ಐಎಎಸ್, ಐಪಿಎಸ್ ಅಧಿಕಾರಿಗಳ ಹಾದಿ ಬೀದಿ ಲಡಾಯಿ, ಶಕ್ತಿ ಸೌಧದ ಮೆಟ್ಟಿಲು ಹತ್ತಿದೆ. ಕರ್ನಾಟಕದ ಸಿಂಹಿಣಿಯರ ಕದನ ರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದಲ್ಲದೇ, ಈಗ ರಾಷ್ಟ್ರ ರಾಜಧಾನಿ ಅಂಗಳ ತಲುಪಲು ದಾಪುಗಾಲಿಟ್ಟಿದೆ. ಆದ್ರೆ ಅದಕ್ಕೂ ಮುನ್ನವೇ ಹೈಫೈ ಅಧಿಕಾರಿಗಳ ಜಗಳ, ಮಹತ್ವದ ಸಭೆಯಲ್ಲೂ ಮಾರ್ದ್ವನಿಸಿದೆ.
ಸಂಪುಟ ಸಭೆಯಲ್ಲೂ ರೂಪಾ, ರೋಹಿಣಿ ಕಿತ್ತಾಟದ ಸದ್ದು
ಸೋಷಿಯಲ್ ಮೀಡಿಯಾದಿಂದಲೇ ಶುರುವಾದ ಐಎಎಸ್, ಐಪಿಎಸ್ ಅಧಿಕಾರಿಗಳ ಕದನ, ಈಗ ಸಂಪುಟ ಸಭೆಯಲ್ಲಿ ಸದ್ದು ಮಾಡಿದೆ. ವಿಧಾನಸೌಧದ ಮೆಟ್ಟಿಲು ಹತ್ತಿ, ಸಿಎಸ್ ಅಂಗಳ ಮುಟ್ಟಿದ ಮೇಲೆ ಸಚಿವ ಎಸ್.ಟಿ. ಸೋಮಶೇಖರ್, ಕ್ಯಾಬಿನೆಟ್ ಮೀಟಿಂಗ್ನಲ್ಲೂ ಇಬ್ಬರ ಫೈಟ್ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಸಂಪುಟ ಸಭೆಯಲ್ಲೂ ಕಿತ್ತಾಟದ ಪ್ರಸ್ತಾಪ
ನಿನ್ನೆ ಸಂಜೆ ನಡೆದ ಸಂಪುಟದ ಸಭೆಯಲ್ಲಿ ಸಚಿವ ಎಸ್.ಟಿ. ಸೋಮಶೇಖರ್ ಪ್ರಸ್ತಾಪಿಸಿದ್ದಾರೆ. ಸಿಎಂ ಬೊಮ್ಮಾಯಿ ಮತ್ತು ಸಚಿವರು ಇದ್ದ ಸಭೆಯಲ್ಲಿ ಜಗಳದ ಕುರಿತು ಚರ್ಚೆ ನಡೆಸಿದ್ದಾರೆ. ಇದೆಲ್ಲಾ ಮುಗಿದ ಬಳಿಕ, ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಇಷ್ಟೆಲ್ಲದರ ನಡುವೆ, ಸರ್ಕಾರದ ಮುಖ್ಯಕಾರ್ಯದರ್ಶಿ, ವಂದಿತಾ ಶರ್ಮಾ ಎದುರು ಸಿಎಂ ಬೊಮ್ಮಾಯಿ ಗರಂ ಆಗಿದ್ರು. ಸರ್ಕಾರದ ಮಾನ ಮರ್ಯಾದೆ ಹರಾಜು ಹಾಕುತ್ತಿದ್ದಾರೆ. ಹಾದಿ ಬೀದಿಯಲ್ಲಿ ಕಿತ್ತಾಡಿದ್ರೆ, ಸರ್ಕಾರಕ್ಕೆ ಡ್ಯಾಮೇಜ್ ಆಗ್ತಿದೆ. ಸೂಕ್ತ ಕ್ರಮ ಕೈಗೊಳ್ಳಿ ಎಂದು ಸಿಎಸ್ಗೆ ಸಿಎಂ ನಿರ್ದೇಶನ ನೀಡಿದ್ದಾರೆ.
ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಈ ಗಲಾಟೆ ಪ್ರಕರಣದ ಬಗ್ಗೆ ಗಮನ ಹರಿಸಿದ್ದಾರೆ. ಕೆಲವು ನಿರ್ದೇಶನಗಳನ್ನೂ ನೀಡಿದ್ದಾರೆ. ಇಬ್ಬರನ್ನೂ ಕರೆದು ಮಾತನಾಡಿದ್ದಾರೆ. ಇಬ್ಬರೂ ಶಿಸ್ತನ್ನು ಕಾಪಾಡಿಕೊಳ್ಳುವುದಾಗಿ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ.
ಬಸವರಾಜ್ ಬೊಮ್ಮಾಯಿ, ಮುಖ್ಯಮಂತ್ರಿ
IPS ಡಿ.ರೂಪಾ ಪರ ವಕೀಲ ಸೂರ್ಯ ಮುಕುಂದರಾಜ್ ಬ್ಯಾಟಿಂಗ್
ಡಿ.ರೂಪಾ ಮತ್ತು ರೋಹಿಣಿ ಸಿಂಧೂರಿ ಸಮರದಲ್ಲಿ ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್ ರಂಗ ಪ್ರವೇಶಿದ್ದಾರೆ. ಡಿ.ಕೆ. ರವಿ ಸಾವಿನ ತನಿಖೆಯ ಸಿಬಿಐ ರಿಪೋರ್ಟ್ ಕಾಪಿಯನ್ನ ಪೋಸ್ಟ್ ಹಾಕಿ ರೂಪಾ ಪರ ಬ್ಯಾಟಿಂಗ್ ಮಾಡಿದ್ದಾರೆ. ರೋಹಿಣಿ ಸಿಂಧೂರಿ ಮೇಲೆ ಆತ್ಮಹತ್ಯೆ ಪ್ರಚೋದನೆ ದಾಖಲಾಗಬೇಕಿತ್ತು. ರೂಪಾ ನಡೆಯನ್ನು ಪ್ರಶ್ನೆ ಮಾಡುವವರು ಸಿಬಿಐ ರಿಪೋರ್ಟ್ ಓದಬೇಕು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಡಿ.ಕೆ.ರವಿ ಪ್ರಕರಣದಲ್ಲಿ ಅವರ ಕುಟುಂಬಕ್ಕೆ ಹೊರತುಪಡಿಸಿ ಬೇರೆ ಯಾರಿಗಾದರೂ ಗೊತ್ತಿತ್ತು ಅಂದರೆ ಅದು ರೋಹಿಣಿ ಸಿಂಧೂರಿಗೆ ಮಾತ್ರ. ಎಲ್ಲೋ ತನಿಖೆ ಮಾಡಿದ ನಂತರ ಅಧಿಕಾರಿಗಳಿಗೆ ಗೊತ್ತಾಗಬೇಕಿತ್ತು. ಎಲ್ಲೋ ಇವರು ಕಳುಹಿಸಿದ್ದ ಮೆಸೇಜ್ ಕಾರಣ ಎಂದು. ಅವತ್ತು ಚರ್ಚೆಗಳು ಆದವು, ಆದರೆ ಅದರ ಮೂಲದ ಬಗ್ಗೆ ಚರ್ಚೆಗಳೇ ಆಗಿಲ್ಲ.
ಸೂರ್ಯ ಮುಕುಂದರಾಜ್, ವಕೀಲ
ಶಕ್ತಿ ಸೌಧದ ಬೆನ್ನಲ್ಲೇ ದೆಹಲಿ ಅಂಗಳ ಮುಟ್ಟಿತಾ ಅಧಿಕಾರಿಗಳ ಫೈಟ್..?
ವಿಧಾನಸೌಧದ ಮೆಟ್ಟಿಲು ಹತ್ತಿದ್ದ ರೂಪಾ, ರೋಹಿಣಿಗೆ ಸಮರ, ಈಗ ದೆಹಲಿ ಅಂಗಳ ಮುಟ್ಟಲು ದಾಪುಗಾಲಿಟ್ಟಿದೆ.. ಐಎಎಸ್, ಐಪಿಎಸ್ ಅಧಿಕಾರಿಗಳಿಗೆ ಸಲಹೆ ನೀಡುವಂತೆ, ರಾಜ್ಯಸಭಾ ಸದಸ್ಯ ಜಗ್ಗೇಶ್ ಮನವಿ ಮಾಡಿದ್ದಾರೆ. ಸಾರ್ವಜನಿಕವಾಗಿ ಘನತೆ ಕಾಪಾಡಲು ಇಬ್ಬರು ಅಧಿಕಾರಿಗಳಿಗೆ ಸಲಹೆ ನೀಡುವಂತೆ ಟ್ವಿಟ್ಟರ್ನಲ್ಲಿ ಜಗ್ಗೇಶ್ ಮನವಿ ಮಾಡಿದ್ದಾರೆ.
ಸಿಎಂ ಬೊಮ್ಮಾಯಿ, ಆದೇಶದ ಬೆನ್ನಲ್ಲೇ ಸಿಎಸ್ ವಂದಿತಾ ಶರ್ಮಾ, ರೂಪಾ ಮತ್ತು ರೋಹಿಣಿ ಸಿಂಧೂರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳೋದು ಅಥವಾ ಹೊರಗಡೆ ಮಾತನಾಡೋದು ಮಾಡಬಾರದು ಎಂದು ತಾಕೀತು ಮಾಡಿದ್ದಾರೆ. ಒಟ್ಟಾರೆ, ಹೈಫೈ ಅಧಿಕಾರಿಗಳ ಹೈವೋಲ್ಟೇಜ್ ಕದನ, ಮಾತ್ರ ರಾಜ್ಯದ ಗಡಿ ದಾಟಿ, ದೇಶಾದ್ಯಂತ ಸದ್ದು ಮಾಡಿದೆ. ಇಷ್ಟೆಲ್ಲಾದ ಆದ ನಂತರ, ಅಧಿಕಾರಿಗಳ ಖಾಸಗಿ ಫೋಟೋ ಸಮರ, ಇಲ್ಲಿಗೆ ನಿಲ್ಲುತ್ತಾ ಅಥವಾ ಮುಂದುವರೆತ್ತಾ ಅನ್ನೋದು ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಸಿನಿಮಾದಷ್ಟೇ ರೋಚಕ ಪಡೆದುಕೊಂಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada