ಚಾಲೆಂಜಿಂಗ್ ಸ್ಟಾರ್ ದರ್ಶನ್ ‘ಕ್ರಾಂತಿ’ ಸಿನಿಮಾ ಪ್ರಚಾರದಲ್ಲಿ ತೊಡಕೊಂಡಿದ್ದಾರೆ. ಇನ್ನೇನು ಕೆಲ ದಿನಗಳಲ್ಲೇ ಸಿನಿಮಾ ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ಸಂದರ್ಭದಲ್ಲಿ ದರ್ಶನ್ ಫಾರ್ಮ್ಹೌಸ್ ಮೇಲೆ ಅರಣ್ಯಾಧಿಕಾರಿಗಳು ದಾಳಿ ಮಾಡಿದ್ದಾರೆ.
ಮೈಸೂರಿನ ಟಿ. ನರಸಿಪುರದ ಸಮೀಪ ಇರುವ ನಟ ದರ್ಶನ್ ಫಾರ್ಮ್ ಹೌಸ್ ಗೆ ನಿನ್ನೆ (ಜ. 20) ರಾತ್ರಿ ಹೊತ್ತಲ್ಲಿ ಅರಣ್ಯ ಅಧಿಕಾರಿಗಳ ತಂಡ ದಾಳಿ ಮಾಡಿದೆ. ಜೊತೆಗೆ ಕೆಲವು ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ.
ಕೆಂಪಯ್ಯನಹುಂಡಿಯ ತೋಟದ ಮನೆಯಲ್ಲಿ ದರ್ಶನ್ ಕೆಲವು ವಿದೇಶಿ ತಳಿಯ ಪಕ್ಷಿಗಳನ್ನು ಸಾಕುತ್ತಿದ್ದರು. ಅವುಗಳನ್ನು ಸಾಕಲು ಪರವಾನಿಗಿ ಪಡೆಯದೆ ಇರೋದ್ರಿಂದ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದರ್ಶನ್ ಫಾರ್ಮ್ ಹೌಸ್ನಲ್ಲಿ ನಾಲ್ಕು ವಿಶಿಷ್ಟ ಪ್ರಭೇದದ ಬಾತುಕೋಳಿಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಬಾರ್ಹೆಡಡ್ ಗೂಸ್ ಅಂತಲೂ ಕರೆಯುತ್ತಾರೆ. ಇವುಗಳನ್ನು ಮನೆಗಳಲ್ಲಿ, ಫಾರ್ಮ್ಹೌಸ್ಗಳಲ್ಲಿ ಸಾಕುವುದು ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಅಪರಾಧ ಆಗಿದ್ದು, ಈ ಕಾರಣಕ್ಕೆ ವನ್ಯ ಪಕ್ಷಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಕಲು ಅನುಮತಿ ಇಲ್ಲದ ವನ್ಯ ಪಕ್ಷಿಗಳನ್ನು ಸಾಕಣೆ ಮಾಡಿದ್ದಕ್ಕೆ ಪ್ರಕರಣವನ್ನು ದಾಖಲಿಸಲಾಗಿದೆ. ವಶಕ್ಕೆ ಪಡೆದ ವನ್ಯ ಪಕ್ಷಿಗಳನ್ನು ಅವುಗಳೇ ಜೀವಿಸುವ ಅರಣ್ಯ ಪ್ರದೇಶಕ್ಕೆ ಬಿಡಲು ನ್ಯಾಯಾಲಯದ ಅನುಮತಿಯನ್ನು ಪಡೆಯಲು ಅರಣ್ಯ ಇಲಾಖೆ ಮುಂದಾಗಿದೆ.ನ್ಯಾಯಾಲಯದ ಅನುಮತಿ ಸಿಕ್ಕಿದ ಕೂಡಲೇ ಟಿ.ನರಸೀಪುರದ ಸಮೀಪವಿರುವ ಹದಿನಾರು ಕೆರೆಯಲ್ಲಿ ಅವುಗಳನ್ನು ಬಿಡುವುದಕ್ಕೆ ಅಧಿಕಾರಿಗಳು ನಿರ್ಧರಿಸಿದ್ದಾರೆ.
https://play.google.com/store/apps/details?id=com.speed.newskannada