ನವದೆಹಲಿ, ಜನವರಿ 23: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನದ ಹಿನ್ನೆಲೆ ಅವರ ಸ್ಮರಣಾರ್ಥ ಇಂಡಿಯಾ ಗೇಟ್ನಲ್ಲಿ ಹೊಲೊಗ್ರಾಮ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣ ಮಾಡಿದರು. ಇನ್ನು ಈ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ 2019, 2020, 2021 ಮತ್ತು 2022 ರ ಸುಭಾಸ್ ಚಂದ್ರ ಬೋಸ್ ಆಪ್ತ ಪ್ರಬಂಧನ್ ಪುರಸ್ಕಾರಗಳನ್ನು ಪ್ರದಾನ ಮಾಡಿದರು.
ಇನ್ನು ಈ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದ ಪ್ರಧಾನಿ ಮೋದಿ, “ಇಡೀ ರಾಷ್ಟ್ರವು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮದಿನವನ್ನು ಆಚರಿಸುತ್ತಿರುವ ಸಮಯದಲ್ಲಿ, ಗ್ರಾನೈಟ್ನಿಂದ ಮಾಡಿದ ಅವರ ಭವ್ಯವಾದ ಪ್ರತಿಮೆಯನ್ನು ಇಂಡಿಯಾ ಗೇಟ್ನಲ್ಲಿ ಸ್ಥಾಪಿಸಲಾಗುವುದು ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗಿದೆ. ಇದು ಇದರ ಸಂಕೇತವಾಗಿದೆ. ಅವರಿಗೆ ಭಾರತ ಋಣಿಯಾಗಿದೆ. ನೇತಾಜಿ ಬೋಸ್ ಅವರ ಭವ್ಯ ಪ್ರತಿಮೆ ಪೂರ್ಣಗೊಳ್ಳುವವರೆಗೆ, ಅವರ ಹೊಲೊಗ್ರಾಮ್ ಪ್ರತಿಮೆಯು ಅದೇ ಸ್ಥಳದಲ್ಲಿ ಇರುತ್ತದೆ,” ಎಂದು ಮಾಹಿತಿ ನೀಡಿದ್ದರು.
ಭಾರತ ಸರ್ಕಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತಿಯನ್ನು ವರ್ಷಾಪೂರ್ತಿ ಆಚರಿಸುತ್ತಿದೆ. 2021ರ ಜನವರಿ 23ರಂದು ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ಜಯಂತಿಯ ಉದ್ಘಾಟನಾ ಸಮಾರಂಭ ನಡೆದಿದೆ.
“ಶೀಘ್ರ ಹೊಲೊಗ್ರಾಮ್ ಪ್ರತಿಮೆ ಭವ್ಯವಾದ ಗ್ರಾನೈಟ್ ಪ್ರತಿಮೆಯಾಗಿ ಬದಲಾವಣೆ”
ಇನ್ನು ಇಂಡಿಯಾ ಗೇಟ್ನಲ್ಲಿ ಹೊಲೊಗ್ರಾಮ್ ಪ್ರತಿಮೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಅನಾವರಣ ಮಾಡಿದ ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ನೇತಾಜಿ ಸುಭಾಷ್ ಚಂದ್ರ ಬೋಸ್ ಬ್ರಿಟಿಷರ ಮುಂದೆ ತಲೆಬಾಗಲು ನಿರಾಕರಿಸಿದರು. ಶೀಘ್ರದಲ್ಲೇ ಹೊಲೊಗ್ರಾಮ್ ಪ್ರತಿಮೆಯನ್ನು ಭವ್ಯವಾದ ಗ್ರಾನೈಟ್ ಪ್ರತಿಮೆಯಾಗಿ ಬದಲಾವಣೆ ಮಾಡಲಾಗುವುದು. ನೇತಾಜಿ ಅವರ ಪ್ರತಿಮೆಯು ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಭವಿಷ್ಯದ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ,” ಎಂದು ತಿಳಿಸಿದರು.
ನಾವು ಸುಧಾರಣೆಗೆ ಒತ್ತು ನೀಡುವುದರ ಜೊತೆಗೆ ಪರಿಹಾರ, ರಕ್ಷಣೆ ಮತ್ತು ಪುನರ್ವಸತಿಗೆ ಒತ್ತು ನೀಡಿದ್ದೇವೆ. ನಾವು ಎನ್ಡಿಆರ್ಎಫ್ ಅನ್ನು ಆಧುನೀಕರಿಸಿದ್ದೇವೆ. ಅದನ್ನು ದೇಶಾದ್ಯಂತ ವಿಸ್ತರಿಸಿದ್ದೇವೆ. ಯೋಜನೆ ಮತ್ತು ನಿರ್ವಹಣೆಗಾಗಿ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಇತರ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲಾಗಿದೆ,” ಎಂದಿದ್ದಾರೆ.
“ನೇತಾಜಿ ಹೇಳುತ್ತಿದ್ದರು, ‘ಸ್ವತಂತ್ರ ಭಾರತದ ಕನಸಿನಲ್ಲಿ ಎಂದಿಗೂ ನಂಬಿಕೆ ಕಳೆದುಕೊಳ್ಳಬೇಡಿ, ಭಾರತವನ್ನು ಅಲುಗಾಡಿಸುವ ಶಕ್ತಿ ಜಗತ್ತಿನಲ್ಲಿ ಇಲ್ಲ’ ಎಂದು. ಇಂದು ನಾವು ಸ್ವತಂತ್ರ ಭಾರತದ ಕನಸುಗಳನ್ನು ನನಸಾಗಿಸುವ ಗುರಿಯನ್ನು ಹೊಂದಿದ್ದೇವೆ. ಸ್ವಾತಂತ್ರ್ಯದ 100 ನೇ ವರ್ಷ, 2047 ರ ಮೊದಲು ನವ ಭಾರತವನ್ನು ನಿರ್ಮಿಸುವ ಗುರಿಯನ್ನು ನಾವು ಹೊಂದಿದ್ದೇವೆ,” ಎಂದು ಹೇಳಿದರು.
“ಸ್ವಾತಂತ್ರ್ಯದ ನಂತರ ದೇಶದ ಸಂಸ್ಕೃತಿಯ ಜೊತೆಗೆ ಅನೇಕ ಮಹಾನ್ ವ್ಯಕ್ತಿಗಳ ಕೊಡುಗೆಯನ್ನು ಅಳಿಸುವ ಕೆಲಸ ನಡೆದಿರುವುದು ವಿಷಾದನೀಯ. ಸ್ವಾತಂತ್ರ್ಯ ಹೋರಾಟವು ಲಕ್ಷಾಂತರ ದೇಶವಾಸಿಗಳ ತಪಸ್ಸನ್ನು ಒಳಗೊಂಡಿತ್ತು. ಆದರೆ ಅವರ ಇತಿಹಾಸವನ್ನು ಸೀಮಿತಗೊಳಿಸುವ ಪ್ರಯತ್ನಗಳನ್ನು ಮಾಡಲಾಗಿದೆ,” ಎಂದು ಕೂಡಾ ಪ್ರಧಾನಿ ಮೋದಿ ಆರೋಪ ಮಾಡಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada