ಬೆಂಗಳೂರು: ಜಮೀನಿಗೆ ಇ-ಖಾತೆ ಕೊಡಲು 5 ಲಕ್ಷ ರೂ. ಲಂಚಕ್ಕೆ ಬೇಡಿಕೆವೊಡ್ಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಇವರ ಗಂಡ ರೆಡ್ಹ್ಯಾಂಡ್ ಆಗಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಲೆಗೆ ಸಿಲುಕಿದ್ದಾರೆ.
ಬೆಂಗಳೂರು ದಕ್ಷಿಣ ತಾಲ್ಲೂಕು ತಾವರೆಕೆರೆ ಹೋಬಳಿ ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ವೇತಾ ಮತ್ತು ಈಕೆಯ ಪತಿ ಶಿವರಾಜ್ ಕುಮಾರ್ ಬಂಧಿತರು.
ಮಾಗಡಿ ರಸ್ತೆ ತಾವರೆಕೆರೆ ನಿವಾಸಿ, ಗಂಗೇನಹಳ್ಳಿ ಗ್ರಾಮದಲ್ಲಿ 2 ಎಕರೆ 2 ಗುಂಟೆ ಜಮೀನನ್ನು ವಾಣಿಜ್ಯ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಸಿದ್ದರು. ಈ ಜಮೀನಿಗೆ ಇ-ಖಾತಾ ಪಡೆಯಲು ಚೋಳನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದರು. ಪಂಚಾಯಿತಿಯನ್ನು ಅನುಮೋದನೆ ನೀಡಲು ಅಧ್ಯಕ್ಷೆ ಶ್ವೇತಾ ಮತ್ತು ಶಿವರಾಜ್ ಕುಮಾರ್, 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಒಡ್ಡಿದ್ದರು.
ಈ ಕುರಿತು ಅರ್ಜಿದಾರ ನೀಡಿದ ದೂರಿನ ಮೇರೆಗೆ ರಾಮನಗರ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಡಿ.16ರಂದು ಅರ್ಜಿದಾರನಿಂದ ಮುಂಗಡವಾಗಿ 2 ಲಕ್ಷ ರೂ. ಲಂಚ ಸ್ವೀಕರಿಸುವಾಗ ಟ್ರ್ಯಾಪ್ ಮಾಡಿದ್ದಾರೆ. ಅಧ್ಯಕ್ಷೆ ಮತ್ತು ಆಕೆ ಪತಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.