ಶಿವಮೊಗ್ಗ, ಫೆಬ್ರವರಿ 2: ಕೇವಲ ಶಿವಮೊಗ್ಗ ಮಾತ್ರವಲ್ಲದೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕಳ್ಳತನ ಪ್ರಕರಣಗಳು ಹೆಚ್ಚುತ್ತಲೇ ಇದೆ. ಬೈಕ್ ಕಳ್ಳತನ, ಚಿನ್ನಾಭರಣ ಕಳ್ಳತನ, ಮೊಬೈಲ್ ಕಳ್ಳತನ ಹೀಗೆ ಹಲವಾರು ಕಳ್ಳತನ ಪ್ರಕರಣಗಳು ದಾಖಲಾಗುತ್ತಿದ್ದು, ಇಂತಹ ಕಳ್ಳತನ ಸಾಮಾನ್ಯವಾಗಿದೆ.
ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಕಳ್ಳತನ ಪ್ರಕರಣ ಎಲ್ಲರನ್ನೂ ಅಚ್ಚರಿಗೊಳಿಸಿದೆ.
ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡಿದ ಬೂದಿಯನ್ನೇ ಖದೀಮರು ಕಳ್ಳತನ ಮಾಡಿರುವ ವಿಚಿತ್ರ ಘಟನೆ ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನ ಹೊರಬೈಲು ಗ್ರಾಮದಲ್ಲಿ ಸಂಭವಿಸಿದೆ.
ತೀರ್ಥಹಳ್ಳಿಯ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲು ಗ್ರಾಮದ ಗಂಗಾಧರೇಶ್ವರ ಸ್ಮಶಾನದಲ್ಲಿ ಈ ಘಟನೆ ಸಂಭವಿಸಿದ್ದು, ಬುಧವಾರ ಬೂದಿ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ.
ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊರಬೈಲು ಗ್ರಾಮದ ಮಹಿಳೆಯೊಬ್ಬರು ನಿಧನರಾಗಿದ್ದರು. ತುಂಗಾ ನದಿ ದಡದ ಮೇಲಿರುವ ಗಂಗಾಧರೇಶ್ವರ ಸ್ಮಶಾನದಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಾಗಿತ್ತು. ಮೂರು ದಿನದ ಬಳಿಕ ಮುಂದಿನ ಕಾರ್ಯಕ್ಕಾಗಿ ಬೂದಿ ಸಂಗ್ರಹಿಸಲು ಮೃತ ಮಹಿಳೆಯ ಕುಟುಂಬಸ್ಥರು ಸ್ಮಶಾನಕ್ಕೆ ಬಂದಿದ್ದರು. ಈ ವೇಳೆ ಕುಟುಂಬಸ್ಥರು ಶಾಕ್ ಆಗುವ ಘಟನೆ ನಡೆದಿದ್ದು, ಅಂತ್ಯ ಸಂಸ್ಕಾರ ನೆರವೇರಿಸಿದ್ದ ಜಾಗದಲ್ಲಿ ಬೂದಿ ಇಲ್ಲದಿರುವುದನ್ನು ಕಂಡು ಚಕಿತಗೊಂಡಿದ್ದಾರೆ.
ಗಂಗಾಧರೇಶ್ವರ ಸ್ಮಶಾನಕ್ಕೆ ನುಗ್ಗಿದ್ದ ಖದೀಮರು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲಿ ಒಂದೇ ಒಂದು ಚೂರು ಬೂದಿಯನ್ನು ಬಿಡದೇ ಕಳ್ಳತನ ಮಾಡಿದ್ದಾರೆ. ನೆಲಸಮವಾಗಿ ಬೂದಿಯನ್ನು ದೋಚಿರುವ ಕಳ್ಳರು ಮೂರು ಎಲುಬು ಮೂಳೆಯನ್ನು ಅಂತ್ಯ ಸಂಸ್ಕಾರ ಮಾಡಿದ ಜಾಗದಲ್ಲಿ ಬಿಟ್ಟು ಹೋಗಿದ್ದಾರೆ. ಬೂದಿ ಇಲ್ಲದೇ ಇರುವುದನ್ನು ಕಂಡು ಅಚ್ಚರಿಗೊಂಡ ಮೃತ ಮಹಿಳೆಯ ಕುಟುಂಬಸ್ಥರು, ಕಳ್ಳರು ಬಿಟ್ಟು ಹೋಗಿದ್ದ ಮೂರು ಎಲುಬುಗಳನ್ನು ತೆಗೆದುಕೊಂಡು ಹೋಗಿ ಮುಂದಿನ ಕಾರ್ಯ ನೆರವೇರಿಸಿದ್ದಾರೆ.
ಅಂತ್ಯ ಸಂಸ್ಕಾರ ಮಾಡಿದ್ದ ಬೂದಿಯನ್ನು ಯಾರು ತಗೆದುಕೊಂಡು ಹೋಗಿರಬಹುದು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕಾಡುತ್ತಿದ್ದು, ಕುಟುಂಬಸ್ಥರು ಅಂತ್ಯ ಸಂಸ್ಕಾರದ ಮಹಿಳೆ ಮೇಲೆ ಚಿನ್ನ ಅಥವಾ ಬೆಳ್ಳಿಯ ಒಡೆವೆಗಳನ್ನು ಹಾಕಿರಬಹುದು. ಹೀಗಾಗಿ ಈ ವಸ್ತುಗಳಿಗಾಗಿ ಖದೀಮರು ಬೂದಿಯನ್ನೇ ಕಳ್ಳತನ ಮಾಡಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada