ಬೆಂಗಳೂರಿನಲ್ಲಿ ಆಸ್ತಿ ಪಡೆದುಕೊಳ್ಳಬೇಕೆಂಬ ಹಿನ್ನೆಲೆ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಸಹೋದರಿಯ ಗಂಡನನ್ನೇ ಮುಗಿಸಲು ಹೋಗಿದ್ದಾನೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದರಿಂದ ಮುಂದೆ ಆಗುತ್ತಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ. ಒಂದೆಡೆ ಕೊರೊನಾ, ಮತ್ತೊಂದೆಡೆ ಭಾನುವಾರದ ಲಾಕ್ ಡೌನ್. ಇದರ ಮಧ್ಯೆ ನಗರದಲ್ಲಿ ಪೊಲೀಸರ ರಿವಾಲ್ವಾರ್ ಸದ್ದು ಮಾಡಿದೆ. ಭರತ್ ಅಲಿಯಾಸ್ ಬಾಬು, ಅರುಣ್ ಕುಮಾರ್ ಅಲಿಯಾಸ್ ಕೊಳಕನಿಗೆ ಪೊಲೀಸರು ಗುಂಡು ಹಾರಿಸಿದ್ದಾರೆ. ಜುಲೈ 23 ರಂದು ಹೆಸರುಘಟ್ಟ ಬಳಿ ರಾಜಶೇಖರ್ ಎಂಬುವರ ಮೇಲೆ ಆರು ಜನರ ತಂಡ ದಾಳಿ ಮಾಡಿತ್ತು. ನಂತರ ಈ ಘಟನೆ ಸಂಬಂಧ ಉತ್ತರ ವಿಭಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಕೆಲ ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು, ಇನ್ನೂ ಕೆಲವರ ಬಂಧನಕ್ಕೆ ಮುಂದಾಗಿದ್ರು. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಮೊದಲು ಸೋಲದೇವನಹಳ್ಳಿ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಆರೋಪಿಗಳಿಗೆ ಶರಣಾಗುವಂತೆ ಸೂಚಿಸಿದ್ದಾರೆ. ಆರೋಪಿಗಳು ಶರಣಾಗದೆ ಸಿಬ್ಬಂದಿ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಹೀಗಾಗಿ ಇಬ್ಬರ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ. ಬಂಧಿತರನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಿ ಚಿಕಿತ್ಸೆ ನೀಡಲಾಗುತ್ತಿದೆ.