆ ಆಗಮಿಸಲಿದ್ದಾರೆ. ಕಾಂಗ್ರೆಸ್ ಎಲೆಕ್ಷನ್ ಅಕಾಡಕ್ಕೆ ಹೊಸ ಹುರುಪು ತುಂಬಲಿದ್ದಾರೆ.
‘ನಾ ನಾಯಕಿ’ ಮೂಲಕ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ
ಇವತ್ತು ರಾಜ್ಯಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಭೇಟಿ ನೀಡಲಿದ್ದಾರೆ. ಇಂದು ನಡೆಯಲಿರುವ ನಾ ನಾಯಕಿ ಎಂಬ ಕಾಂಗ್ರೆಸ್ ಮಹಿಳಾ ನಾಯಕಿಯರ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಿಳಾ ನಾಯಕಿಯರ ಸಮಾವೇಶ ಹಮ್ಮಿಕೊಳ್ಳಲಾಗಿದ್ದು, ಈ ಸಮಾವೇಶದಲ್ಲಿ ಪ್ರಿಯಾಂಕಾ ಗಾಂಧಿ ಮುಖ್ಯ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಮಹಿಳಾ ನಾಯಕಿಯರ ಕೊಡುಗೆಗಳ ಬಗ್ಗೆ ನಾ ನಾಯಕಿ ಪ್ರಿಯಾಂಕಾ ಗಾಂಧಿ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ರಾಜ್ಯದ ಪ್ರತಿಯೊಂದು ಪಂಚಾಯತ್ನಿಂದ ಕನಿಷ್ಠ 10 ಮಂದಿ, ಬೂತ್ ಮಟ್ಟದಿಂದ ಕನಿಷ್ಠ 3 ಮಂದಿ ಮಹಿಳಾ ನಾಯಕಿಯರು ಭಾಗವಹಿಸಬೇಕು ಎಂದು ಸೂಚಿಸಲಾಗಿದೆ.
‘ನಾ ನಾಯಕಿ’ ರಾಜ್ಯಕ್ಕೆ ಭೇಟಿ, ಹೇಗಿದೆ ಟೈಮ್ ಟೇಬಲ್..?
- ಬೆಳಗ್ಗೆ 11.5೦ಕ್ಕೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮನ
- ಮಧ್ಯಾಹ್ನ 1.30ಕ್ಕೆ ‘ನಾ ನಾಯಕಿ’ ಸಮಾವೇಶದಲ್ಲಿ ಪ್ರಿಯಾಂಕಾ ಭಾಗಿ
- 2-3 ಗಂಟೆಗಳ ಕಾಲ ಸಮಾವೇಶದಲ್ಲಿ ಪ್ರಿಯಾಂಕಾ ಭಾಗಿ
- ಸಂಜೆ 6.45ಕ್ಕೆ ಪ್ರಿಯಾಂಕಾ ಗಾಂಧಿ ದೆಹಲಿ ಕಡೆಗೆ ಪ್ರಯಾಣ
- ಕೆಂಪೇಗೌಡ ವಿಮಾನ ನಿಲ್ದಾದಿಂದ ದೆಹಲಿಗೆ ಪ್ರಯಾಣ
- ಈಗಾಗಲೇ ಚುನಾವಣಾ ಅಖಾಡಕ್ಕೆ ಇಳಿದಿರೋ ಕಾಂಗ್ರೆಸ್ ನಾಯಕರು ತಮ್ಮ ಪಕ್ಷ ಆಡಳಿತಕ್ಕೆ ಬಂದ್ರೆ 200 ಯುನಿಟ್ ಉಚಿತ ವಿದ್ಯುತ್ ನೀಡೋದಾಗಿ ಘೋಷಿಸಿದ್ದಾರೆ. ಇದೀಗ ಮಹಿಳಾ ಸಮಾವೇಶದಲ್ಲಿ ರಾಜ್ಯದ ಮಹಿಳೆಯರಿಗೆ ವಿಶೇಷ ಯೋಜನೆಯ ಬಗ್ಗೆ ಎಐಸಿಸಿ ನಾಯಕಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಿಳೆಯರಿಗಾಗಿ ವಿಶೇಷ ಯೋಜನೆ ಘೋಷಣೆ ಮಾಡಲಿರೋ ಪ್ರಿಯಾಂಕಾ
ನಾ ನಾಯಕಿ ಸಮಾವೇಶದಲ್ಲಿ ಮಹಿಳೆಯರನ್ನ ಉದ್ದೇಶಿಸಿ ಪ್ರಿಯಾಂಕಾ ಗಾಂಧಿ ಭಾಷಣ ಮಾಡಲಿದ್ದಾರೆ. ಈ ವೇಳೆ ಮಹಿಳೆಯರಿಗಾಗಿ ವಿಶೇಷ ಯೋಜನೆಯನ್ನ ಘೋಷಣೆ ಮಾಡುವ ಸಾಧ್ಯತೆ ಇದೆ. ಪ್ರಿಯಾಂಕಾ ಗಾಂಧಿಯಿಂದಲೇ ರಾಜ್ಯ ನಾಯಕರು ಈ ಘೋಷಣೆಯನ್ನ ಹೊರಡಿಸುವ ಸಾಧ್ಯತೆ ಇದೆ. ಇನ್ನೂ ಹೊಸ ಯೋಜನೆ ಘೋಷಣೆ ಬಳಿಕ ಅದನ್ನ ಪ್ರಣಾಳಿಕೆಗೆ ಸೇರ್ಪಡೆ ಮಾಡಿ, ಪ್ರಣಾಳಿಕೆಯಲ್ಲಿನ ಯೋಜನೆಯನ್ನ ಅಡಳಿತಕ್ಕೆ ಬಂದಾಗ ಜಾರಿಗೊಳಿಸುವ ಭರವಸೆಯನ್ನ ನೀಡುವ ನಿರೀಕ್ಷೆ ಇದೆ.
ನಿರುದ್ಯೋಗಿ ಯುವತಿಯರಿಗೆ ತಿಂಗಳಿಗೆ 2 ಸಾವಿರ ರೂ.
ಈ ಬಾರಿ ಹೇಗಾದ್ರೂ ಮಾಡಿ ರಾಜ್ಯದಲ್ಲಿ ಅಧಿಕಾರ ಹಿಟಿಯಲು ಕಾಂಗ್ರೆಸ್ ಭಾರೀ ರಣತಂತ್ರ ಹೆಣೆಯುತ್ತಿದೆ. ಈಗಾಗಲೇ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಭರವಸೆಯನ್ನ ರಾಜ್ಯ ನಾಯಕರು ಹೇಳಿದ್ದಾರೆ. ಇನ್ನು 2ನೇ ಭರವಸೆಯನ್ನ ಇವತ್ತು ಪ್ರಿಯಾಂಕ ಗಾಂಧಿ ಅವ್ರು ಅನೌನ್ಸ್ ಮಾಡಲಿದ್ದಾರೆ. ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ ನಿರುದ್ಯೋಗಿ ಯುವತಿಯರಿಗೆ ತಿಂಗಳಿಗೆ 2 ಸಾವಿರ ರೂಪಾಯಿ ಭತ್ಯೆ ನೀಡುವ ಭರವಸೆಯನ್ನ ನಾ ನಾಯಕಿ ಸಮಾವೇಶದಲ್ಲಿ ಪ್ರಿಯಾಂಕ ಗಾಂಧಿ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ. ಇದರಿಂದ ಬಿಜೆಪಿ ಸಿಎಂ ಬೊಮ್ಮಾಯಿಗೆ ಠಕ್ಕರ್ ಕೊಟ್ಟಂತೆ ಆಗಲಿದೆ. ಇದೇ ಕಾರ್ಯಕ್ರಮದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಎಐಸಿಸಿ ನಾಯಕಿ ವಾಗ್ದಾಳಿ ನಡೆಸುವ ಸಾಧ್ಯತೆ ಇದೆ. ಗ್ಯಾಸ್ ಬೆಲೆ, ದಿನಬಳಕೆ ವಸ್ತುಗಳ ಬೆಲೆ ಏರಿಕೆ ಕುರಿತು ಬಿಜೆಪಿ ವಿರುದ್ಧ ಕಿಡಿಕಾರೋದು ನಿರೀಕ್ಷಿತವಾಗಿದೆ. ಒಟ್ಟಾರೆ, ಕಾಂಗ್ರೆಸ್ಗೆ ರಾಜ್ಯಕ್ಕೆ ಪ್ರಿಯಾಂಕ ಗಾಂಧಿ ಆಗಮಿಸ್ತಿರೋದು ಕೈಗೆ ಮತ್ತಷ್ಟು ಬಲ ತುಂಬಲಿದೆ. ಕೈ ಪಾಳಯದ ಚುನಾವಣಾ ಕಹಳೆ ಮತ್ತಷ್ಟು ಮಾರ್ಧನಿಸಲಿದೆ.
https://play.google.com/store/apps/details?id=com.speed.newskannada