ಮೊಳಕಾಲ್ಮುರು: ಮಾಜಿ ಶಾಸಕ ಎಸ್. ತಿಪ್ಪೇಸ್ವಾಮಿ ಅವರನ್ನು ಬಿಜೆಪಿಗೆ ವಾಪಸ್ ಕರೆತಂದ ಸಚಿವ
ಶ್ರೀರಾಮುಲು ಅವರ ಬಗ್ಗೆ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಎಸ್ಟಿ ಮೋರ್ಚಾ ರಾಜ್ಯ ಸಮಿತಿ ಸದಸ್ಯ ಪ್ರಭಾಕರ ಮ್ಯಾಸನಾಯಕ ಅವರು ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.
‘ಮಾಜಿ ಶಾಸಕ ತಿಪ್ಪೇಸ್ವಾಮಿ ಅವರನ್ನು ಪಕ್ಷಕ್ಕೆ ಕರೆತಂದು ಟಿಕೆಟ್ ಕೊಡುತ್ತೇನೆ ಎಂದು ಹೇಳಲು ಶ್ರೀರಾಮುಲು ಯಾರು ?. ಬಿಜೆಪಿಯನ್ನು ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ ಎಂದು ಕೊಂಡಿದ್ದಾರಾ. ಇದು ಕಾರ್ಯಕರ್ತರ ಪಕ್ಷ. ಇಲ್ಲಿ ಹೈಕಮಾಂಡ್ ಇದೆ’ ಎಂದು ಪ್ರಭಾಕರ ಅವರು ಮಾತನಾಡಿರುವುದು ಆಡಿಯೊದಲ್ಲಿದೆ.
‘ನಾನು 9ನೇ ತರಗತಿಯಿಂದಲೇ ಆರ್ಎಸ್ಎಸ್ನಲ್ಲಿ ಇದ್ದೇನೆ. ಪಕ್ಷ ನನ್ನ ಸೇವೆ ಗುರುತಿಸಿ ಈ ಬಾರಿ ಟಿಕೆಟ್ ನೀಡುವುದು ಖಚಿತ. ಈ ಬಗ್ಗೆ ನಂಬಿಕೆ ಇದ್ದು, ಟಿಕೆಟ್ ತಂದೇ ತರುತ್ತೇನೆ. ಅಜ್ಜ (ನೇರ್ಲಗುಂಟೆ ತಿಪ್ಪೇಸ್ವಾಮಿ) ನನಗೆ ಸಪೋರ್ಟ್ ಮಾಡುತ್ತಾರೆ. ಖಂಡಿತಾ ಗೆಲ್ಲಿಸಿಕೊಂಡು ಬರುತ್ತಾರೆ. ನೀವೆಲ್ಲಾ ಸಹಕಾರ ನೀಡಬೇಕು’ ಎಂದು ಅವರು ಮಾತನಾಡಿದ್ದಾರೆ.
‘ಗುಜರಾತ್, ಹಿಮಾಚಲ ಪ್ರದೇಶ ಮಾದರಿಯಲ್ಲಿ ಇಲ್ಲಿಯೂ ಟಿಕೆಟ್ ಹಂಚಿಕೆಯಾಗುತ್ತದೆ. ಟಿಕೆಟ್ ಸಿಗುತ್ತೆ ಎಂದು ಹೇಳಿ ಹೋಗಲು ಶ್ರೀರಾಮುಲು ಬಿಜೆಪಿಯನ್ನು ಬಿಎಸ್ಆರ್ ಕಾಂಗ್ರೆಸ್ ಪಾರ್ಟಿ ಎಂದು ಕೊಂಡಿದ್ದಾರಾ’ ಎಂದು ಹೇಳಿರುವುದು ಆಡಿಯೊದಲ್ಲಿದೆ.
ಈ ಬಗ್ಗೆ ‘ಪ್ರಜಾವಾಣಿ’ ಪ್ರಭಾಕರ ಅವರನ್ನು ಸಂಪರ್ಕಿಸಿದಾಗ, ‘ಆಡಿಯೊದಲ್ಲಿರುವುದು ನನ್ನ ಧ್ವನಿಯೇ. ಯಾರೋ ಕಾರ್ಯಕರ್ತರ ಜತೆ ಲೋಕಾಭಿರಾಮವಾಗಿ ಮಾತನಾಡುವಾಗ ಈ ರೀತಿ ಮಾತನಾಡಿದ್ದೇನೆ. ಉದ್ದೇಶಪೂರ್ವಕವಾಗಿ ಮಾತನಾಡಿಲ್ಲ. ಶ್ರೀರಾಮುಲು, ತಿಪ್ಪೇಸ್ವಾಮಿ ಮತ್ತು ಪಕ್ಷದ ಬಗ್ಗೆ ಗೌರವವಿದೆ’ ಎಂದು ಹೇಳಿದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada