ಅಕ್ಷಯ್ ಕುಮಾರ್ ನಟನೆಯ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ಜೂನ್ 3 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದೆ. ಪೃಥ್ವಿರಾಜ್ ಚೌಹಾಣ್ ಕತೆ ಆಧರಿಸಿದ ಈ ಸಿನಿಮಾದ ವಿಶೇಷ ಪ್ರೀಮಿಯರ್ ಶೋ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ವೀಕ್ಷಿಸಿದ್ದಾರೆ.
ದಹೆಲಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಶೋ ಅನ್ನು ಅಮಿತ್ ಶಾ ತಮ್ಮ ಪತ್ನಿಯೊಂದಿಗೆ ನೋಡಿದ್ದಾರೆ. ಈ ಸಮಯದಲ್ಲಿ ಸಿನಿಮಾದ ನಾಯಕ ಅಕ್ಷಯ್ ಕುಮಾರ್, ನಿರ್ದೇಶಕ ಡಾ.ಚಂದ್ರಪ್ರಕಾಶ್ ದ್ವಿವೇದಿ ಸೇರಿದಂತೆ ಚಿತ್ರತಂಡದ ಇತರರು ಹಾಜರಿದ್ದರು.
ಸಿನಿಮಾ ವೀಕ್ಷಿಸಿ ಮಾತನಾಡಿರುವ ಅಮಿತ್ ಶಾ, ”ಸಾಮ್ರಾಟ್ ಪೃಥ್ವಿರಾಜ್’, ಮಹಾವೀರನೊಬ್ಬ ತನ್ನ ತಾಯ್ನಾಡಿಗಾಗಿ ಹೋರಾಡಿದ ವೀರತೆಯ ಕತೆ ಮಾತ್ರವಲ್ಲ, ಅದು ನಮ್ಮ ಸಂಸ್ಕೃತಿಯ ಪ್ರತಿಫಲನ. ನಮ್ಮ ಸಂಸ್ಕೃತಿಯಲ್ಲಿ ಮಹಿಳಾ ಸಬಲೀಕರಣದ ಹಾಸು ಹೊಕ್ಕಾಗಿತ್ತು ಎಂಬುದನ್ನು ಸಿನಿಮಾ ಮತ್ತೊಮ್ಮೆ ಹೇಳುತ್ತಿದೆ. ನಮ್ಮ 1000 ವರ್ಷಗಳ ಹೋರಾಟ ವ್ಯರ್ಥವಾಗಿಲ್ಲ, 2014 ರ ನಂತರ ನಮ್ಮಲ್ಲಿ ಒಂದು ಸಾಂಸ್ಕೃತಿಕ ಎಚ್ಚರಿಕೆ ಮೂಡಿದೆ. ಎಚ್ಚರವು, ಭಾರತವು ಈ ಹಿಂದೆ ಇದ್ದ ಸ್ಥಾನಕ್ಕೆ ಮತ್ತೊಮ್ಮೆ ಕರೆದುಕೊಂಡು ಹೋಗುತ್ತದೆ. ಹಲವು ಅಡೆತಡೆಗಳನ್ನು ದಾಟಿದ ಬಳಿಕ ಈಗ ನಮ್ಮ ಹೆಮ್ಮೆ, ನಮ್ಮ ಸಂಸ್ಕೃತಿ ‘ಸ್ವಧರ್ಮ’ ಎಂಬುದಾಗಿದೆ. ಅದು ನಮ್ಮ ವೈಭವವನ್ನು ನಮಗೆ ಮರಳಿ ನೀಡಲಿದೆ. ನಾನು ‘ಪೃಥ್ವಿರಾಜ್’ ಸಿನಿಮಾದ ಇಡೀ ತಂಡಕ್ಕೆ ಧನ್ಯವಾದ ಹೇಳುತ್ತೇನೆ. ವಿಶೇಷವಾಗಿ ಕಲಾ ನಿರ್ದೇಶನ ವಿಭಾಗಕ್ಕೆ” ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ನಟ ಅಕ್ಷಯ್ ಕುಮಾರ್, ”ನಾವು ಭಾರತ ಮಾತೆಯ ವೀರ ಪುತ್ರನಿಗೆ ಗೌರವ ಸಲ್ಲಿಸಲು ಈ ಸಿನಿಮಾ ಮಾಡಿದೆವು, ಇದರ ಪ್ರೀಮಿಯರ್ ಶೋಗೆ ಅಮಿತ್ ಶಾ ಅವರು ಆಗಮಿಸಿರುವುದು ನಮಗೆ ಖುಷಿಯ ವಿಚಾರ. ಪೃಥ್ವಿರಾಜ್ ಪಾತ್ರದಲ್ಲಿ ನಟಿಸಿರುವುದು ನನಗೆ ಬಹಳ ಗೌರವ ತಂದಿದೆ. ಪೃಥ್ವಿರಾಜ್ ಭಾರತದ ಸ್ವಾತಂತ್ರ್ಯದ ರಕ್ಷಣೆಗಾಗಿ ಹೋರಾಡಿ ಮಡಿದ ವೀರ ಸೇನಾನಿ. ಪೃಥ್ವಿರಾಜ್ ಜೀವನಕ್ಕೆ, ಅವರ ಹೊರಾಟಕ್ಕೆ ನಾನು ನಟನೆಯ ಮೂಲಕ ನ್ಯಾಯ ಒದಗಿಸಿದ್ದೇನೆ ಎಂದುಕೊಂಡಿದ್ದೇನೆ. ಪ್ರತಿಯೊಬ್ಬ ಭಾರತೀಯನೂ ಹೇಗೆ ತನ್ನ ಜೀವನ ನಡೆಸಬೇಕು ಎಂಬುದಕ್ಕೆ ಪೃಥ್ವಿರಾಜ್ ಉದಾಹರಣೆ. ನಮ್ಮ ಸಿನಿಮಾ ಕೋಟ್ಯಂತರ ಜನರಲ್ಲಿ ಸ್ಪೂರ್ತಿ ತುಂಬಲಿದೆ ಎಂಬ ವಿಶ್ವಾಸವಿದೆ ಎಂದಿದ್ದಾರೆ.
ಇನ್ನು ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾಕ್ಕೆ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿಯನ್ನು ಸಿಎಂ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ್ದಾರೆ. ಯೋಗಿ ಆದಿತ್ಯನಾಥ್ ಸಹ ಅವರಿಗಾಗಿ ಆಯೋಜಿಸಿದ್ದ ವಿಶೇಷ ಪ್ರೀಮಿಯರ್ ಶೋನಲ್ಲಿ ಸಿನಿಮಾ ನೋಡಿದ್ದಾರೆ. ಅಖಿಲೇಶ್ ಯಾದವ್ ಸಹ ‘ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ ನೋಡಿದ್ದಾರೆ.
ಕೆಲವು ತಿಂಗಳ ಹಿಂದೆ ಬಿಡುಗಡೆ ಆಗಿದ್ದ ‘ದಿ ಕಶ್ಮೀರ್ ಫೈಲ್ಸ್’ ಸಿನಿಮಾಕ್ಕೂ ಉತ್ತರ ಪ್ರದೇಶದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಉತ್ತರ ಪ್ರದೇಶ ಮಾತ್ರವೇ ಅಲ್ಲದೆ, ಕರ್ನಾಟಕ, ಮಧ್ಯಪ್ರದೇಶ, ಗುಜರಾತ್, ಹರ್ಯಾಣ ಇನ್ನೂ ಕೆಲವು ರಾಜ್ಯಗಳಲ್ಲಿ ಈ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಈಗ ‘ಸಾಮ್ರಾಟ್ ಪೃಥ್ವಿರಾಜ್’ ಸರದಿ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada