ಬೆಂಗಳೂರು: ರಾಜ್ಯದ ಕಾರ್ಮಿಕರ ಬಳಿ ಶ್ರೀಮಂತಿಕೆ ಇಲ್ಲದಿರಬಹುದು. ಹಾಗಂತ ಅವರನ್ನು ಕೀಳಾಗಿ ನೋಡಬೇಡಿ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಿ, ರಾಜ್ಯದ ಅಭಿವೃದ್ಧಿಯಲ್ಲಿ ಅವರ ಪಾತ್ರವೂ ಇದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈ ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ. ವಲಸೆ ಕಾರ್ಮಿಕರನ್ನು ಕೀಳಾಗಿ ನೋಡಬೇಡಿ. ಅವರನ್ನು ಗೌರವಯುತವಾಗಿ ನಡೆಸಿಕೊಳ್ಳಿ. ಅವರನ್ನು ಹಗಲಿರಳು ರಸ್ತೆಯಲ್ಲಿ ನಿಲ್ಲಿಸಿದಿರಲ್ಲಾ ನಿಮಗೆ ಅದಕ್ಕಿಂತ ನಾಚಿಕೆಗೇಡಿನ ವಿಚಾರ ಬೇರೆ ಬೇಕೆ..?. ನಮ್ಮ ರಾಜ್ಯದಿಂದ 25 ಸಂಸದರನ್ನು ಆಯ್ಕೆ ಮಾಡಿ ಕಳಿಸಿದ್ದೇವೆ. ರೈಲ್ವೇ ಖಾತೆ ರಾಜ್ಯ ಸಚಿವರೂ ಕೂಡ ನಮ್ಮ ರಾಜ್ಯದವರೇ. ಹೀಗಿರುವಾಗ ಬೇರೆ ರಾಜ್ಯಗಳಲ್ಲಿ ನೀಡಲಾಗಿರುವ ರೈಲು ಸೇವೆಯನ್ನು ರಾಜ್ಯದಲ್ಲೂ ತಂದು ಹೊರ ರಾಜ್ಯಗಳಲ್ಲಿ ಸಿಲುಕಿರುವ ನಮ್ಮ ಜನರನ್ನು ವಾಪಸ್ ಕರೆ ತರಲು ಏನು ಸಮಸ್ಯೆ? ರೈಲ್ವೇ ಇಲಾಖೆ ಪಿಎಂ ನಿಧಿಗೆ 150 ಕೋಟಿ ನೀಡಿದೆ. ಅಲ್ಲಿಗೆ ನೀಡುವ ಬದಲು ಬಡ ಕಾರ್ಮಿಕರಿಗಾಗಿ ರೈಲು ಸೇವೆ ನೀಡಬಹುದಿತ್ತು. ರಾಜ್ಯ ಸರ್ಕಾರ ರೈಲ್ವೇ ಇಲಾಖೆ ಜತೆ ಮಾತುಕತೆ ನಡೆಸಿ ರೈಲು ವ್ಯವಸ್ಥೆ ಕಲ್ಪಿಸಲಿ. ಅದಕ್ಕೆ ಬೇಕಾದ ಹಣವನ್ನು ನಾವು ನೀಡುತ್ತೇವೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ನಮ್ಮ ಪಕ್ಷ ಪ್ರಯಾಣದ ವೆಚ್ಚ ಭರಿಸಲು ನಿರ್ಧರಿಸಿದೆ. ಮುಖ್ಯಮಂತ್ರಿಗಳು ಉಚಿತ ಬಸ್ ವ್ಯವಸ್ಥೆ ಕಲ್ಪಿಸಿರುವುದು ಸ್ವಾಗತಾರ್ಹ. ನಮ್ಮ ಪಕ್ಷದ ಪರವಾಗಿ ನಾನು ಮನವಿ ಮಾಡಿರಬಹುದು, ಆದರೆ ಇದು ನನ್ನ ಜಯ ಎಂದು ನಾನು ಪರಿಗಣಿಸುವುದಿಲ್ಲ. ಈ ನಾಡಿನ ಜನತೆ, ಬಡವರಿಗೆ ಸಿಕ್ಕ ಗೌರವ. ಈ ರಾಜ್ಯದ ಅಭಿವೃದ್ಧಿ ಮಾಡಿರುವುದು ಅವರು. ಅವರಿಗೆ ಗೌರವ ಕೊಡಬೇಕಾದದ್ದು, ನಮ್ಮ ಕರ್ತವ್ಯ ಹಾಗೂ ಧರ್ಮ. ಹೀಗಾಗಿ ಇದರಲ್ಲಿ ನಾವು ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು.
ಸರ್ಕಾರಕ್ಕೆ ಕಣ್ಣೂ ಇಲ್ಲ, ಕಿವಿಯೂ ಇಲ್ಲ: ಡಿಕೆಶಿ
Please follow and like us: