ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ ಸರಣಿ ಸೋತ ಭಾರತ, ಮೂರು ಪಂದ್ಯಗಳ ಏಕದಿನ ಸರಣಿಯನ್ನ ಒಂದು ಪಂದ್ಯ ಬಾಕಿ ಇರುವಂತೆಯೇ ಕೈ ಚೆಲ್ಲಿದೆ. ಮೊದಲೆರಡು ಏಕದಿನ ಪಂದ್ಯದಲ್ಲಿ ಸೋಲನ್ನ ಕಂಡ ಬ್ಲ್ಯೂ ಬಾಯ್ಸ್ ಅಂತಿಮ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸಿಕೊಳ್ಳಬೇಕಿದೆ.
ಟೆಸ್ಟ್ ಸರಣಿಯನ್ನ 1-2 ಅಂತರದಲ್ಲಿ ಸೋತ ಭಾರತ, ಏಕದಿನ ಸರಣಿಯಲ್ಲಿ ಈಗಾಗಲೇ 0-2 ಅಂತರದಲ್ಲಿ ಹಿನ್ನಡೆ ಕಂಡಿದೆ. ಪಾರ್ಲ್ನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 31 ರನ್ಗಳಿಂದ ಪಂದ್ಯವನ್ನ ಸೋತರೆ, ಎರಡನೇ ಏಕದಿನ ಪಂದ್ಯದಲ್ಲಿ ಇನ್ನೂ 11 ಎಸೆತಗಳು ಬಾಕಿ ಇರುವಂತೆಯೇ ದಕ್ಷಿಣ ಆಫ್ರಿಕಾ ಏಳು ವಿಕೆಟ್ಗಳ ಜಯ ಸಾಧಿಸಿದೆ.
ದ್ವಿತೀಯ ಏಕದಿನ ಪಂದ್ಯದಲ್ಲಿ ಉಭಯ ತಂಡಗಳಲ್ಲಿ ಕಾಣಿಸಿದ ಒಂದು ದೊಡ್ಡ ವ್ಯತ್ಯಾಸವೆಂದ್ರೆ ಸ್ಪಿನ್ನರ್ಗಳ ವೈಫಲ್ಯವಾಗಿದೆ. ದಕ್ಷಿಣ ಆಫ್ರಿಕಾ ಸ್ಪಿನ್ನರ್ಗಳಿಗೆ ಹೋಲಿಸಿದ್ರೆ, ಭಾರತದ ಸ್ಪಿನ್ನರ್ಗಳು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಈ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಭಾರತದ ಸ್ಪಿನ್ ವೈಫಲ್ಯವನ್ನ ಎತ್ತಿ ಹಿಡಿದಿದ್ದಾರೆ.
ಮಂಜ್ರೇಕರ್ ಪ್ರಕಾರ ರವಿಚಂದ್ರನ್ ಅಶ್ವಿನ್ ಟೀಂ ಇಂಡಿಯಾದ ಲಿಮಿಟೆಡ್ ಓವರ್ ಕ್ರಿಕೆಟ್ಗೆ ಕಂಬ್ಯಾಕ್ ಮಾಡಿದ್ರೂ ಸಹ ಅವರು ತುಂಬಾ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಲಿಲ್ಲ ಎಂದು ಅಂದಾಜಿಸಿದ್ದಾರೆ.
“ಅಶ್ವಿನ್ ಅವರನ್ನು ನೋಡಿ, ಸರಣಿಯ ಆರಂಭದಿಂದಲೂ ಅವರು ಯಾವುದೇ ಕಾರಣವಿಲ್ಲದೆ ಭಾರತದ ಲಿಮಿಟೆಡ್ ಓವರ್ ಕ್ರಿಕೆಟ್ಗೆ ಎಂಟ್ರಿ ಕೊಟ್ಟಿದ್ದಾರೆ. ಅವರು ಕಂಬ್ಯಾಕ್ ಮಾಡಲು ಯಾವುದೇ ಬಲವಾದ ಪ್ರದರ್ಶನ ನೀಡಿಲ್ಲ. ಆಶಾದಾಯಕವಾಗಿ, ಅವರು ಭಾರತಕ್ಕೆ ಅಗತ್ಯವಿರುವ ಸ್ಪಿನ್ನರ್ ಅಲ್ಲ ಎಂದು ಭಾರತ ಅರಿತುಕೊಳ್ಳುತ್ತದೆ” ಎಂದು ಇಎಸ್ಪಿಎನ್ಕ್ರಿಕ್ಇನ್ಫೋದಲ್ಲಿ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.
ಟೀಂ ಇಂಡಿಯಾ ಏಕದಿನ ಪಂದ್ಯದ ಮಧ್ಯಮ ಓವರ್ಗಳಲ್ಲಿ ವಿಕೆಟ್ಗಳನ್ನು ಪಡೆಯುವ ಸ್ಪಿನ್ನರ್ಗಳತ್ತ ಮುಖಮಾಡಬೇಕಿದೆ. ಸ್ಪಿನ್ನರ್ ಆಗಿ ಯುಜುವೇಂದ್ರ ಚಾಹಲ್ ಅವರ ಪ್ರದರ್ಶನವೂ ಸಹ ಕ್ಷೀಣಿಸುತ್ತಿದೆ ಎಂದು ಮಂಜ್ರೇಕರ್ ಭಾವಿಸಿದ್ದಾರೆ. ಇದೇ ವೇಳೆ ಚೈನಾಮೆನ್ ಬೌಲರ್ ಕುಲ್ದೀಪ್ ಯಾದವ್ ತಂಡಕ್ಕೆ ಕಂಬ್ಯಾಕ್ ಮಾಡಿದ್ರೆ, ನಿರ್ಣಾಯಕ ವಿಕೆಟ್ಗಳನ್ನು ಪಡೆಯುವ ಮೂಲಕ ಭಾರತ ಕಂಬ್ಯಾಕ್ ಮಾಡಬಹುದು ಎಂದು ಮಂಜ್ರೇಕರ್ ಅಂದಾಜಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada