ಲಾಸ್ ಏಂಜಲೀಸ್, ಫೆಬ್ರವರಿ. 28: ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಆರೋಪಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ತಲೆಮರೆಸಿಕೊಂಡಿದ್ದು, ತಾವೇ ಒಂದು ರಾಷ್ಟ್ರವನ್ನು ಮಾಡಿಕೊಂಡಿದ್ದಾರೆ. ಅದಕ್ಕೆ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂದು ಕರೆಯಲಾಗಿದ್ದು, ಅದರ ಪ್ರತಿನಿಧಿಗಳು ಇತ್ತೀಚೆಗೆ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗವಹಿಸಿದ್ದಾರೆ.
ಈ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ಕಾಲ್ಪನಿಕ ‘ದೇಶ’ದ ಪ್ರತಿನಿಧಿಯು ವಿಶ್ವಸಂಸ್ಥೆಯ ಸಭೆಯಲ್ಲಿ ಮಾತನಾಡುತ್ತಾ, ನಿತ್ಯಾನಂದ ಅವರಿಗೆ ಕಿರುಕುಳ ನೀಡಲಾಗುತ್ತಿದ್ದು, ‘ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶರಿಗೆ’ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಸಭೆಯ ನಿಯೋಗದ ಚಿತ್ರಗಳನ್ನು ಸಹ ಆನ್ಲೈನ್ನಲ್ಲಿ ಹಂಚಿಕೊಳ್ಳಲಾಗಿದೆ.
ಕಾಲ್ಪನಿಕ ದೇಶ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ ವನ್ನು ಭಾರತದಿಂದ ತಪ್ಪಿಸಿಕೊಂಡು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ಸ್ಥಾಪಿಸಿದ್ದಾರೆ. ದೇಶದಲ್ಲಿ ಹಲವಾರು ಆಶ್ರಮಗಳನ್ನು ನಡೆಸುತ್ತಿದ್ದ ನಿತ್ಯಾನಂದ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳದ ಆರೋಪವಿದೆ. ನವೆಂಬರ್ 2019 ರಲ್ಲಿ, ಅವರ ಆಶ್ರಮದಲ್ಲಿ ಮಕ್ಕಳ ಅಪಹರಣದ ಆರೋಪದ ಬಗ್ಗೆ ತನಿಖೆ ನಡೆಸುತ್ತಿರುವಾಗ ಗುಜರಾತ್ ಪೊಲೀಸರು ಅವರು ಭಾರತದಿಂದ ತಲೆಮರೆಸಿಕೊಂಡಿದ್ದಾರೆ ಎಂದು ವರದಿ ಮಾಡಿದ್ದರು. ಇದಾದ ಕೆಲವೇ ತಿಂಗಳುಗಳಲ್ಲಿ ಅಜ್ಞಾತ ಸ್ಥಳದಲ್ಲಿ ಕೈಲಾಸ ರಾಷ್ಟ್ರವನ್ನು ‘ಸ್ಥಾಪಿಸಿದ್ದೇನೆ’ ಎಂದು ನಿತ್ಯಾನಂದ ಹೇಳಿಕೊಂಡಿದ್ದಾರೆ.
ಈ ‘ರಾಷ್ಟ್ರ’ವನ್ನು ವಿಶ್ವಸಂಸ್ಥೆಯು ಗುರುತಿಸಿದೆಯೇ ಎಂಬುದು ಅಸ್ಪಷ್ಟವಾಗಿದೆ. ಆದರೆ, ಫೆಬ್ರವರಿ 22 ರಂದು, ಮಾ ವಿಜಯಪ್ರಿಯಾ ನಿತ್ಯಾನಂದ ಎಂಬ ಮಹಿಳೆಯು 19 ನೇ ವಿಶ್ವಸಂಸ್ಥೆಯ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ (CESR) ಸಭೆಯಲ್ಲಿ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ವನ್ನು ಪ್ರತಿನಿಧಿಸಿದ್ದಾರೆ.
ವಿಶ್ವಸಂಸ್ಥೆಯ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿರುವ ವಿಡಿಯೋ ಪ್ರಕಾರ, ವಿಜಯಪ್ರಿಯಾ ಅವರು ‘ಕೈಲಾಸದಿಂದ ಖಾಯಂ ರಾಯಭಾರಿ’ಯಾಗಿದ್ದಾರೆ. ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಚರ್ಚಿಸಿದ ಸಭೆಯಲ್ಲಿ ವಿಜಯಪ್ರಿಯಾ, ಸುಸ್ಥಿರ ಅಭಿವೃದ್ಧಿ ಗುರಿಗಳು ಮತ್ತು ಹಿಂದೂ ಧರ್ಮದ ನಡುವೆ ಅಸ್ಪಷ್ಟ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ನಂತರ ತಮ್ಮ ‘ರಾಷ್ಟ್ರ’ದ ಸಂಸ್ಥಾಪಕ ನಿತ್ಯಾನಂದ ಅವರು ಹುಟ್ಟಿದ ದೇಶ ಭಾರತದಿಂದ ‘ಹಿಂಸೆಗೊಳಗಾಗುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ.
ಕೈಲಾಸವನ್ನು “ಹಿಂದೂ ಧರ್ಮದ ಮೊದಲ ಸಾರ್ವಭೌಮ ರಾಜ್ಯ” ಎಂದು ಹೇಳಿರುವ ವಿಜಯಪ್ರಿಯಾ, “ಕೈಲಾಸವನ್ನು ಹಿಂದೂ ಧರ್ಮದ ಸರ್ವೋಚ್ಚ ಮಠಾಧೀಶ ನಿತ್ಯಾನಂದ ಪರಮಶಿವಂ ಸ್ಥಾಪಿಸಿದ್ದಾರೆ. ಅವರು ಪ್ರಬುದ್ಧ ಹಿಂದೂ ನಾಗರಿಕತೆ ಮತ್ತು ಆದಿ ಶೈವ ಸ್ಥಳೀಯ ಕೃಷಿ ಬುಡಕಟ್ಟು ಸೇರಿದಂತೆ ಹಿಂದೂ ಧರ್ಮದ 10,000 ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುತ್ತಿದ್ದಾರೆ” ಎಂದು ತಿಳಿಸಿದ್ದಾರೆ. ಇದರ ಜೊತೆಗೆ ಗುರು ನಿತ್ಯಾನಂದ ಈ ಬುಡಕಟ್ಟುಗಳ ನಾಯಕ ಎಂದು ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada