ರಾಜಶೇಖರ ಭೂಸನೂರಮಠ 1938ರ ಜನವರಿ 16ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ಮೂಲತಃ ಗದಗ ಜಿಲ್ಲೆ ರೋಣ ತಾಲೂಕಿನ ನಿಡಗುಂದಿಯವರಾದ ಇವರ ತಂದೆ ಪ್ರಸಿದ್ಧ ಸಂಶೋಧಕರೂ ಸಾಹಿತಿಗಳೂ ಆಗಿದ್ದ ಪ್ರೊ. ಸಂ.ಶಿ.ಭೂಸನೂರಮಠ ಅವರು.
ರಾಜಶೇಖರ ಭೂಸನೂರಮಠ ಅವರ ಪ್ರಾಥಮಿಕ ಮತ್ತು ಮಾಧ್ಯಮಿಕ ವಿದ್ಯಾಭ್ಯಾಸ ಹುಬ್ಬಳ್ಳಿಯಲ್ಲಿ ನಡೆಯಿತು. ಹೈಸ್ಕೂಲು ಓದಿದ್ದು ಬೆಳಗಾವಿಯಲ್ಲಿ. ಮುಂಬೈನಲ್ಲಿ ಬಿ.ಎಸ್ಸಿ. ಪದವಿ ಪಡೆದು ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ಪದವಿ ಪಡೆದರು. ಬರ್ಟ್ರಂಡ್ ರಸೆಲ್ ಮತ್ತು ಎ.ಎನ್. ವೈಟ್ಹೆಡ್ ಅವರು ಮೆಚ್ಚಿದ ಬರಹಗಾರರಾಗಿದ್ದರು.
ರಾಜಶೇಖರ ಭೂಸನೂರಮಠ ಅವರು ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರಾಧ್ಯಾಪಕರಾಗಿ ವೃತ್ತಿ ಆರಂಭ ಮಾಡಿದರು. ಅವರದ್ದು ವೈಜ್ಞಾನಿಕ ಕಥೆಗಳ ನಿರಾಯಾಸ ಬರವಣಿಗೆ. ಮಕ್ಕಳಿಗಾಗಿ ಹಲವಾರು ವೈಜ್ಞಾನಿಕ ಕಥೆಗಳ ಪ್ರಕಟಣೆ ಮಾಡಿದರು. ನಿಯತಕಾಲಿಕಗಳಲ್ಲಿ ಅವರ ಅನೇಕ ಲೇಖನಗಳು ನಿರಂತರವಾಗಿ ಹರಿದುಬಂದವು. ಹಲವಾರು ಕಥೆ, ಕಾದಂಬರಿ, ನಾಟಕಗಳು ಮತ್ತು ಸಂಪಾದನೆಗಳನ್ನು ಮೂಡಿಸಿದರು. ಪ್ರಾಥಮಿಕ ಶಾಲಾಮಟ್ಟದಿಂದ ಸ್ನಾತಕೋತ್ತರ ಮಟ್ಟದವರೆಗೆ ಇಂಗ್ಲಿಷ್ ಮಾಧ್ಯಮದಲ್ಲಿ ಪಠ್ಯಪುಸ್ತಕ ರಚನೆ ಮಾಡಿದರು.
ರಾಜಶೇಖರ ಭೂಸನೂರಮಠ ಅವರ ವೈಜ್ಞಾನಿಕ ಕಾದಂಬರಿಗಳು ಹಲವಾರು ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡು ಕನ್ನಡದಲ್ಲಿ ಒಂದು ಹೊಸ ಶೈಲಿ ಮೂಡಿಸಿದ್ದವು. ‘ಸುಧಾ’ ವಾರಪತ್ರಿಕೆಯಲ್ಲಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ ಅವರ ‘ಮನ್ವಂತರ’ ಕಾದಂಬರಿಗೆ ಬಹುಮಾನ ಸಂದಿತ್ತು. ಮಹಾವಿಜಯ ಬಾನುಲಿಯಲ್ಲಿ ಬಹುಮಾನ ಪಡೆದು ಬಿತ್ತರಗೊಂಡ ನಾಟಕ. ಅವರು ವಿಜ್ಞಾನವನ್ನು ಜನಪ್ರಿಯಗೊಳಿಸುವಲ್ಲಿ ನೂರಾರು ಗೋಷ್ಠಿ, ಕಮ್ಮಟ, ಸಮ್ಮೇಳನಗಳಲ್ಲಿ ಭಾಗಿಯಾಗುತ್ತಿದ್ದರು. ಶಿಕ್ಷಣ ಕ್ಷೇತ್ರದಲ್ಲಿ ಹೊಸ ಹೊಸ ಪ್ರಯೋಗಗಳನ್ನು ನಡೆಸಿ ತಮ್ಮಶಿಷ್ಯವೃಂದವನ್ನು ಸದಾ ವಿಭಿನ್ನ ಅಭಿರುಚಿಗಳತ್ತ ಸೆಳೆಯುತ್ತಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: