ಶಿವಮೊಗ್ಗದಲ್ಲಿ ಈವರೆಗೆ ಒಂದೇ ಒಂದು ಕೊರೋನಾ ಪ್ರಕರಣ ಪತ್ತೆಯಾಗದ ಕಾರಣ ದಿನವಿಡೀ ವ್ಯಾಪಾರ ವಹಿವಾಟು ನಡೆಸಲು ಅವಕಾಶ ನೀಡಲಾಗಿದೆ. ಆದ್ರೆ, ಕೊರೋನಾ ವರ್ಷಗಟ್ಟಲೆ ಹರಡುವ ಸಾಧ್ಯತೆ ಇದ್ದು, ಜನ ಈ ಕುರಿತು ಎಚ್ಚರಿಕೆ ವಹಿಸಬೇಕು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಈವರೆಗೂ ಒಂದೂ ಪಾಸಿಟಿವ್ ಕೇಸು ಪತ್ತೆಯಾಗಿಲ್ಲ. ಈ ನಡುವೆ ಜನಜೀವನವೂ ನಡೆಯಬೇಕಲ್ಲಾ. ಇದೇ ಕಾರಣಕ್ಕೆ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ. ಜನರೇ ನಾವು ಶಿಸ್ತನಿಂದ ಇರುತ್ತೇವೆ ಎಂದಿದ್ದಕ್ಕೆ ಮಾರುಕಟ್ಟೆ ತೆರೆಯಲು ಅವಕಾಶ ಮಾಡಿಕೊಡಲಾಗಿದೆ. ಇನ್ನೂ ಕೊರೋನಾ ವರ್ಷಗಟ್ಟಲೇ ಮುಂದುವರೆಯುವ ಸಾಧ್ಯತೆ ಇದೆ. ಅಲ್ಲಿಯವರಗೂ ವ್ಯಾಪಾರ ನಿಲ್ಲಿಸೋಕೆ ಆಗುತ್ತಾ. ಕಟಿಂಗ್ ಶಾಪ್, ಬಂಗಾರದ ಅಂಗಡಿಗಳು ಹೊರತು ಪಡಿಸಿ ಉಳಿದ ಅಂಗಡಿಗಳಿಗೆ ಅನುಮತಿ ನೀಡಲಾಗಿದೆ. ಜನಜಂಗುಳಿಯಾಗದಂತೆ, ನೋಡಿಕೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲಾಗಿದೆ. ಯಾರು ನಿಯಮ ಉಲ್ಲಂಘಿಸುತ್ತಾರೋ ಅವರ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಕೇಂದ್ರ ಸರ್ಕಾರದ ನಿರ್ದೇಶನ ಆಧರಿಸಿ, ನಾಳೆ ರಾಜ್ಯ ಸರ್ಕಾರ ಹೊಸ ನಿಯಮ ಜಾರಿಗೆ ತರಲಿದೆ” ಎಂದು ಹೇಳಿದರು.