ಬೆಂಗಳೂರು, ಜನವರಿ 20; ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಮೂರು ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭವಾಗಲಿದೆ. ಈಗಾಗಲೇ ಮೈಸೂರು-ಚೆನ್ನೈ ನಡುವಿನ ರೈಲು ಬೆಂಗಳೂರು ಮೂಲಕ ಸಂಚಾರ ನಡೆಸುತ್ತಿದೆ.
ಮೈಸೂರುಮತ್ತು ಪುರುಚ್ಚಿ ತಲೈವರ್ ಡಾ.
ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ನವೆಂಬರ್ನಲ್ಲಿ ಚಾಲನೆ ನೀಡಿದ್ದರು. ಈ ರೈಲು ಬೆಂಗಳೂರಿನ ಮೂಲಕ ಸಂಚಾರ ನಡೆಸುತ್ತದೆಯೇ ವಿನಃ ಬೆಂಗಳೂರಿನಿಂದ ಹೊರಡುವುದಿಲ್ಲ.
ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಈ ರೈಲು ಮಾರ್ಚ್ ವೇಳೆಗೆ ಸಂಚಾರ ಆರಂಭಿಸುವ ನಿರೀಕ್ಷೆ ಇದೆ. ಈ ಮೂಲಕ ರಾಜಧಾನಿ ಮತ್ತು ಉತ್ತರ ಕರ್ನಾಟಕ ಸಂಪರ್ಕಿಸಲು ಸಹಕಾರಿಯಾಗಲಿದೆ.
ಕರ್ನಾಟಕದ ರಾಜಧಾನಿ, ಐಟಿ ಸಿಟಿ ಬೆಂಗಳೂರಿನಿಂದ ಯಾವುದೇ ವಂದೇ ಭಾರತ್ ರೈಲು ಸಂಚಾರ ನಡೆಸುತ್ತಿಲ್ಲ. ಈಗ ಬೆಂಗಳೂರು ಮತ್ತು ಹೈದರಾಬಾದ್ ನಡುವೆ ಸೆಮಿ ಹೈಸ್ಪೀಡ್ ರೈಲು ಸೇವೆ ಆರಂಭಿಸಲು ಚಿಂತನೆ ನಡೆಸಲಾಗುತ್ತಿದೆ. ಬೆಂಗಳೂರು ನಗರ ನೈಋತ್ಯ ರೈಲ್ವೆ ವಲಯಕ್ಕೆ ಸೇರಿದರೆ ಹೈದರಾಬಾದ್ ಕೇಂದ್ರ ರೈಲ್ವೆ ವಲಯದ ವ್ಯಾಪ್ತಿಗೆ ಒಳಪಡುತ್ತದೆ.
ಬೆಂಗಳೂರು-ಕಾಚಿಗೂಡ ನಡುವೆ ಸಂಚಾರ
ಭಾರತೀಯ ರೈಲ್ವೆ ಬೆಂಗಳೂರು ನಗರ ಮತ್ತು ಹೈದರಾಬಾದ್ ಸಮೀಪದ ಕಾಚಿಗೂಡ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸಲು ಚಿಂತನೆ ನಡೆಸಿದೆ.
ಕೇಂದ್ರ ರೈಲ್ವೆ ವಲಯ ಬುಧವಾರ ಕಾಚಿಗೂಡ ರೈಲು ನಿಲ್ದಾಣ ಶೀಘ್ರವೇ ಬೆಂಗಳೂರಿನಿಂದ ವಂದೇ ಭಾರತ್ ರೈಲನ್ನು ಸ್ವಾಗತಿಸಲಿದೆ ಎಂದು ಹೇಳಿದೆ. ಈ ಮೂಲಕ ರೈಲು ಸಂಚಾರಕ್ಕೆ ಯೋಜನೆ ರೂಪಿಸಲಾಗುತ್ತಿದೆ ಎಂಬ ಸೂಚನೆ ಸಿಕ್ಕಿದೆ.
ಬೆಂಗಳೂರಿಂದ ಮೂರು ಮಾರ್ಗಗಳು
ಮೈಸೂರು-ಚೆನ್ನೈ ರೈಲು ಬೆಂಗಳೂರು ಮೂಲಕ ಸಂಚಾರ ನಡೆಸುತ್ತಿದೆ. ಈಗ ಭಾರತೀಯ ರೈಲ್ವೆ ಬೆಂಗಳೂರು-ಹುಬ್ಬಳ್ಳಿ, ಬೆಂಗಳೂರು-ಸಿಕಂದರಾಬಾದ್ ಅಥವ ಬೆಂಗಳೂರು-ಕಾಚಿಗೂಡ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿಯಲ್ಲಿ ಮಂಡನೆ ಮಾಡುವ ಬಜೆಟ್ನಲ್ಲಿ ಈ ಕುರಿತು ಘೋಷಣೆ ಮಾಡುವ ನಿರೀಕ್ಷೆ ಇದೆ.
ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವುದಾಗಿ ಈಗಾಗಲೇ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದಾರೆ. ಆದರೆ ಅಂತರರಾಜ್ಯ ರೈಲು ಸಂಚಾರದ ಬಗ್ಗೆ ಘೋಷಣೆಯಾಗಬೇಕಿದೆ.
ಪ್ರಸ್ತಾವನೆಗೆ ಜನರ ಸ್ವಾಗತ
ಬೆಂಗಳೂರು-ಕಾಚಿಗೂಡ ನಡುವೆ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಪ್ರಸ್ತಾವನೆಯನ್ನು ಪ್ರಯಾಣಿಕರು, ವಿವಿಧ ಸಂಘ ಸಂಸ್ಥೆಗಳು ಸ್ವಾಗತಿಸಿವೆ. ಬೆಂಗಳೂರು ನಗರದಿಂದ ಮುಂಜಾನೆಯೇ ರೈಲು ಹೊರಟು ಕಾಚಿಗೂಡ ತಲುಪುವುದರಿಂದ ಸಹಾಯಕವಾಗಲಿದೆ. ಬಸ್, ವಿಮಾನದಲ್ಲಿ ಸಂಚಾರ ನಡೆಸುವುದಕ್ಕಿಂತ ರೈಲು ಪ್ರಯಾಣ ಅನುಕೂಲಕರವಾಗಿದೆ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. ಈ ರೈಲು ಸಂಚಾರ ಆರಂಭದ ಕುರಿತು ಯಾವಾಗ ಅಂತಿಮ ಆದೇಶ ಪ್ರಕಟವಾಗಲಿದೆ? ಎಂದು ಕಾದು ನೋಡಬೇಕಿದೆ.
ಸಾಮಾಜಿಕ ಜಾಲತಾಣದಲ್ಲಿಯೂ ಚರ್ಚೆ
ಕೆಲವು ದಿನಗಳ ಹಿಂದೆ ಹೈದರಾಬಾದ್-ಮೈಸೂರು ನಡುವೆ ಬೆಂಗಳೂರು ಮಾರ್ಗವಾಗಿ ವಂದೇ ಭಾರತ್ ರೈಲು ಸಂಚಾರ ಆರಂಭಿಸಬೇಕು ಎಂದು ಚರ್ಚೆಗಳು ನಡೆಯುತ್ತಿದ್ದವು. ತೆಲಂಗಾಣ ರಾಜ್ಯದ ಹೈದರಾಬಾದ್ ಐಟಿ ಉದ್ಯಮ, ಪ್ರವಾಸೋದ್ಯಮಕ್ಕೆ ಪ್ರಸಿದ್ಧಿಯಾಗಿದೆ. ಅದೇ ರೀತಿ ಬೆಂಗಳೂರು ಮತ್ತು ಮೈಸೂರು ಸಹ ಐಟಿ ವಲಯದಲ್ಲಿ ಪ್ರಸಿದ್ಧಿ ಪಡೆದಿವೆ. ಮೈಸೂರು ಪ್ರವಾಸಿಗರ ನೆಚ್ಚಿನ ತಾಣವಾಗಿದೆ. ಆದ್ದರಿಂದ ಬೆಂಗಳೂರು ಮೂಲಕ ಮೈಸೂರಿಗೆ ಹೈದರಾಬಾದ್ನಿಂದ ವಂದೇ ಭಾರತ್ ರೈಲು ಬರಲಿ ಎಂದು ಬೇಡಿಕೆ ಇಡಲಾಗಿತ್ತು.
ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿ ಸಾಕಷ್ಟು ಜನರು ಸಂಚಾರ ನಡೆಸುತ್ತಾರೆ. ಸೆಮಿ ಹೈಸ್ಪೀಡ್ ರೈಲು ಆರಂಭವಾದರೆ ಸಾವಿರಾರು ಜನರಿಗೆ ಸಹಾಯಕವಾಗಲಿದೆ. ಈ ಕುರಿತು ಯಾವಾಗ ಘೋಷಣೆಯಾಗಲಿದೆ? ಎಂದು ಕಾದು ನೋಡಬೇಕಿದೆ.
https://play.google.com/store/apps/details?id=com.speed.newskannada