ಬಿ. ಶಿವಮೂರ್ತಿ ಶಾಸ್ತ್ರಿಗಳು ಮಹಾನ್ ವಿದ್ವಾಂಸರಾಗಿ, ಕರ್ನಾಟಕ ಏಕೀಕರಣಕ್ಕೆ ದುಡಿದವರಾಗಿ, ಕೀರ್ತನಕೇಸರಿ ಬಿರುದಾಂಕಿತರಾಗಿ ನಾಡಿನಲ್ಲೆಲ್ಲಾ ಸಂಚರಿಸಿದವರಾಗಿ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಪರಿಷತ್ತಿನ ಚಟುವಟಿಕೆಗಳಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದವರಾಗಿ ಸ್ಮರಣೀಯರಾಗಿದ್ದಾರೆ. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. ಶಿವಮೂರ್ತಿ ಶಾಸ್ತ್ರಿಗಳು 1903ರ ಫೆಬ್ರವರಿ 23ರಂದು ತುಮಕೂರಿನಲ್ಲಿ ಜನಿಸಿದರು. ತಂದೆ ಬಸವಯ್ಯಸ್ವಾಮಿ. ತಾಯಿ ನೀಲಮ್ಮ. ಶಾಸ್ತ್ರಿಗಳ ವಿದ್ಯಾಭ್ಯಾಸ ಅಪ್ಪರ್ ಸೆಕೆಂಡರಿಯವರೆಗೆ ತುಮಕೂರಿನಲ್ಲಿ ನಡೆಯಿತು. ಮುಂದೆ ಕರಿಬಸವ ಶಾಸ್ತ್ರಿಗಳಲ್ಲಿ ಸಂಸ್ಕೃತ ಮತ್ತು ಕನ್ನಡ ಅಭ್ಯಾಸ ಮಾಡಿದರು. ಜೊತೆಗೆ ಸ್ವಪ್ರಯತ್ನದಿಂದ ಹಿಂದಿ, ತೆಲುಗು ಭಾಷೆಗಳನ್ನೂ ಕಲಿತರು.
ಶಿವಮೂರ್ತಿ ಶಾಸ್ತ್ರಿಗಳು 1924ರಲ್ಲಿ ಗುಬ್ಬಿಯ ವೆಸ್ಲಿಯನ್ ಮಿಷನ್ ಶಾಲೆಯಲ್ಲಿ ಅಧ್ಯಾಪಕ ವೃತ್ತಿ ಆರಂಭಿಸಿದರು. 1936ರಲ್ಲಿ ಮೈಸೂರು ಸಂಸ್ಥಾನದಲ್ಲಿ ಆಸ್ಥಾನ ವಿದ್ವಾಂಸರಾಗಿ ನೇಮಕಗೊಂಡರು. ಶಿವಮೂರ್ತಿ ಶಾಸ್ತ್ರಿಗಳು ‘ಶರಣ ಸಾಹಿತ್ಯ’ ಎಂಬ ಮಾಸ ಪತ್ರಿಕೆ ಆರಂಭಿಸಿದರು. ಇದರಲ್ಲಿ ವೀರಶೈವ ಸಾಹಿತ್ಯ ಪ್ರಸಾರವೇ ಪ್ರಮುಖವಾಗಿದ್ದರೂ ಇತರ ಧರ್ಮಗಳ ಕುರಿತ ಲೇಖನಗಳಿಗೂ ಪ್ರಾಶಸ್ತ್ಯ ಸಂದಿತು. ಶರಣ ಸಾಹಿತ್ಯದ ಜೊತೆಗೆ ಕರ್ನಾಟಕದ ಏಕೀಕರಣಕ್ಕೆ ಮೀಸಲಾದ ‘ಸ್ವತಂತ್ರ ಕರ್ನಾಟಕ’ ವಾರಪತ್ರಿಕೆಯನ್ನು 1938ರಲ್ಲಿ ಆರಂಭಿಸಿದರು. ಶಿವಮೂರ್ತಿ ಶಾಸ್ತ್ರಿಗಳು ಉಪಾಧ್ಯಾಯ ವೃತ್ತಿಗೆ ಶರಣು ಹೊಡೆದು ಕೀರ್ತನಕಾರರಾದರು. ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ‘ಕರ್ನಾಟಕ ವಿಜಯ’ದ ಮೇಲೆ ಕೀರ್ತನೆ ಮಾಡಿ ಖ್ಯಾತರಾದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada
Please follow and like us: