ಚಿತ್ರಮಂದಿರಗಳ ಮೇಲೆ ಸರ್ಕಾರ ಹೇರಿರುವ 50% ಆಕ್ಯುಪೆನ್ಸಿ ನಿಯಮ ಹಿಂದೆಗೆದುಕೊಳ್ಳದೇ ಇರುವ ಬಗ್ಗೆ ಚಿತ್ರರಂಗದ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ವಿಜಯ್ ರಾಘವೇಂದ್ರ ಕಾದು ನೋಡುವ ತಂತ್ರ ಉತ್ತಮ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯ್ ರಾಘವೇಂದ್ರ, ”ಸರ್ಕಾರ ಏನೇ ಮಾಡಿದರೂ ಅದರ ಹಿಂದೊಂದು ಉದ್ದೇಶ, ಅರ್ಥ ಇರುತ್ತದೆ. ಮುಂದಿನ ದಿನಗಳಲ್ಲಿ ಚಿತ್ರಮಂದಿರದ ಮೇಲೆ ಹೇರಲಾಗಿರುವ ನಿಯಮ ಸಡಿಲಿಸಬಹುದು ತಾಳ್ಮೆಯಿಂದ ಇರೋಣ. ಚಿತ್ರರಂಗಕ್ಕೂ ಒಳ್ಳೆಯದಾಗುತ್ತದೆ” ಎಂದಿದ್ದಾರೆ.”ಈ ಹಿಂದೆಯೂ ಸರ್ಕಾರವು 100% ಆಕ್ಯುಪೆನ್ಸಿಗೆ ಅವಕಾಶ ನೀಡಿತ್ತು. ನಿಯಮವನ್ನು ಸಡಿಲಿಸಿಯೇ ಇಲ್ಲ ಎಂದೇನೂ ಇಲ್ಲ. ಹಾಗಾಗಿ ನಾವು ಸ್ವಲ್ಪ ತಾಳ್ಮೆಯಿಂದ ಜಾಗೃತೆಯಿಂದ ಇರೋಣ. ಬೇರೆ ಉದ್ಯಮಗಳಿಗೆ ನೀಡಲಾಗಿರುವ 100 ಆಕ್ಯುಪೆನ್ಸಿ ಚಿತ್ರರಂಗಕ್ಕೂ ದೊರಕಲಿದೆ” ಎಂದಿದ್ದಾರೆ ವಿಜಯ್ ರಾಘವೇಂದ್ರ.ಬಾರು, ಪಬ್ ಸೇರಿದಂತೆ ಇತರ ಉದ್ಯಮಗಳಿಗೆ 100% ಆಕ್ಯುಪೆನ್ಸಿಗೆ ಸರ್ಕಾರ ಅವಕಾಶ ನೀಡಿದೆ. ಆದರೆ ಚಿತ್ರಮಂದಿರಗಳ ಮೇಲೆ ಹೇರಿರುವ 50% ಸೀಟು ಭರ್ತಿ ನಿಯಮವನ್ನು ಹಾಗೆಯೇ ಮುಂದುವರೆಸಿದೆ. ಸರ್ಕಾರದ ಈ ನಿರ್ಧಾರದ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ನಿನ್ನೆ ಮೈಸೂರಿನಲ್ಲಿ ಮಾತನಾಡಿದ್ದ ನಟ ಶಿವರಾಜ್ ಕುಮಾರ್, ”ನಾವು ಕೊರೊನದ ಜೊತೆ ಜೊತೆಗೆ ಬದುಕಬೇಕಿದ್ದು, ಅದರ ಜೊತೆಗೆ ಬದುಕಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಎಲ್ಲಾ ಕ್ಷೇತ್ರಗಳಿಗೂ 50:50 ರೂಲ್ಸ್ ನಿಂದ ರಿಲ್ಯಾಕ್ಸ್ ಕೊಡಲಾಗಿದೆ. ಆದರೆ ಸಿನಿಮಾ ಮಂದಿರಗಳಿಗೆ ಮಾತ್ರ 50:50 ರೂಲ್ಸ್ ಮುಂದುವರಿಸಲಾಗಿದ್ದು, ನಿನ್ನೆಯಷ್ಟೇ ಕೂಡ ನಾನು ಈ ಬಗ್ಗೆ ಮಾಹಿತಿ ತೆಗೆದುಕೊಂಡಿದ್ದೇನೆ. ಆದರೆ ಸಿನಿಮಾ ಮಂದಿರಗಳಿಗೆ ಯಾಕೆ ರಿಲ್ಯಾಕ್ಸ್ ಕೊಟ್ಟಿಲ್ಲ ಎಂದು ಗೊತ್ತಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಭೇಟಿ ಮಾಡಿ ಮನವಿ ಮಾಡುತ್ತೇನೆ. ಮುಖ್ಯಮಂತ್ರಿಗಳು ನಮಗೆ ಸಾಕಷ್ಟು ಬಾರಿ ಅನುಕೂಲ ಮಾಡಿಕೊಟ್ಟಿದ್ದು, ಈಗಲೂ ನಮಗೆ ಅನುಕೂಲ ಮಾಡಿಕೊಡುವ ಭರವಸೆ ಇದೆ” ಎಂದು ಹೇಳಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada