ನಮ್ಮೆಲ್ಲರ ಆತ್ಮೀಯರಾದ ರಂಜನಿ ಪ್ರಭು ಕವಯತ್ರಿಯಾಗಿ, ಪ್ರಾಧ್ಯಾಪಕಿಯಾಗಿ ಮತ್ತು ಹಲವು ಸಾಂಸ್ಕೃತಿಕ ನೆಲೆಗಳ ಪೋಷಕಿಯಾಗಿ ವಿಶಿಷ್ಟರಾದವರು. ಇಂದು ರಂಜನಿ ಪ್ರಭು ಅವರ ಜನ್ಮದಿನ.
ರಂಜನಿ ಅವರು ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಅಪ್ಪ-ಅಮ್ಮ ಇಬ್ಬರೂ ಪ್ರಗತಿಪರ ಮನೋಭಾವದವರು. ಅವರಿಗೆ ಮೂವರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು. ಗಂಡು-ಹೆಣ್ಣು ಎಂಬ ಭೇದವಿಲ್ಲದೆ ಬೆಳೆಸಿದರು. ಕುಟುಂಬದಲ್ಲಿ ಸಾಹಿತ್ಯದ ವಾತಾವರಣ ಇತ್ತು. ದೊಡ್ಡಪ್ಪ, ಕಾವ್ಯಾಲಯ ಪ್ರಕಾಶನ ನಡೆಸುತ್ತಿದ್ದರು. ಅಪ್ಪ ಅಮ್ಮ ಕೂಡ ಓದಿನ ಗೀಳಿದ್ದವರು. ಹಾಗಾಗಿ, ರಂಜನಿ ದೊಡ್ಡ ದೊಡ್ಡ ಸಾಹಿತಿಗಳ ಕೃತಿಗಳನ್ನು ಚಿಕ್ಕ ವಯಸ್ಸಿನಲ್ಲೇ ಓದುತ್ತ ಬೆಳೆದರು. ಎಂ.ಇ.ಎಸ್. ಕಾಲೇಜಿನಲ್ಲಿ ಪಿಯುಸಿ ಓದಿ, ಮಹಾರಾಣಿ ಕಾಲೇಜಿನಲ್ಲಿ ಪದವಿಗೆ ಓದಿ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಜಿ.ಎಸ್. ಶಿವರುದ್ರಪ್ಪ, ಕಂಬಾರರು, ಡಿ.ಆರ್. ನಾಗರಾಜ್, ಲಕ್ಷ್ಮೀ ನಾರಾಯಣ ಭಟ್ಟರು ಇವರ ಗುರುಗಳಾಗಿದ್ದರು. ಕಾಲೇಜಿನ ದಿನಗಳಲ್ಲಿ ರಂಜನಿ ಅವರು ಕವಿತೆ, ಸಾಹಿತ್ಯ ಚಟುವಟಿಕೆ, ನಾಟಕ, ಸ್ನೇಹಿತೆಯರ ಜೊತೆ ಸುತ್ತಾಟ ಹೀಗೆ ಸಕ್ರಿಯರಾಗಿದ್ದರು.
ಅಧ್ಯಾಪನ ವೃತ್ತಿಯನ್ನು ಕೈಗೊಂಡ ರಂಜಿನಿ ಪ್ರಭು ಬೆಂಗಳೂರಿನ ಸೇಂಟ್ ಆ್ಯನ್ಸ್ ಕಾಲೇಜಿನಲ್ಲಿ 35 ವರ್ಷಗಳ ಕಾಲ ಬೋಧನೆ ನಡೆಸಿ ಕನ್ನಡ ವಿಭಾಗದ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ರಂಜನಿ ಅವರು ಕುವೆಂಪು ಅವರ ದೊಡ್ಡ ಅಭಿಮಾನಿ. ಕೆ.ಎಸ್. ನರಸಿಂಹಸ್ವಾಮಿ ಅವರ ಪ್ರೀತಿಯ ಕವಿ. ರಂಜನಿ ಅವರು ಏಳನೆಯ ತರಗತಿಯಲ್ಲಿರುವಾಗಲೇ ಒಂದು ಕಾದಂಬರಿ ಬರೆದಿದ್ದರು. ಆಗಾಗ ಪದ್ಯ ಬರೆಯುತ್ತಿದ್ದರು. ಕಾಲೇಜಿನಲ್ಲಿದ್ದಾಗ, “ತುಷಾರ’ ಮಾಸ ಪತ್ರಿಕೆಗೆ ‘ಬಾಲ್ಯಕಾಲದ ಸಖೀ’ ಎಂಬ ಲೇಖನ ಬರೆದರು. ಅದಾದ ಬಳಿಕ ಅವರ ಹಲವಾರು ಲೇಖನಗಳು ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಈವರೆಗೆ ಅವರ 2 ಕವನ ಸಂಕಲನ, ನಾಲ್ಕು ಭಾವಗೀತೆಗಳ ಸಿಡಿ ಹೊರಬಂದಿದೆ. ಇವರ ಕವಿತೆಗಳಿಗೆ ಉಪಾಸನಾ ಮೋಹನ್ ಸ್ವರ ಸಂಯೋಜಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
Please follow and like us: