ಪಾದರಾಯನಪುರದಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಶಾಸಕ ಜಮೀರ್ ಅಹಮದ್ ನೇರ ಕಾರಣರಾಗಿದ್ದು, ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸುವಂತೆ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾದರಾಯನಪುರದಲ್ಲಿ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೆ ನಡೆಸಿದ ಹಲ್ಲೆ ಖಂಡನೀಯ. ಈ ಪ್ರಕರಣದಲ್ಲಿ ಬಿಬಿಎಂಪಿ ಮತ್ತು ಪೊಲೀಸ್ ಸಿಬ್ಬಂದಿಯ ನಡೆಯೇ ತಪ್ಪು ಎಂಬಂತೆ ಮಾತನಾಡಿರುವ ಶಾಸಕರ ಜಮೀರ್ ಅಹಮದ್ ಖಾನ್ ಅವರ ವಿರುದ್ಧ ನ್ಯಾಷನಲ್ ಸೆಕ್ಯೂರಿಟಿ ಆಕ್ಟ್ ಅಡಿಯಲ್ಲಿ ಕೇಸು ದಾಖಲಿಸಬೇಕು. ಜಮೀರ್ ಅಹಮದ್ ಖಾನ್ಗೆ ಸಿಎಎ, ಎನ್ಆರ್ಸಿ ಕಾಯ್ದೆ ಬಗ್ಗೆ ಗೊತ್ತಾಗುತ್ತದೆ, ಇಸ್ರೇಲ್- ಪ್ಯಾಲೆಸ್ತೇನ್ ಗೊಂದಲವೂ ಅರ್ಥ ಆಗುತ್ತದೆ. ಆದರೆ, ಕೊರೋನಾ ಪರೀಕ್ಷೆಗೆ ಬಂದವರನ್ನು ಹೊಡೆದಿದ್ದು ಸರಿಯಲ್ಲ ಎಂಬುದು ಅರ್ಥವಾಗುವುದಿಲ್ಲವಾ. ಯಾವ ಕ್ಷೇತ್ರವೂ ಶಾಸಕರ, ಸಂಸದರ ಆಸ್ತಿಯಲ್ಲ. ಈ ಕ್ಷೇತ್ರ ನನ್ನದು ಎಂದು ಹೇಳಲು ಇದು ರಿಯಲ್ ಎಸ್ಟೇಟ್ ವ್ಯವಹಾರವಲ್ಲ. ಜಮೀರ್ ಅಹಮದ್ ಗೆ ಯಾರೂ ಚಾಮರಾಜಪೇಟೆಯನ್ನು ಬರೆದುಕೊಟ್ಟಿಲ್ಲ. ತಮ್ಮ ಕರ್ತವ್ಯ ಮಾಡಲು ಹೋದವರ ಮೇಲೆ ಹಲ್ಲೆ ಮಾಡೋದು ಸರಿಯಾ, ಸರ್ಕಾರಿ ಕೆಲಸ ಪಾಲಿಸಲು ಜಮೀರ್ ಅಹಮದ್ ಅನುಮತಿ ಬೇಕಾ ಎಂದು ಪ್ರಶ್ನಿಸಿದರು.