ಚಿತ್ರದುರ್ಗ, ಸೆಪ್ಟೆಂಬರ್ 14: ಭೂ ಕಬಳಿಕೆ ಹಾಗೂ ಜಾತಿ ನಿಂದನೆ ಆರೋಪ ಎದುರಿಸುತ್ತಿರುವ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ಜೆಡಿಎಸ್ ಜಿಲ್ಲೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದೆ.
ಜಿಲ್ಲಾಧ್ಯಕ್ಷ ಎಂ.ಜಯಣ್ಣ ನೇತೃತ್ವದಲ್ಲಿ ಸಚಿವ ಡಿ.
ಸುಧಾಕರ್ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ದಲಿತರ ವಿರೋಧಿ ಸಚಿವರನ್ನು ಸಂಪುಟದಿಂದ ಕೈ ಬಿಡುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಎಂ.ಜಯಣ್ಣ, ರಾಜ್ಯದಲ್ಲಿ ಪುಂಖಾನುಪುಂಖವಾಗಿ ದಲಿತರ, ಮಹಿಳೆಯರ ಪರ ಎಂದು ಹೇಳಿಕೊಳ್ಳುವ ಮುಖ್ಯಮಂತ್ರಿಗಳು ಸುಧಾಕರ್ ಅವರಿಂದ ರಾಜೀನಾಮೆ ಪಡೆಯಬೇಕು. ದಲಿತರ ಮಹಿಳೆಯರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಈಗಾಗಲೇ ಎಲ್ಲಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನನ್ನದಲ್ಲ. ಮಾಧ್ಯಮಗಳಲ್ಲಿ ಮಿಮಿಕ್ರಿಯೆ ಮಾಡಿ ತೋರಿಸಿದ್ದಾರೆ ಎಂದು ಸಚಿವರು ಸಮರ್ಥಿಸಿ ಕೊಳ್ಳುವುದು ಭಂಡತನ ಎಂದರು.
ತಾಲೂಕಿನಲ್ಲಿ ಧೀಮಂತ ನಾಯಕರಾದ ದಿ ಕೆಎಚ್. ರಂಗನಾಥ್, ಡಿ ಮಂಜುನಾಥ್ ಇಂತಹ ನಾಯಕರು ಆಡಳಿತ ನಡೆಸಿರುವ ಕ್ಷೇತ್ರದಿಂದ ಆಯ್ಕೆಯಾಗಿ ಸಚಿವ ಡಿ. ಸುಧಾಕರ್ ರೌಡಿಯಂತೆ ವರ್ತಿಸಿದ್ದಾರೆ. ಇಂತಹ ಸಚಿವರನ್ನು ಸರ್ಕಾರ ರಕ್ಷಣೆ ಮಾಡುವುದು ಸರಿಯಲ್ಲ ಎಂದರು.
ನಗರದ ಆಸ್ಪತ್ರೆ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಡಿ.ಸುಧಾಕರ್ ಅವರನ್ನು ಸಚಿವ ಸ್ಥಾನದಿಂದ ಕೈ ಬಿಡದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಚಿತ್ರದುರ್ಗ ಜಿಲ್ಲಾ ಜೆಡಿಎಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ.ಯಶೋಧರ, ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಶಿವಶಂಕರ್, ತಾಲೂಕು ಅಧ್ಯಕ್ಷ ಹನುಮಂತರಾಯ, ಬಿದರಿಕೆರೆ ಚಿದಾನಂದ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು.
ಇನ್ನು ಹಿರಿಯೂರು ಮಾಜಿ ಶಾಸಕಿ ಕೆ.ಪೂರ್ಣಿಮಾ ಕೂಡ ಸಚಿವ ಡಿ.ಸುಧಾಕರ್ ರಾಜೀನಾಮೆಗೆ ಆಗ್ರಹಿಸಿದ್ದರು, ಇಲ್ಲವಾದರೆ ಹಿರಿಯೂರು ತಾಲೂಕಿನಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ದಲಿತರ ಹೆಸರಿನಲ್ಲಿ ರಾಜಕೀಯ ಮಾಡಿ, ಇಂದು ಅದೇ ನಮ್ಮ ದಲಿತ ಬಂಧುಗಳ ಮೇಲೆ ಜಾತಿನಿಂದನೆ ಹಾಗೂ ಭೂಕಬಳಿಕೆ ಮಾಡಿ ನ್ಯಾಯ ಕೇಳಲು ಬಂದ ಹೆಣ್ಣು ಮಕ್ಕಳ ಮೇಲೆ ನಿಮ್ಮ ದೌರ್ಜನ್ಯ ಹಾಗೂ ಗೂಂಡಾಗಿರಿ ಎಷ್ಟು ಸರಿ…? ಪ್ರಶ್ನೆ ಮಾಡಿದ್ದಾರೆ. ರಾಜ್ಯದ ಸಚಿವರಾದ ನಿಮ್ಮ ಬಾಯಿಯಲ್ಲಿ ಇಂಥ ಮಾತುಗಳು ಹಾಗೂ ಜನಸಾಮಾನ್ಯರ ಬಳಿ ನೀವು ನಡೆದುಕೊಳ್ಳುವ ರೀತಿ ತೀರ ಖಂಡನೀಯವಾಗಿದೆ. ಮುಖ್ಯಮಂತ್ರಿಗಳು ನಿಮ್ಮ ಸಂಪುಟದ ಸಚಿವರೊಬ್ಬರ ಮೇಲೆ ಅಟ್ರಾಸಿಟಿ ಎಫ್.ಐ.ಆರ್ ಆದರು ಕೂಡ ಇನ್ನೂ ಬಂಧನವಾಗಿಲ್ಲ ಹಾಗೂ ನ್ಯಾಯ ಕೇಳಲು ಹೋದ ಬಡ ಜನರ ಮೇಲೆ ಗೂಂಡಾಗಿರಿ ಮಾಡಿರುವ ನಿಮ್ಮ ಸಚಿವರ ಮೇಲೆ ನಿಮ್ಮ ಕ್ರಮವೇನು ಎಂದು ಪೂರ್ಣಿಮಾ ಶ್ರೀನಿವಾಸ್ ಮುಖ್ಯಮಂತ್ರಿಗಳನ್ನು ಪ್ರಶ್ನೆ ಮಾಡಿದ್ದರು.
ಇತ್ತ ಯಲಹಂಕದಲ್ಲಿ ನಡೆದಿದೆ ಎನ್ನಲಾದ ಜಾತಿ ನಿಂದನೆ ಹಾಗೂ ಭೂ ಕಬಳಿಕೆ ವಿಚಾರದಲ್ಲಿ ಸಚಿವ ಡಿ.ಸುಧಾಕರ್ ವಿರುದ್ಧದ ತನಿಖೆ ಚುರುಕುಗೊಂಡಿದೆ. ಈ ವಿಚಾರವಾಗಿ ಯಲಹಂಕ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಅಲ್ಲದೇ ಪ್ರಕರಣ ಸಂಬಂಧ ಸಚಿವರು ಸೇರಿದಂತೆ ಹಲವರಿಗೆ ನೋಟಿಸ್ ನೀಡಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ.