ಹುಬ್ಬಳ್ಳಿ: ರಣದೀಪ್ ಸುರ್ಜೇವಾಲ ಅವರಿಗೆ ಕರ್ನಾಟಕದ ಬಗ್ಗೆ ಏನು ಗೊತ್ತಿದೆ. ಅವರು ಕಾಂಗ್ರೆಸ್ಸಿನ ಒಳಜಗಳವನ್ನು ಮೊದಲು ಸರಿಪಡಿಸಲಿ ಆಮೇಲೆ ಕರ್ನಾಟಕದ ಬಗ್ಗೆ ಮಾತನಾಡಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಮಾತನಾಡಿದರು. ಬೊಮ್ಮಾಯಿ ಅವರ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ನರಕ ಸೃಷ್ಟಿಯಾಗಿದೆ ಎಂದಿರುವ ಸುರ್ಜೇವಾಲಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಸೃಷ್ಟಿಸಿದ್ದ ನರಕದಿಂದಲೇ ಜನತೆ ಅವರನ್ನು ಮನೆಗೆ ಕಳುಹಿಸಿದ್ದಾರೆ. ಅತ್ಯಂತ ಬೇಜವಾಬ್ದಾರಿ ವಿರೋಧ ಪಕ್ಷವಿದು. ಜನರಿಗೆ ತಮ್ಮ, ನಮ್ಮ ವೈಫಲ್ಯಗಳನ್ನು ತೋರಿಸುವ ಬದಲು ಈ ರೀತಿಯ ಮಾತುಗಳು ಜನರ ಮೇಲೆ ಪ್ರಭಾವ ಬೀರುವುದಿಲ್ಲ ಎಂದರು.
ಅಸುರರ ದೊಡ್ಡ ಪಟ್ಟಿ :
ಬಿಜೆಪಿ ಅಸುರರು, ಬೊಮ್ಮಾಯಿ ಅವರು ಭ್ರಷ್ಟಾಸುರ ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಬೊಮ್ಮಾಯಿ, ಜನರಿಗೆ ಯಾರು ಅಸುರರು, ಯಾರು ದೇವತೆಗಳು ಎಂದು ಗೊತ್ತಿದೆ. 70 ವರ್ಷ ಆಡಳಿತ ಮಾಡಿರುವ ಕಾಂಗ್ರೆಸ್ ಕಿತ್ತೊಗೆದು ಅಸುರರು ಯಾರೆಂದು ತೋರಿಸಿದ್ದಾರೆ. ಕಾಂಗ್ರೆಸ್ ನ ಅಸುರರ ದೊಡ್ಡ ಪಟ್ಟಿಯೇ ಇದೆ ಎಂದರು.
ಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ :
ನಕಲು ಮಾಡುವಾಗ ಬುದ್ದಿ ಇರಬೇಕೆಂದಿರುವ ಹೇಳಿಕೆಗೆ ಉತ್ತರಿಸಿ ಅವರಿಗೂ ನಮಗೂ ಬಹಳ ವ್ಯತ್ಯಾವಿದೆ. ಅವರು ಚುನಾವಣೆಗಾಗಿ ಆಕಾಶವನ್ನು ತೋರಿಸಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡಿದ್ದಾರೆ. ನಾವು ಯಾವುದಕ್ಕಾಗಿ, ಯಾರಿಗೆ, ಎಷ್ಟು ಹಣವಾಗುತ್ತದೆ ಎಂದು ವಿವರಿಸಿದ್ದೇವೆ. ಅವರು ನಮ್ಮನ್ನು ನಕಲು ಮಾಡಿದ್ದಾರೆ. ನಾವು ಗೃಹಿಣಿ ಶಕ್ತಿ ನೀಡಿದ ಮೇಲೆ ಗೃಹಲಕ್ಷ್ಮಿ ಯೋಜನೆ ಘೋಷಿಸಿದ್ದಾರೆ. ಆದ್ದರಿಂದ ಸುರ್ಜೇವಾಲಾ ಅವರಿಗೆ ನೆನಪಿನ ಶಕ್ತಿ ಕಡಿಮೆಯಾಗಿದೆ ಎಂದರು.
ಅನುಷ್ಠಾನ ಸಮಿತಿ ರಚನೆ :
ಕಳೆದ ಬಾರಿ ಆಯವ್ಯಯ ಅನುಷ್ಠಾನಕ್ಕೆ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ಶೇ 90 ಆದೇಶಗಳನ್ನು ಹೊರಡಿಸಲಾಗಿದೆ. ಅದೇ ರೀತಿ ಈ ಬಾರಿಯೂ ಕೂಡ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಅನುಷ್ಠಾನ ಸಮಿತಿ ರಚಿಸಿ ಅನುಷ್ಠಾನ ಮಾಡಲಾಗುವುದು ಎಂದರು.
ಕಾಂಗ್ರೆಸ್ಸಿನವರ ಕಿವಿಗಳ ಮೇಲೆ ಶಾಶ್ವತವಾಗಿ ಹೂವಿರಲಿದೆ :
ವಿರೋಧ ಪಕ್ಷದವರು ಕಿವಿ ಮೇಲೆ ಹೂವಿಟ್ಟುಕೊಳ್ಳುವ ಅಭಿಯಾನ ಆರಂಭಿಸಿರುವ ಬಗ್ಗೆ ಉತ್ತರಿಸಿ ಇಷ್ಟು ದಿನ ಜನರಿಗೆ ಅವರು ಕಿವಿ ಮೇಲೆ ಹೂವಿಟ್ಟಿದ್ದು, ಇನ್ನು ಮುಂದೆ ಜನ ನಿಮಗೆ ಕಿವಿ ಮೇಲೆ ಹೂವಿಡುತ್ತಾರೆ ಎಂದು ವಿಧಾನಸಭೆಯಲ್ಲಿಯೇ ಉತ್ತರಿಸಿದ್ದೇನೆ. ಶಾಶ್ವತವಾಗಿ ಅವರ ಕಿವಿಗಳ ಮೇಲೆ ಹೂವಿರಲಿದೆ. ಚುನಾವಣೆಯಾದ ನಂತರ ಅವರ ಕಿವಿ ಮೇಲೆ ಹೂವಿರಲಿದೆ ಎಂದರು.
ಬಣ್ಣ ಬದಲಾಯಿಸುವ ವ್ಯಕ್ತಿ :
ವಿರೋಧ ಪಕ್ಷದವರು ಒಗ್ಗೂಡಿದರೆ ಬಿಜೆಪಿಯನ್ನು ಸೋಲಿಸಬುಹುದು ಎಂದಿರುವ ಬಿಹಾರದ ಮುಖ್ಯಮಂತ್ರಿಗಳ ಹೇಳಿಕೆಗೆ ಉತ್ತರಿಸಿ ನಿತೇಶ್ ಕುಮಾರ್ ಅವರು ಎಷ್ಟು ಬಾರಿ ಬಣ್ಣ ಬದಲಾಯಿಸಿದ್ದಾರೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಬಣ್ಣ ಬದಲಾಯಿಸುವ ವ್ಯಕ್ತಿಯ ಮಾತಿಗೆ ಏನು ಉತ್ತರ ನೀಡಲು ಸಾಧ್ಯ ಎಂದರು.
ಉತ್ತರ ಕರ್ನಾಟಕದ ಪತ್ರಕರ್ತರಿಗೆ ಸೂಕ್ತ ಪ್ರಾತಿನಿಧ್ಯ :
ಮಾಧ್ಯಮ ಅಕಾಡೆಮಿಯಿಂದ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಅನ್ಯಾಯವಾಗುತ್ತಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು, ಅಕಾಡೆಮಿಗೆ ನಾಮಕರಣವಾಗುವ ವೇಳೆ ಉತ್ತರ ಕರ್ನಾಟಕದ ಪತ್ರಕರ್ತರಿಗೆ ಸೂಕ್ತ ಪ್ರಾತಿನಿಧ್ಯ ನೀಡಲು ಕ್ರಮ ವಹಿಸಲಾಗುವುದು ಎಂದರು. ಅನುಷ್ಠಾನ ಮಹದಾಯಿ ಯೋಜನೆಯ ಅನುಷ್ಠಾನ ಶೀಘ್ರದಲ್ಲಿಯೇ ಆಗುವುದು ಎಂದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada