ನಟ ಪ್ರಜ್ವಲ್ ದೇವರಾಜ್ ಒಂದು ರೀತಿ ‘ಸರಾಸರಿ’ ನಟ. ಸಿನಿಮಾಗಳ ಫಲಿತಾಂಶ ಏನಾದರೂ ಆಗಲಿ ತಮ್ಮ ಕೆಲಸವನ್ನು ತಾವು ಮಾಡುತ್ತಾ ಮುಂದೆ ಸಾಗುತ್ತಿರುತ್ತಾರೆ.
ಕೆಲವು ದಿನಗಳ ಹಿಂದಷ್ಟೆ ಪ್ರಜ್ವಲ್ ನಟನೆಯ ‘ಅರ್ಜುನ್ ಗೌಡ’ ಸಿನಿಮಾ ಬಿಡುಗಡೆ ಆಗಿದೆ.
ಇದೀಗ ಪ್ರಜ್ವಲ್ರ ಹೊಸ ಸಿನಿಮಾ ಘೋಷಣೆ ಆಗಲಿದೆ.
ಪ್ರಜ್ವಲ್ ದೇವರಾಜ್ ಹೊಸ ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದು, ಈ ಸಿನಿಮಾವನ್ನು ಅವರ ಆತ್ಮೀಯ ಗೆಳೆಯರೇ ಒಬ್ಬರು ನಿರ್ದೇಶಿಸಲಿದ್ದಾರೆ. ಅವರೇ ಪನ್ನಗಾಭರಣ.
ಪ್ರತಿಭಾವಂತ ನಿರ್ದೇಶಕ ಎನಿಸಿಕೊಂಡಿರುವ ಪನ್ನಗಾಭರಣ, ಈವರೆಗೆ ‘ಹ್ಯಾಪಿ ನ್ಯೂ ಇಯರ್’, ಪಿಆರ್ಕೆ ಪ್ರೊಡಕ್ಷನ್ಗಾಗಿ ‘ಫ್ರೆಂಚ್ ಬಿರಿಯಾನಿ’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇದೀಗ ಗೆಳೆಯ ಪ್ರಜ್ವಲ್ ದೇವರಾಜ್ಗಾಗಿ ಹೊಸ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ.
ಪ್ರಜ್ವಲ್ ದೇವರಾಜ್, ಪನ್ನಗಾಭರಣ, ದಿವಂಗತ ಚಿರಂಜೀವಿ ಸರ್ಜಾ ಇವರೆಲ್ಲರೂ ಬಹಳ ಚಿಕ್ಕ ವಯಸ್ಸಿನಿಂದಲೂ ಆತ್ಮೀಯ ಗೆಳೆಯರು. ಇದೀಗ ಪನ್ನಗಾಭರಣ ತಮ್ಮ ಗೆಳೆಯನಿಗಾಗಿಯೇ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ವಿಶೇಷವೆಂದರೆ ಬಾಲಿವುಡ್ನಲ್ಲಿ ಕೆಲಸ ಮಾಡಿರುವ ಅಧೀರ್ ಭಟ್ ಈ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ.
ಇಂದಷ್ಟೆ ಈ ಸಿನಿಮಾದ ಸ್ಕ್ರಿಪ್ಟ್ ಪೂಜೆಯನ್ನು ಬಂಡಿ ಮಹಾಕಾಳಮ್ಮ ದೇವಾಲಯದಲ್ಲಿ ನೆರವೇರಿಸಲಾಗಿದೆ. ಈ ಸಿನಿಮಾವನ್ನು ‘ಫಿಲ್ಮಿ ಫೆಲೋ ಸ್ಟುಡಿಯೋಸ್’ ಅರ್ಪಿಸುತ್ತಿದ್ದು, ಆಲ್ ಓಶನ್ ಮೀಡಿಯಾ ಪ್ರೈ.ಲಿಮಿಟೆಡ್ ಮತ್ತು ಮಾತ ಭಗವತಿ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದೆ. ಸಿನಿಮಾದ ಹೆಸರು ಇನ್ನೂ ಅಂತಿಮಗೊಳಿಸಿಲ್ಲ.
ಸಿನಿಮಾಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ವಿರಾಜ್ ಸಿಂಗ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಪ್ರವೀಣ್ ಯಾದವ್ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಸಿನಿಮಾದ ನಾಯಕಿ ಸೇರಿದಂತೆ ಇತರ ತಾರಾಗಾಣದ ಹುಡುಕಾಟದಲ್ಲಿ ಚಿತ್ರತಂಡ ಇದೆ. ಈ ಸಿನಿಮಾದಲ್ಲಿ ಕಮರ್ಶಿಯಲ್ ಅಂಶಗಳು ಹೆಚ್ಚಾಗಿರಲಿವೆ ಎನ್ನಲಾಗಿದ್ದು, ಮೊದಲ ಬಾರಿಗೆ ಪನ್ನಗಾಭರಣ ಪೂರ್ಣ ಆಕ್ಷನ್ ಸಿನಿಮಾ ಒಂದನ್ನು ನಿರ್ದೇಶಿಸಲಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada