ಕಾಶ್ಮೀರಿ ಪಂಡಿತರ ಮೇಲೆ ನಡೆದ ಹಿಂಸಾಚಾರದ ಕುರಿತ ಸಿನಿಮಾ ‘ದಿ ಕಾಶ್ಮೀರ್ ಫೈಲ್ಸ್’ ಇದೀಗ ಸಿಂಗಪುರದಲ್ಲಿಯೂ ನಿಷೇಧಕ್ಕೆ ಒಳಪಟ್ಟಿದೆ. ಇದೇ ಸಿನಿಮಾ ಈ ಹಿಂದೆ ಕೆಲವು ಅರಬ್ ದೇಶಗಳಲ್ಲಿ ನಿಷೇಧಕ್ಕೆ ಒಳಗಾಗಿತ್ತು.
”ದ್ವೇಷಕ್ಕೆ ಪ್ರಚೋದನೆ ನೀಡುತ್ತಿರುವ ಕಾರಣ ಹಾಗೂ ಮುಸಲ್ಮಾನರ ಬಗ್ಗೆ ಒಂದು ಪೂರ್ವಾಗ್ರಹ ಪೀಡಿತ ರೀತಿಯಲ್ಲಿ ತೋರಿಸಿರುವ ಕಾರಣಕ್ಕೆ ಹಾಗೂ ಪ್ರಸ್ತುತ ಕಾಶ್ಮೀರ ವಿವಾದದಲ್ಲಿ ಹಿಂದುಗಳನ್ನು ಬೇರೆ ಮಾದರಿಯಲ್ಲಿ ಚಿತ್ರೀಕರಿಸಿರುವ ಕಾರಣ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ಸಿಂಗಪುರದಲ್ಲಿ ಪ್ರದರ್ಶಿಸಲು ಅನುಮತಿ ನೀಡಿಲ್ಲ” ಎಂದಿದ್ದಾರೆ ಸಿಂಗಪುರದ ಸೆನ್ಸಾರ್ ಬೋರ್ಡ್ ಅಧಿಕಾರಿಗಳು.
”ಸಿನಿಮಾದಲ್ಲಿರುವ ದೃಶ್ಯಗಳು, ದೃಶ್ಯಗಳನ್ನು ತೋರಿಸಿರುವ ರೀತಿ ಸಮುದಾಯಗಳ ನಡುವೆ ದ್ವೇಷ ಭಿತ್ತುವ ಮಾದರಿಯಲ್ಲಿವೆ. ಸಾಮಾಜಿಕ ಸಾಮರಸ್ಯಕ್ಕೆ ಅಡ್ಡಿ ತರುವಂತೆಯೂ, ಧಾರ್ಮಿಕ ಸಹಿಷ್ಣುತೆ ಭಾವಕ್ಕೆ ಧಕ್ಕೆ ತರುವಂತೆಯೂ ಇದೆ. ನಮ್ಮ ಬಹು ಸಂಸ್ಕೃತಿ, ಬಹು ಧಾರ್ಮಿಕ ನಂಬುಗೆಯ ದೇಶಕ್ಕೆ ಈ ಸಿನಿಮಾ ತಕ್ಕುದಾದುದಲ್ಲ” ಎಂದು ಅಧಿಕಾರಿಗಳು ಹೇಳಿದ್ದಾರೆ.
”ಸಿಂಗಪುರದ ಯಾವುದೇ ಧರ್ಮದ ವ್ಯಕ್ತಿಯ ಧರ್ಮವನ್ನು ಅವಹೇಳನ ಮಾಡುವ, ಕೀಳಾಗಿ ಬಿಂಬಿಸುವ ವಸ್ತುಗಳನ್ನು, ಕಂಟೆಂಟ್ ಅನ್ನು ಸಹಿಸಲಾಗುವುದಿಲ್ಲ. ಹಾಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾವನ್ನು ನಿಷೇಧ ಮಾಡಲಾಗಿದೆ” ಎಂದಿದ್ದಾರೆ ಅಧಿಕಾರಿಗಳು.
ಈ ಸುದ್ದಿಯನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮಾಡಿದ್ದು, ”ಸರ್ಕಾರ ಪ್ರಚಾರ ಮಾಡಿದ ಸಿನಿಮಾಕ್ಕೆ ಸಿಂಗಪುರದಲ್ಲಿ ನಿಷೇಧ ಹೇರಲಾಗಿದೆ” ಎಂದಿದ್ದಾರೆ.
ಶಶಿ ತರೂರ್ ಅನ್ನು ಉದ್ದೇಶಿಸಿ ಆಕ್ರೋಶದಿಂದ ಟ್ವೀಟ್ ಮಾಡಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ, ತರೂರ್ ಅವರನ್ನು ಮೂರ್ಖ, ಸದಾ ತಪ್ಪು ಹುಡುಕುವವ ಅಥವಾ ದೂರು ಹೇಳುವವ ಎಂದು ಕರೆದಿದ್ದಾರೆ.
ಬಹಳ ಕ್ಲಿಷ್ಟವಾದ ಇಂಗ್ಲೀಷ್ ಬಳಸಿ ಟ್ವೀಟ್ ಶಶಿ ತರೂರ್ ಸ್ಟೈಲ್, ವಿವೇಕ್ ಅಗ್ನಿಹೋತ್ರಿ ಸಹ ಹಾಗೆಯೇ ಟ್ವೀಟ್ ಮಾಡಿದ್ದು, ಶಶಿ ತರೂರ್ ಅನ್ನು ‘ಫಾಪ್ಡೂಡಲ್’ ಎಂದು ಕರೆದಿದ್ದಾರೆ ಹಾಗೆಂದರೆ ಮೂರ್ಖ ಎಂದರ್ಥ. ಮುಂದುವರೆದು, ”ಸಿಂಗಪುರವು ವಿಶ್ವದ ಅತಿ ಹಿಂದುಳಿದ ಸೆನ್ಸಾರ್ ಬೋರ್ಡ್ಗಳಲ್ಲಿ ಒಂದು, ಪುರಾತನ ಆಲೋಚನೆಗಳನ್ನು ಆ ಸೆನ್ಸಾರ್ ಬೋರ್ಡ್ ಹೊಂದಿದೆ. ಆ ಸೆನ್ಸಾರ್ ಬೋರ್ಡ್, ‘ದಿ ಲಾಸ್ಟ್ ಟೆಂಪ್ಟೇಷನ್ ಆಫ್ ಜೀಸಸ್ ಕ್ರೈಸ್ಟ್’ ಸಿನಿಮಾವನ್ನು ನಿಷೇಧ ಮಾಡಿದೆ, ಬೇಕಿದ್ದರೆ ನಿಮ್ಮ ಮೇಡಂ ಅನ್ನು ಕೇಳು (ಸೋನಿಯಾ ಗಾಂಧಿ). ರೊಮ್ಯಾಂಟಿಕ್ ಸಿನಿಮಾ ‘ಲೀಲಾಹೋಟೆಲ್ಫೈಲ್ಸ್’ ಸಹ ಬ್ಯಾನ್ ಆಗುತ್ತದೆ. ಎಂದು ಟಾಂಗ್ ನೀಡಿದ್ದಾರೆ. ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಹೆಣವಾಗಿ ದೊರಕಿದ್ದು ಲೀಲಾ ಹೋಟೆಲ್ನಲ್ಲೇ.
ಶಶಿ ತರೂರ್ಗೆ ಮತ್ತೊಂದು ಟ್ವೀಟ್ ಮಾಡಿರುವ ವಿವೇಕ್ ಅಗ್ನಿಹೋತ್ರಿ, ಶಶಿ ತರೂರ್ ಅವರ ದಿವಂಗತ ಪತ್ನಿ ಸುನಂದಾ ಪುಷ್ಕರ್ ಮಾಡಿದ್ದು ಎನ್ನಲಾದ ಹಳೆಯ ಟ್ವೀಟ್ ಒಂದರ ಸ್ಕ್ರೀನ್ ಶಾಟ್ ಪ್ರಕಟಿಸಿರುವ ವಿವೇಕ್ ಅಗ್ನಿಹೋತ್ರಿ, ”ಸುನಂದಾ ಪುಷ್ಕರ್ ಸಹ ಕಾಶ್ಮೀರಿ ಪಂಡಿತರಂತೆ ಹೌದೆ. ಇದು ನಿಜವಾಗಿದ್ದಲ್ಲಿ ನಿಧನ ಹೊಂದಿದವರ ಗೌರವಕ್ಕಾದರೂ ನೀವು ಈಗ ಮಾಡಿರುವ ಟ್ವೀಟ್ ಅನ್ನು ಡಿಲೀಟ್ ಮಾಡಬೇಕು” ಎಂದಿದ್ದಾರೆ.
ವಿವೇಕ್ ಅಗ್ನಿಹೋತ್ರಿ ಹಂಚಿಕೊಂಡಿರುವ ಸುನಂದಾ ಪುಷ್ಕರ್ ಅವರದ್ದು ಎನ್ನಲಾದ ಟ್ವೀಟ್ನಲ್ಲಿ, ”ಅಲ್ಪಸಂಖ್ಯಾತರಿಗಾಗಿ ಎಷ್ಟೋಂದು ಸವಲತ್ತುಗಳನ್ನು ನೀಡಲಾಗುತ್ತಿದೆ. ಆದರೆ ಕಾಶ್ಮೀರಿಗಳನ್ನು 1989 ರಿಂದಲೂ ನಿರ್ಲಕ್ಷಿಸಲಾಗಿದೆ” ಎಂದಿದ್ದಾರೆ. ಮತ್ತೊಂದು ಟ್ವೀಟ್ನಲ್ಲಿ, ”ನಾನು ಈ ಬಗ್ಗೆ ಮಾತನಾಡಲು ಯತ್ನಿಸಿದಾಗ ನನ್ನ ಪತಿ ಎಚ್ಚರವಾಗಿರುವಂತೆ ಹೇಳಿದರು. ಹಾಗಾಗಿ ನಾನು ಒಂದೋ ಪತ್ನಿಯಾಗಿರಬೇಕು ಅಥವಾ ಕಾಶ್ಮೀರಿಯಾಗಿರಬೇಕು” ಎಂದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada