ವಿದುರನು ಐಹಿಕ ವಿಷಯಗಳ ಧರ್ಮವನ್ನು ವಿವರವಾಗಿ ತಿಳಿಸಲು ರಾಜನು ಆತ್ಮವಿದ್ಯೆಯ ಬಗ್ಗೆ ಹೇಳು ಎಂದನು. ಅದಕ್ಕೆ ವಿದುರನು ಅದನ್ನು ಹೇಳುವವನು ಸನತ್ಸುಜಾತನೆಂದು ತಿಳಿಸಿ ಅವನನ್ನು ಪ್ರಾರ್ಥಿಸಲು ಆ ಮುನಿಯು ಬಂದು ಆತ್ಮವಿದ್ಯೆಯನ್ನು, ಧರ್ಮವನ್ನು ಉಪದೇಶಿಸಲು ಆರಂಭಿಸಿದನು.
ಈ ಶರೀರವೆಂಬುದು ಸ್ಥಿರವಲ್ಲ. ಅದಲ್ಲದೆ ನಾನಾ ರೀತಿಯ ಜನ್ಮಗಳ ನಂತರ ಮಾನವಜನ್ಮ ಲಭಿಸುತ್ತದೆ. ಇದನ್ನು ಅರಿತು ಸತ್ಕರ್ಮಗಳಲ್ಲಿ ತೊಡಗಬೇಕೆಂದನು. ದುಸ್ಸಂಗವನ್ನು ತ್ಯಜಿಸಿ ಸತ್ಸಂಗದಲ್ಲಿ ನಿರತನಾಗಬೇಕು. ಪ್ರಣವಾಕ್ಷರದಲ್ಲಿ ಮನವ ನಿಲಿಸಿ ಸಕಲ ಧರ್ಮದ ಸಾರವನ್ನು ಗ್ರಹಿಸುವುದು ಅಗತ್ಯ. ಭೂಮಿಯಲ್ಲಿ ಎಲ್ಲರಿಗಿಂತಲೂ ಭೂಸುರರ ಸೇವೆ, ಮನ್ನಣೆ, ದಾನಧರ್ಮಗಳನ್ನು ಮಾಡುವುದು ಕ್ಷೇಮ. ಅವರಿಗಿಂತ ಬೇರೆ ದೈವವಿಲ್ಲ. ಅರಸನಾಗಿರಲಿ, ಧನಿಕನಾಗಿರಲಿ ಅವನ ಜೀವ ಹೋದ ಮರುಕ್ಷಣ ಹೆಸರು ಹೇಳದೆ ಹೆಣವೆನ್ನುವರೆಂಬುದನ್ನು ಅರ್ಥ ಮಾಡಿಕೋ. ಈ ಜೀವ ನಶ್ವರ. ಈ ಭೂಮಿಗೆ ಹೊಡೆದಾಡುವುದರಲ್ಲಿ ಅರ್ಥವಿಲ್ಲ
ಅಷ್ಟರಲ್ಲಿ ಧೃತರಾಷ್ಟ್ರನು ಸ್ವರ್ಗ ಮತ್ತು ನರಕಗಳ ಬಗ್ಗೆ ಕೇಳುತ್ತಾನೆ. ಮುನಿಯು ಮುಂದುವರೆಸುತ್ತಾ ಎಲ್ಲಿ ಕರುಣಾಳು, ಸರಸಿ, ಮಂಗಳನಿಳಯನಿರುವನೊ ಅದೇ ಸ್ವರ್ಗ. ಕುಮತಿಗಳು, ಪಾತಕರು ಕುಹಕಿಗಳಿರುವೆಡೆಯೆ ನರಕವೆಂದನು. ಕಳ್ಳರನ್ನು, ಪಿಸುಣರನ್ನು, ದುರುಳರನ್ನು, ದೂರವಿಡಬೇಕು. ಇಡೀ ಜಗತ್ತು ದೈವದ ಅಧೀನದಲ್ಲಿದೆ. ಅದರಿಂದ ಧರ್ಮವನ್ನು ಆಚರಿಸು.ಯಜ್ಞಗಳನ್ನು ನಡೆಸು, ವಿಪ್ರರನ್ನು ಸತ್ಕರಿಸು, ಮಾತಾಪಿತರ, ಗುರುಹಿರಿಯರ ಸೇವೆ ಮಾಡು, ಇದೇ ಧರ್ಮವೆಂದು ತಿಳಿಹೇಳಿದನು.
ಅಕಾಲದಲ್ಲಿ ಮಾಡಬಾರದ ಕೆಲಸಗಳನ್ನು ತಿಳಿದಿರಬೇಕು. ಪಂಡಿತರ ಸಂಗದಲ್ಲಿ ಅಧ್ಯಯನ ನಿರತನಾಗಿರಬೇಕು. ಬಲಿ, ವಿಭೀಷಣ, ರಾಘವ, ದಧೀಚಿಯ ತ್ಯಾಗ, ಪಾರ್ಥನ ಕೆಚ್ಚು..ಇವುಗಳು ಆದರ್ಶವೆಂದನು. ಧೃತರಾಷ್ಟ್ರನು ಧರ್ಮ ಮತ್ತು ಅಧರ್ಮಗಳ ಬಗ್ಗೆ ಕೇಳುತ್ತಾನೆ.
ಅತಿಥಿಪೂಜೆ, ಅಹಂಕಾರ ರಹಿತ ಸತ್ಕರ್ಮಗಳು ಧರ್ಮವೆಂದೂ, ಧರ್ಮಕಾರ್ಯಗಳಲ್ಲಿ ಉಪೇಕ್ಷೆಯು ಅಧರ್ಮವೆಂದೂ ಉತ್ತರಿಸುತ್ತಾನೆ. ಗರ್ವವನ್ನು ಬಿಟ್ಟು ಸತಿಸಹಿತ ಧರ್ಮಕಾರ್ಯಗಳಲ್ಲಿ ತೊಡಗಬೇಕು. ಸಪ್ತವ್ಯಸನಗಳಾದ ದ್ಯೂತ, ಮದ್ಯಪಾನ ಮೊದಲಾದವುಗಳಿಂದ ದೂರವಿರುವುದೇ ಧರ್ಮ. ದುಷ್ಕೃತ್ಯಗಳನ್ನು ಎಸಗುವವರು ಕಡೆಗೆ ಅದರ ಫಲ ಅನುಭವಿಸುವರು.
ನಂತರ ಶ್ರೀ ಕೃಷ್ಣನ ದಶಾವತಾರಗಳ ಬಗ್ಗೆ ಹೇಳುತ್ತಾ ಇಂತಹವನು ಪಾರ್ಥನ ಸಾರಥಿಯಾಗಿ ಬಂದಿರುವನೆಂದರೆ ಜಯವು ಅವರಿಗೆ ಸಲ್ಲುವುದು. ಈಗಲೂ ಕಾಲ ಮಿಂಚಿಲ್ಲ. ಅವರನ್ನು ಕರೆಸಿ ರಾಜ್ಯವನ್ನು ಕೊಟ್ಟು ಕಳಿಸೆಂದು ಬುದ್ಧಿ ಹೇಳಿದನು. ಈ ರೀತಿಯಲ್ಲಿ ಧರಣಿಪನಿಗೆ ಬೋಧಿಸಿ ಅವನ ದುಗುಡವನ್ನು ಹೋಗಲಾಡಿಸಿ ತನ್ನ ಆಶ್ರಮಕ್ಕೆ ಹಿಂದಿರುಗಿದನು. ಆ ಕ್ಷಣದ ಮಟ್ಟಿಗೆ ಧೃತರಾಷ್ಟ್ರನು ಪರಮ ಆನಂದದ ಸ್ಥಿತಿಯಲ್ಲಿದ್ದು ಪರದೈವವನ್ನು ಸ್ಮರಿಸಿದನು.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada
Please follow and like us: