ಬೆಂಗಳೂರು: ಪರಿಶಿಷ್ಟ ಪಂಗಡ (ಎಸ್ಟಿ) ಸಮುದಾಯಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲು ಪ್ರಮಾಣ ಹೆಚ್ಚಳಕ್ಕೆ ರಾಜ್ಯ ಸರ್ಕಾರ ಬದ್ಧವಾಗಿದೆ. ನ್ಯಾಯಮೂರ್ತಿ ಸುಭಾಷ್ ಆಡಿ ನೇತೃತ್ವದ ಸಮಿತಿ ವರದಿ ಸಲ್ಲಿಸಿದ ನಂತರ ಅನುಷ್ಠಾನಕ್ಕೆ ತರಲಿದೆ ಎಂದು ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಅಧ್ಯಕ್ಷರೂ ಆದ ಮಾಜಿ ಶಾಸಕ ತಿಪ್ಪರಾಜು ಹವಾಲ್ದಾರ್ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ರಾಜ್ಯ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಿಪ್ಪರಾಜು ಹವಾಲ್ದಾರ್, ಎಸ್ಟಿ ಮೀಸಲು ಪ್ರಮಾಣ ಶೇ.7.5.ಕ್ಕೆ ಏರಿಸಲು ಒತ್ತಾಯಿಸಿ ಮಹರ್ಷಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿಗಳು ಹೂಡಿರುವ ಧರಣಿ 103ನೇ ದಿನಕ್ಕೆ ಕಾಲಿಟ್ಟಿದೆ. ಅವರ ಹೋರಾಟ ಸಂವಿಧಾನ ಬದ್ಧವಾಗಿದೆ. ಧರಣಿ ಆರಂಭಿಸಿದ ಮರು ದಿನವೇ ಎಸ್ಟಿ ಮೋರ್ಚಾ ಪದಾಧಿಕಾರಿಗಳ ನಿಯೋಗ ಭೇಟಿ ಮಾಡಿ ಮನವೊಲಿಸಲು ಪ್ರಯತ್ನಿಸಿದೆ ಎಂದರು.
ಸುದೀರ್ಘ ಅವಧಿಗೆ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷವು ಎಸ್ಟಿಗೆ ಹಲವು ಸಮುದಾಯಗಳನ್ನು ಸೇರಿಸಲು ಆಸಕ್ತಿ ವಹಿಸಿತು. ಆದರೆ ಮೀಸಲು ಪ್ರಮಾಣವನ್ನು ಶೇ.3ರಿಂದ ಜನಸಂಖ್ಯೆಗೆ ಹೆಚ್ಚಿಸದ ಕಾರಣ ಸಮುದಾಯಗಳು ಸಮಸ್ಯೆ ಅನುಭವಿಸುತ್ತಿವೆ. ನ್ಯಾ.ನಾಗಮೋಹನ್ ದಾಸ್ ವರದಿ ಸಲ್ಲಿಸಿದ್ದು, ಮೀಸಲು ಪ್ರಮಾಣ ಹೆಚ್ಚಳ ಕುರಿತಂತೆ ನ್ಯಾ.ಆಡಿ ಸಮಿತಿ ವರದಿ ಸಲ್ಲಿಸಿದ ಸರ್ಕಾರ ಮುಂದಿನ ಕ್ರಮವಹಿಸಲಿದೆ ಎಂದು ತಿಪ್ಪರಾಜು ಹವಾಲ್ದಾರ್ ಹೇಳಿದರು.
ಮೋದಿ ಅನನ್ಯ ಕೊಡುಗೆ:ಎಸ್ಸಿ, ಎಸ್ಟಿ ಸಮುದಾಯಗಳ ಸಮಗ್ರ ಏಳಿಗೆ, ಜೀವನಮಟ್ಟ ಸುಧಾರಣೆಗೆ ಪ್ರಧಾನಿ ನರೇಂದ್ರ ಮೋದಿಯವರು ಅನನ್ಯ ಕೊಡುಗೆ ನೀಡಿದ್ದಾರೆ. ಅಲ್ಲದೆ, ಜಾರ್ಖಂಡ್ನ ಭಗವಾನ್ ಬಿರ್ಸಾ ಮುಂಡಾ ಜಯಂತಿಯನ್ನು ಬುಡಕಟ್ಟು ಗೌರವ ದಿನವನ್ನಾಗಿ ಘೋಷಿಸಿರುವುದು ಸಮುದಾಯಗಳಿಗೆ ಹೆಮ್ಮೆಯ ಸಂಗತಿಯಾಗಿದೆ.
ಮೋದಿಯವರು ಪ್ರಧಾನಿಯಾಗಿ ಮೇ 30ಕ್ಕೆ ಎಂಟು ವರ್ಷಗಳನ್ನು ಪೂರೈಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರ್ಖಂಡ್ನ ರಾಂಚಿಯಲ್ಲಿ ಜೂ.3ಕ್ಕೆ ಬೃಹತ್ ಬುಡಕಟ್ಟು ಮೇಳ ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಪೂರಕ, ಪಕ್ಷದ ಸಂಘಟನೆ ಬಲವರ್ಧನೆ ಭಾಗವಾಗಿ ರಾಜ್ಯದಲ್ಲೂ ರ್ಯಾಲಿ, ಮೇಳ ಆಯೋಜಿಸಲು ತೀರ್ಮಾನಿಸಲಾಗಿದೆ.
ಜೂ.3ರಂದು ಚಿತ್ರದುರ್ಗದ ಕಲ್ಲಿನ ಕೋಟೆಯಿಂದ ರಾಜಾ ಮದಕರಿನಾಯಕ ರ್ಯಾಲಿ ಶುರುವಾಗಲಿದ್ದು, 14 ಎಸ್ಟಿ ವಿಧಾನಸಭೆ ಕ್ಷೇತ್ರಗಳನ್ನು ಹಾಯ್ದು ಯಾದಗಿರಿ ಜಿಲ್ಲೆಯ ಸುರಪುರಕ್ಕೆ ತಲುಪಲಿದ್ದು, ಬುಡಕಟ್ಟು ಮೇಳ ನಡೆಯಲಿದೆ. ಮತ್ತೊಂದು ಎಸ್ಟಿ ಮೀಸಲು ಕ್ಷೇತ್ರವಾದ ಎಚ್.ಡಿ.ಕೋಟೆಯಲ್ಲಿ ಪ್ರತ್ಯೇಕ ಕಾರ್ಯಕ್ರಮ ಏರ್ಪಡಿಸುವ ಉದ್ದೇಶವಿದೆ ಎಂದು ತಿಪ್ಪರಾಜು ಹವಾಲ್ದಾರ್ ತಿಳಿಸಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://plಇay.google.com/store/apps/details?id=com.speed.newskannada