ಬೆಂಗಳೂರು: ಕೆಪಿಟಿಸಿಎಲ್, ಎಸ್ಕಾಂ ನೌಕರರ ವೇತನ ಶೇ.20 ಹಾಗೂ ಕೆಎಸ್ ಆರ್ ಟಿಸಿ ನೌಕರರ ವೇತನ ಶೇ.15ರಷ್ಟು ಹೆಚ್ಚಿಸಿ ಇಂದೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರ ಗುರುವಾರ ಪ್ರತಿಕ್ರಿಯಿಸಿದ ಅವರು, ವೇತನ ಹೆಚ್ಚಳಕ್ಕೆ ತೀರ್ಮಾನಿಸಿದ್ದು, ಅದರಂತೆಯೇ ಆದೇಶ ಹೊರ ಬೀಳಲಿದೆ ಎಂದು ಹೇಳುವ ಮೂಲಕ ಕೆಪಿಟಿಸಿಎಲ್, ಎಸ್ಕಾಂ, ಸಾರಿಗೆ ಸಂಸ್ಥೆ ನೌಕರರ ಉದ್ದೇಶಿತ ಮುಷ್ಕರ ಬೇಡವೆಂಬ ಸಂದೇಶ ನೀಡಿದರು.
ಮುಂದೂಡಿಕೆ
ಈ ಮಧ್ಯೆ ಕೆಪಿಟಿಸಿಎಲ್ ಹಾಗೂ ಎಸ್ಕಾಂ ನೌಕರರ ಸಂಘಟನೆಗಳು ಇಂದು ಬೆಳಗ್ಗೆಯಿಂದ ಆರಂಭಿಸಲು ಉದ್ದೇಶಿಸಿದ್ದ ಅಸಹಕಾರ ಚಳುವಳಿಯನ್ನು ಒಂದು ದಿನದಮಟ್ಟಿಗೆ ಮುಂದೂಡಲು ತೀರ್ಮಾನಿಸಿದ್ದಾರೆ.
ಉಭಯ ಸಂಘಟನೆಗಳ ಪದಾಧಿಕಾರಿಗಳನ್ನು ಸಿಎಂ ಬೊಮ್ಮಾಯಿ ಇಂದು ಸಂಜೆ ಮಾತುಕತೆಗೆ ಆಹ್ವಾನಿಸಿರುವುದನ್ನು ಕೆಪಿಟಿಸಿಎಲ್ ನೌಕರರ ಸಂಘದ ಅಧ್ಯಕ್ಷ ಲಕ್ಷ್ಮಿಪತಿ ‘ ವಿಜಯವಾಣಿ’ಗೆ ಖಚಿತಪಡಿಸಿದರು.
ವಿದ್ಯುತ್ ವಲಯದ ಅಧಿಕಾರಿಗಳು, ತಾಂತ್ರಿಕ ತಜ್ಞರು, ಸಿಬ್ಬಂದಿ ಮುಷ್ಕರ ಹೂಡುವುದಿಲ್ಲ. ವೇತನ ಪರಿಷ್ಕರಣೆ ವಿಳಂಬವಾಗಿದ್ದಕ್ಕೆ ಬೇಸರವಾಗಿರುವುದು ನಿಜ.
ಆದರೆ ಒಂದು ದಿನ ಯಾರೂ ಕೆಲಸಕ್ಕೆ ಹೋಗದಿದ್ದರೆ ವಿದ್ಯುತ್ ಪ್ರಸರಣ, ವಿತರಣ ಜಾಲಕ್ಕೆ ಹೊಡೆತ ಬೀಳಲಿದೆ. ಮರು ಸ್ಥಾಪನೆ ಸವಾಲಾಗಲಿದ್ದು, ರಾಜ್ಯದ ಬಗ್ಗೆ ತಪ್ಪು ಸಂದೇಶ ರವಾನೆಯಾಗಲಿದೆ. ಈ ಕಾರಣಕ್ಕೆ ಕಾದು ನೋಡುತ್ತಿದ್ದೇವೆ ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada