ಚಾಮರಾಜನಗರ: ಅನಧಿಕೃತ ನಿರ್ಮಾಣದ ಕಟ್ಟಡವನ್ನು 10 ದಿನದೊಳಗೆ ತೆರವುಗೊಳಿಸಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಗುಂಡ್ಲುಪೇಟೆ ತಹಶೀಲ್ದಾರರಿಗೆ ಗ್ರಾಮಸ್ಥರು ಮನವಿ ಪತ್ರ ಸಲ್ಲಿಸಿದ್ದಾರೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪರಿಸರ ಸೂಕ್ಷ್ಮ ವ್ಯಾಪ್ತಿಗೆ ಒಳಪಟ್ಟ ಗುಂಡ್ಲುಪೇಟೆ ತಾಲೂಕಿನ ಹಂಗಳ ಹೋಬಳಿ ಮಂಗಲ ಗ್ರಾಮದಲ್ಲಿ ಬೀಗಮುದ್ರೆ ಮಾಡಿದ ಹೋಮ್ ಸ್ಟೇ ಕೊಠಡಿ ತೆರೆದು ದುರಸ್ಥಿ ಕಾರ್ಯ ಕೈಗೊಂಡಿರುವ ಅನಧಿಕೃತ ಕಟ್ಟಡಗಳನ್ನ ತೆರವುಗೊಳಿಸಿ. ಗುಂಡ್ಲುಪೇಟೆ ತಾಲೂಕು ಹಂಗಳ ಹೋಬಳಿ ಮಂಗಲ ಗ್ರಾಮದ ಸರ್ವೆ ನಂ. 56/2 ರಲ್ಲಿ 2.10 ಎಕರೆ ಜಮೀನಿನ ಪೈಕಿ 0.20 ಎಕರೆ ಜಮೀನು ಮಹದೇವಪ್ಪ ಬಿನ್ ಬೆಳ್ಳಪ್ಪರವರ ಹೆಸರಿನಲ್ಲಿ ಖಾತೆ ಇರುತ್ತದೆ. ಅರವಿಂದ ವೆಂಕಟೇಶರೆಡ್ಡಿ ಬಿನ್ ವಸಂತರಾಜು ಅವರೊಂದಿಗೆ ಕರಾರು ಒಪ್ಪಂದ ಮಾಡಿಕೊಳ್ಳಲಾಗಿದೆ. ಸದರಿ ಜಮೀನಿನಲ್ಲಿರುವ ಅನಧಿಕೃತ ಹೋಮ್ ಸ್ಟೇ ಯನ್ನು ಈ ಹಿಂದೆ ಜಿಲ್ಲಾಧಿಕಾರಿಗಳ ಆದೇಶದಂತೆ ಮುಚ್ಚಿಸಲಾಗಿತ್ತು. ಆದರೆ ಪ್ರಸ್ತುತ ಸ್ಥಳ ತನಿಖಾ ಸಮಯದಲ್ಲಿ ಜಮೀನಿನಲ್ಲಿರುವ ಎಲ್ಲಾ ಕೊಠಡಿಗಳ ಬೀಗಮುದ್ರೆ ತೆಗೆದು ಕೊಠಡಿಗಳ ದುರಸ್ಥಿ ಕಾರ್ಯ ನಡೆಸುತ್ತಿದ್ದಾರೆ ಎಂದು ಮನವಿಯಲ್ಲಿದೆ.
ಈ ಕುರಿತು ಪರಿಶೀಲಿಸಲಾಗಿ ಸದರಿ ಕಟ್ಟಡವನ್ನು ಬಂಡೀಪುರ ಅರಣ್ಯ ಕರಡು ಅಧಿಸೂಚನೆ ದಿನಾಂಕ 31-08-2010ರ ನಂತರ ನಿರ್ಮಿಸಿರುವುದರಿಂದ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಕಲಂ 96(1) ರೀತ್ಯಾ ಅನಧಿಕೃತವಾಗಿ ಹೋಮ್ ಸ್ಟೇ ನಡೆಸುತ್ತಿದ್ದರಿಂದ ಜಮೀನಿನ ಖಾತೆದಾರರಿಗೆ ನೋಟಿಸ್ ನೀಡಿ ಕಟ್ಟಡ ಬೀಗಮುದ್ರೆ ಮಾಡಿ ಮುಚ್ಚಿಸಲಾಗಿರುತ್ತದೆ. ಪ್ರಸ್ತುತ ಜಮೀನಿನ ಖಾತೆದಾರರು ಯಾವುದೇ ಪೂರ್ವಾನುಮತಿ ಪಡೆಯದೇ ಬೀಗಮುದ್ರೆ ಮಾಡಿದ ಕೊಠಡಿಗಳನ್ನು ತೆರೆದು ಕಾರ್ಯ ನಡೆಸುತ್ತಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಅನಧಿಕೃತವಾಗಿ ನಿರ್ಮಿಸಿರುವ ಕಟ್ಟಡವನ್ನು 10 ದಿನದೊಳಗೆ ತೆರವುಗೊಳಿಸಿ ನಿಯಮಾನುಸಾರ ಅಗತ್ಯ ಕ್ರಮ ವಹಿಸುವಂತೆ ಸೂಚಿಸಿ ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಅವರು ಗುಂಡ್ಲುಪೇಟೆ ತಾಲೂಕು ತಹಶೀಲ್ದಾರ್ರವರಿಗೆ ಪತ್ರ ಬರೆದಿದ್ದಾರೆ.