ಸಲ್ಮಾನ್ ಖಾನ್ಗೆ ಬಿಶ್ಣೋಯಿ ಗ್ಯಾಂಗ್ನಿಂದ ಬೆದರಿಕೆ ಬಂದ ಬೆನ್ನಲ್ಲೆ ಸಲ್ಮಾನ್ ಖಾನ್ ಪರ ವಕೀಲರಿಗೂ ಅದೇ ಗ್ಯಾಂಗ್ನಿಂದ ಕೊಲೆ ಬೆದರಿಕೆ ಎದುರಾಗಿದೆ.
ಹಾಡುಹಗಲೆ ಹಂತರಿಂದ ಹತರಾದ ಪಂಜಾಬ್ನ ಗಾಯಕ ಸಿಧು ಮೂಸೆವಾಲಾ ಗೆ ಆದ ಗತಿಯೇ ಸಲ್ಮಾನ್ ಖಾನ್ಗೂ ಆಗುತ್ತದೆ ಎಂಬ ಬೆದರಿಕೆ ಪತ್ರ ಸಲ್ಮಾನ್ ಖಾನ್ರ ತಂದೆ ಸಲೀಂ ಖಾನ್ಗೆ ದೊರಕಿತ್ತು.
ಯಾರೋ ದುರುಳರು ಸಲೀಂ ಖಾನ್ ಅನ್ನು ಕೆಲ ದಿನ ಫಾಲೋ ಮಾಡಿ ಅವರು ದಿನವೂ ಭೇಟಿ ನೀಡಿ ಕುಳಿತುಕೊಳ್ಳುವ ಪಾರ್ಕ್ನ ಕಲ್ಲು ಬೆಂಚಿನ ಮೇಲೆ ಆ ಪತ್ರ ಇರಿಸಿದ್ದರು.
ಸಲ್ಮಾನ್ ಖಾನ್ಗೆ ಬಂದ ಈ ಬೆದರಿಕೆ ಪತ್ರವನ್ನು ಮುಂಬೈ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಈಗಾಗಲೇ ಜೈಲಿನಲ್ಲಿದ್ದ ಭೂಗತ ಪಾತಕಿ ಲಾರೆನ್ಸ್ ಬಿಶ್ಣೋಯಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದೇ ಗ್ಯಾಂಗ್ನ ಇನ್ನು ಕೆಲವು ಸದಸ್ಯರನ್ನು ವಿಚಾರಣೆಗೆ ಒಳಪಡಿಸಿದಾಗ ಇನ್ನಷ್ಟು ಆಘಾತಕಾರಿ ಸಂಗತಿಗಳು ಹೊರಬಿದ್ದಿವೆ. ಇದೆಲ್ಲದರ ನಡುವೆ ಈಗ ಸಲ್ಮಾನ್ ಖಾನ್ ಪರ ವಕೀಲರಿಗೆ ಬೆದರಿಕೆ ಬಂದಿದೆ.
ಸಲ್ಮಾನ್ ಖಾನ್ ಪರ ವಕೀಲಗೆ ಬೆದರಿಕೆ ಪತ್ರ
ಕೃಷ್ಣಮೃಗ ಭೇಟೆ ಪ್ರಕರಣದಲ್ಲಿ ಸಲ್ಮಾನ್ ಖಾನ್ ಪರ ವಾದ ಮಾಡುತ್ತಿರುವ ವಕೀಲ ಹಸ್ತಿ ಮಾಲ್ ಸಾರಸ್ವತ್ಗೆ ಬೆದರಿಕೆ ಪತ್ರವೊಂದು ಬಂದಿದೆ. ಜೊತೆಗೆ ವಕೀಲಗೆ ಭದ್ರತೆ ಒದಗಿಸುತ್ತಿರುವ ಪೊಲೀಸ್ ಅಧಿಕಾರಿಗೂ ಬೆದರಿಕೆ ಪತ್ರ ರವಾನಿಸಲಾಗಿದೆ. ಬೆದರಿಕೆ ಪತ್ರವನ್ನು ತಮ್ಮ ಕಚೇರಿಯ ಬಾಗಿಲಲ್ಲಿ ಇಡಲಾಗಿತ್ತು ಎಂದು ವಕೀಲ ಹಸ್ತಿಲಾಲ್ ದೂರಿನಲ್ಲಿ ಹೇಳಿದ್ದಾರೆ.
ಪತ್ರದಲ್ಲಿ ಎಲ್ಬಿ ಮತ್ತು ಜಿಬಿ ಇನ್ಶಿಯಲ್ಗಳು
ರಾಜಸ್ಥಾನ ಹೈಕೋರ್ಟ್ ಜೂಬಿಲಿ ಚೇಂಬರ್ನಲ್ಲಿ ವಕೀಲರ ಕಚೇರಿ ಇದ್ದು, ಕಚೇರಿಯ ಬಾಗಿಲ ಬಳಿಯಲ್ಲಿ ಇಟ್ಟ ಪತ್ರ ಜುಲೈ 03 ರಂದು ವಕೀಲರಿಗೆ ಸಿಕ್ಕಿತ್ತು. ಪತ್ರದಲ್ಲಿ, ‘ಸಿಧು ಮೂಸೆವಾಲಾಗೆ ಆದ ಗತಿಯೇ ನಿನಗೂ ಆಗುತ್ತದೆ. ಶತ್ರುವಿನ ಮಿತ್ರ ಮೊದಲ ಶತ್ರು’ ಎಂದು ಬರೆದಿದೆಯೆಂದು ವಕೀಲ ಹಸ್ತಿಮಾಲ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. ಬೆದರಿಕೆ ಪತ್ರದಲ್ಲಿ ಲಾರೆನ್ಸ್ ಬಿಶ್ಣೋಯಿ ಹಾಗೂ ಗೋಲ್ಡಿ ಬ್ರದರ್ಸ್ ಅವರ ಇನ್ಶಿಯಲ್ಗಳಿವೆ. ಸಲ್ಮಾನ್ ಖಾನ್ಗೆ ಬಂದ ಪತ್ರದಲ್ಲೂ ಇದೇ ರೀತಿ ಎಲ್ಬಿ ಹಾಗೂ ಜಿಬಿ ಎಂದು ಇನ್ಶಿಯಲ್ಗಳಿದ್ದವು.
ವಿದೇಶಕ್ಕೆ ತೆರಳಿದ್ದ ವಕೀಲ ಹಸ್ತಿಮಾಲ್
ಪತ್ರವು ಮೊದಲಿಗೆ ವಕೀಲರ ಸಹಾಯಕ ಜಿತೇಂದ್ರ ಪ್ರಸಾದ್ಗೆ ದೊರಕಿದೆ. ಕೂಡಲೇ ಜಿತೇಂದ್ರ ಪ್ರಸಾದ್, ವಕೀಲ ಹಸ್ತಿಲಾಲ್ ಸಾರಸ್ವತ್ಗೆ ಮಾಹಿತಿ ಮುಟ್ಟಿಸಿದ್ದಾರೆ. ಆದರೆ ಆ ಸಮಯದಲ್ಲಿ ವಕೀಲರು ವಿದೇಶದಲ್ಲಿದ್ದ ಕಾರಣ ಅಧಿಕೃತ ದೂರು ನೀಡಿರಲಿಲ್ಲ. ಈಗ ವಿದೇಶದಿಂದ ಬಂದ ಬಳಿಕ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಅಧಿಕೃತ ದೂರು ನೀಡಿದ್ದಾರೆ. ತನಿಖೆ ನಡೆಸುತ್ತಿರುವ ಪೊಲೀಸರು ವಕೀಲ ಹಸ್ತಿಮಾಲ್ ಸಾರಸ್ವತ್ಗೆ ಹೆಚ್ಚಿನ ಭದ್ರತೆಯನ್ನು ಒದಗಿಸಿದೆ.
ಬಹಿರಂಗ ಹೇಳಿಕೆ ನೀಡಿದ್ದ ಲಾರೆನ್ಸ್ ಬಿಶ್ಣೋಯಿ
ಬಿಶ್ಣೋಯಿ ಸಮುದಾಯಕ್ಕೆ ಕೃಷ್ಣಮೃಗ ದೈವ ಸಮಾನವಾಗಿದ್ದು ಅದನ್ನು ಕೊಂದ ಆರೋಪ ಸಲ್ಮಾನ್ ಖಾನ್ ಮೇಲಿರುವ ಕಾರಣಕ್ಕೆ ಬಿಶ್ಣೋಯಿ ಸಮುದಾಯಕ್ಕೆ ಸೇರಿದ ಭೂಗತ ಪಾತಕಿ ಲಾರೆನ್ಸ್ ಬಿಶ್ಣೋಯಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಹಲವು ವರ್ಷಗಳಿಂದಲೂ ಯತ್ನಿಸುತ್ತಿದ್ದಾನೆ. ತಾನು ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಈ ಹಿಂದೆ ಬಹಿರಂಗವಾಗಿಯೇ ಘೋಷಿಸಿದ್ದ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಲಾರೆನ್ಸ್ ಬಿಶ್ಣೋಯಿ ಟೀಂ ಒಂದನ್ನು ಬಿಟ್ಟಿದ್ದಾಗಿ ತನಿಖೆಯಲ್ಲಿಯೂ ಬಹಿರಂಗಗೊಂಡಿತ್ತು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskann