ನಾಡಿನ ಧೀಮಂತ ರಾಜಕೀಯ ಮುಖಂಡರಲ್ಲೊಬ್ಬರಾದ ಹಾಗೂ ರೈತ ನಾಯಕ, ಹೋರಾಟಗಾರ ಎಂದೇ ಪ್ರಸಿದ್ಧವಾದ ಬಿ.ಎಸ್.ಯಡಿಯೂರಪ್ಪ ಅವರ ಜೀವನದ ಅತ್ಯಂತ ಮಹತ್ವದ ಘಟ್ಟವೊಂದು ಶುಕ್ರವಾರದಿಂದ ಆರಂಭವಾಗಲಿದೆ. ಐದು ದಶಕಗಳಿಂದ ರಾಜ್ಯ ರಾಜಕಾರಣದ ಪ್ರಮುಖ ಬಿಂದುವಾಗಿರುವ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ವಿಧಾನ ಮಂಡಲದಲ್ಲಿ ಭಾಗವಹಿಸುವ ಕೊನೆಯ ಅಧಿವೇಶನ ಶುಕ್ರವಾರದಿಂದ ಆರಂಭವಾಗಲಿದೆ.ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಯಡಿಯೂರಪ್ಪ ಈಗಾಗಲೆ ಹೇಳಿದ್ದಾರೆ. ಜತೆಗೆ, ತಮ್ಮ ಕರ್ಮಭೂಮಿ ಶಿಕಾರಿಪುರ ಕ್ಷೇತ್ರದಲ್ಲಿ ಪುತ್ರ ಬಿ.ವೈ. ವಿಜಯೇಂದ್ರ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದೂ ಘೋಷಣೆ ಮಾಡಿದ್ದಾರೆ. ಮತ್ತೆ ಸ್ಪರ್ಧೆ ಮಾಡಬೇಕು, ವಿಧಾನಸಭೆ ಪ್ರವೇಶಿಸಬೇಕು ಎಂದು ಅಭಿಮಾನಿಗಳು, ಪಕ್ಷದ ನಾಯಕರು ಒತ್ತಾಯ ಮಾಡುತ್ತಿದ್ದಾರಾದರೂ ಯಡಿಯೂರಪ್ಪ ಮಾತ್ರ ಬಿಲ್ಕುಲ್ ಒಪ್ಪುತ್ತಿಲ್ಲ.ಈ ಬಗ್ಗೆ ಜನವರಿ 29ರಂದು ಬೆಳಗಾವಿಯಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದ ಯಡಿಯೂರಪ್ಪ, ಈಗಾಗಲೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂದವನು ನಾನು. ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇನೆ. ಮತ್ತೆ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಪ್ರಶ್ನೆಯೇ ಇಲ್ಲ. ರಾಘವೇಂದ್ರ ಈಗಾಗಲೆ ಸಂಸದರಾಗಿದ್ದಾರೆ. ವಿಜಯೇಂದ್ರ ಸಹ ರಾಜಕಾರಣದಲ್ಲಿ ಬೆಳೆಯುತ್ತಿದ್ದಾರೆ, ರಾಜ್ಯಾದ್ಯಂತ ಸಂಚಾರ ನಡೆಸುತ್ತಿದ್ದಾರೆ. ನಾನಂತೂ ರಾಷ್ಟ್ರ ರಾಜಕಾರಣಕ್ಕೆ ತೆರಳುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರು ಕರೆದಾಗಲೇ ಹೋಗಿಲ್ಲ. ಈಗಂತೂ ಹೋಗುವ ಮಾತಿಲ್ಲ ಎಂದು ಹೇಳಿದ್ದರು. ಸಾಮಾನ್ಯವಾಗಿ ಚುನಾವಣೆಗೆ ಮುನ್ನ ನಡೆಯುವ ಅಧಿವೇಶನದಲ್ಲಿ, ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಲಾಗುತ್ತದೆ. ಮುಂದಿನ ಅಧಿವೇಶನದಲ್ಲಿ ಮತ್ತೆ ಯಾರು ಗೆದ್ದು ಬರುತ್ತಾರೊ ಇಲ್ಲವೋ ಎಂದು ಜನರು ತೀರ್ಮಾನ ಮಾಡುವುದು ಜನರು. ಹೀಗಾಗಿ ಅಧಿವೇಶನದ ಎಲ್ಲ ಸದಸ್ಯರೂ ಫೋಟೊ ತೆಗೆಸಿಕೊಳ್ಳುವ ಸಂಪ್ರದಾಯವೂ ಇದೆ. ಆದರೆ ಯಡಿಯೂರಪ್ಪ ಎಂಬ ರಾಜ್ಯ ರಾಜಕಾರಣದ ಪ್ರಮುಖ ಕೇಂದ್ರವು ಜನಮಾನಸದಲ್ಲಿ ಹಸಿರಾಗಿರುವಾಗಲೇ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಮೂಲತಃ ಮಂಡ್ಯದ ಬೂಕನಕೆರೆಯಲ್ಲಿ ಜನಸಿದ ಯಡಿಯೂರಪ್ಪ, ಶಿವಮೊಗ್ಗವನ್ನು ಕರ್ಮಭೂಮಿ ಮಾಡಿಕೊಂಡವರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada