ಬೆಂಗಳೂರಿನಲ್ಲಿ ನಡೆಯುತ್ತಿರುವ 2023ನೇ ಏರ್ ಇಂಡಿಯಾ ಶೋ ಉದ್ಘಾಟನೆಗೆ ಆಗಮಿಸಿದ್ದ ಪ್ರಧಾನಿ ನರೇದ್ರ ಮೋದಿ ಈ ವೇಳೆ ಕನ್ನಡ ಚಿತ್ರರಂಗದ ಕೆಲವು ಗಣ್ಯರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.
ಯಶ್, ರಿಷಬ್ ಶೆಟ್ಟಿ, ವಿಜಯ್ ಕಿರಗಂದೂರು ಹಾಗೂ ಅಶ್ವಿನಿ ಪುನೀತ್ ರಾಜ್ಕುಮಾರ್ ಜೊತೆ ಅಯ್ಯೋ ಶ್ರದ್ಧಾಅಲಿಯಾಸ್ ಶ್ರದ್ಧಾ ಜೈನ್ ಕೂಡ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ರಾಜಭವನದಲ್ಲಿ ಫೆಬ್ರವರಿ 12ರ ಸಂಜೆ ನಡೆದ ಡಿನ್ನರ್ ಪಾರ್ಟಿಯಲ್ಲಿ ಇವರುಗಳು ಮೋದಿ ಅವರನ್ನು ಭೇಟಿ ಮಾಡಿದ್ದಾರೆ. ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳು ಮಾತ್ರವಲ್ಲದೇ ಕ್ರೀಡಾಲೋಕದ ಕೆಲವು ಸಾಧಕರು ಕೂಡ ಈ ವೇಳೆ ಹಾಜರಿದ್ದರು. ಇಂಥ ಅಪರೂಪದ ಅವಕಾಶ ಸಿಕ್ಕಿದ್ದಕ್ಕೆ ಅಯ್ಯೋ ಶ್ರದ್ಧ ಸಂತಸ ವ್ಯಕ್ತಪಡಿಸಿದ್ದಾರೆ. ಮೋದಿ ಅವರನ್ನು ಭೇಟಿ ಮಾಡಿದ ಸಂದರ್ಭ ಹೇಗಿತ್ತು ಎಂಬುದನ್ನು ಅವರು ವಿವರಿಸಿದ್ದಾರೆ.
ಪ್ರಧಾನಿಯನ್ನು ಭೇಟಿ ಆಗುವಂತಹ ಅವಕಾಶ ಎಲ್ಲರಿಗೂ ಸಿಗುವಂಥದ್ದಲ್ಲ. ಅದರ ಸಲುವಾಗಿ ಕರೆಬಂದಾಗ ಶ್ರದ್ಧಾಗೆ ಮೊದಲಿಗೆ ನಂಬಿಕೆ ಬರಲಿಲ್ಲ. ‘ಪಿಎಂ ಕಚೇರಿಯಿಂದ ಫೋನ್ ಬಂದಾಗ ನನಗೆ ಆಶ್ಚರ್ಯ ಆಯ್ತು. ಪ್ರ್ಯಾಂಕ್ ಕಾಲ್ ಇರಬಹುದಾ ಅಂತ ವಿಚಾರಿಸಿದೆ. ನಂತರ ಅವರು ಖಚಿತ ಪಡಿಸಿದರು. ಏನೆಲ್ಲಾ ಪ್ರೋಟೋಕಾಲ್ ಫಾಲೋ ಮಾಡಬೇಕು ಎಂಬುದನ್ನು ವಿವರಿಸಿದರು. ಆಗಲೂ ನಾನು ನಂಬಲಿಲ್ಲ. ಫೋನ್ ಇಟ್ಟಮೇಲೆ ಆ ನಂಬರ್ ಯಾವುದು ಅಂತ ಗೂಗಲ್ ಮಾಡಿದ ಬಳಿಕ ನಿಜ ಅಂತ ತಿಳಿಯಿತು’ ಎಂದಿದ್ದಾರೆ ಅಯ್ಯೋ ಶ್ರದ್ಧಾ.
ರಾಜಭವನದಲ್ಲಿ ಸೇರಿದ್ದ ಗಣ್ಯರೆಲ್ಲರಿಗೂ ಶ್ರದ್ಧಾ ಬಗ್ಗೆ ತಿಳಿದಿತ್ತು. ‘ಜಾವಗಲ್ ಶ್ರೀನಾಥ್ ಅವರು ನನ್ನ ಹೆಸರು ಕರೆದು ಮಾತನಾಡಿಸಿದರು. ಅನಿಲ್ ಕುಂಬ್ಳೆ ಮತ್ತು ಅಶ್ವಿನಿ ಪುನೀತ್ ರಾಜ್ಕುಮಾರ್ ಕೂಡ ಚೆನ್ನಾಗಿ ನನ್ನ ಜೊತೆ ಬೆರೆತರು. ಅವರೆಲ್ಲರೂ ನನಗಿಂತ ತುಂಬ ದೊಡ್ಡ ಸೆಲೆಬ್ರಿಟಿಗಳು ಅವರನ್ನು ಭೇಟಿ ಮಾಡಿದ್ದು ಖುಷಿ ನೀಡಿದೆ’ ಎಂದು ಶ್ರದ್ಧಾ ಹೇಳಿದ್ದಾರೆ.
‘ನನ್ನನ್ನು ಭೇಟಿ ಆದಾಗ ಮೋದಿ ಅವರು ಅಯ್ಯೋ ಅಂತ ಹೇಳಿದರು. ಅದು ನನಗೆ ಆಶ್ಚರ್ಯ ಆಯಿತು. ದಕ್ಷಿಣ ಭಾರತವನ್ನು ಸಿನಿಮಾಗಳಲ್ಲಿ ಎಷ್ಟು ಚೆನ್ನಾಗಿ ತೋರಿಸಲಾಗುತ್ತಿದೆ ಅಂತ ಮೋದಿ ಹೊಗಳಿದರು. ಪುನೀತ್ ರಾಜ್ಕುಮಾರ್ ಅವರ ಗಂಧದ ಗುಡಿ ಬಗ್ಗೆ ಮಾತನಾಡಿದರು. ದಿಸ್ ಈಸ್ ಇಂಡಿಯಾ ಅಂತ ಹೇಳಿದರು. ಎಲ್ಲರ ಬೆನ್ನು ತಟ್ಟಿದರು. ನನ್ನ ಕೆಲಸವನ್ನು ಗುರುತಿಸಿದರು. ನಮ್ಮೆಲ್ಲರಿಂದ ಸಲಹೆಗಳನ್ನ ಕೇಳಿದರು’ ಎಂದಿದ್ದಾರೆ ಶ್ರದ್ಧಾ.
ಕಾಮಿಡಿ ಕ್ಷೇತ್ರದಲ್ಲಿ ಹುಡುಗರು ಜಾಸ್ತಿ ಇದ್ದಾರೆ. ಅಂಥದ್ದಲ್ಲಿ ನೀವು ಕೂಡ ಗುರುತಿಸಿಕೊಂಡಿದ್ದೀರಿ’ ಎಂದು ಶ್ರದ್ಧಾ ಅವರನ್ನು ಮೋದಿ ಹೊಗಳಿದ್ದಾರೆ. ಅದರ ಜೊತೆಗೆ ಒಂದು ಸಲಹೆ ಕೂಡ ನೀಡಿದ್ದಾರೆ. ‘ಡಿಜಿಟಲ್ ಕಂಟೆಂಟ್ ಕ್ಷೇತ್ರದಲ್ಲಿ ಹುಡುಗಿಯರಿಗೆ ಹೆಚ್ಚು ಬೆಂಬಲ ನೀಡಿ’ ಎಂದು ಮೋದಿ ಸಲಹೆ ನೀಡಿದ್ದಾಗಿ ಶ್ರದ್ಧಾ ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada